ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!

ಹಣ ಮತ್ತು ಗಾಂಜಾ ವಿಚಾರಕ್ಕಾಗಿ ಬೆಂಗಳೂರಿನ ಡೆಲಿವರಿ ಬಾಯ್ ವರುಣ್‌ನನ್ನು ಆತನ ಸ್ನೇಹಿತರೇ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಟ್ಟುಹಾಕಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Share this Video
  • FB
  • Linkdin
  • Whatsapp

ಹಾಸನ (ಮಾ.26): ಗಾಂಜಾ ನಶೆ ಹಾಗೂ ಹಣದ ವಿಚಾರಕ್ಕಾಗಿ ನಡೆದ ಭೀಕರ ಕೊಲೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ವರುಣ್ ಎಂಬ ಯುವಕ ತನ್ನದೇ ಸ್ನೇಹಿತರಿಂದ ಹತ್ಯೆಯಾಗಿದ್ದಾನೆ. ತಿಂಗಳಿಗೊಮ್ಮೆ ತನ್ನೂರಿಗೆ ಹೋಗುತ್ತಿದ್ದ ವರುಣ್, ಕಳೆದ ಬಾರಿ ಹೋದಾಗ ನಾಪತ್ತೆಯಾಗಿದ್ದ. 

ಸತ್ತಂತೆ ಕಥೆ ಕಟ್ಟಿದ್ದ ಹಾಸನದ ವಿವಾಹಿತೆ: ಪ್ರಿಯಕರ ಡೇವಿಡ್‌ಗೆ ಕೈ ಕೊಟ್ಟು ಗಂಡನ ಜೊತೆ ಹೋಗಲು ಒಪ್ಪಿದ ಪ್ರಿಯಾಂಕ!

ಮೂರು ದಿನಗಳ ನಂತರ ನಿರ್ಜನ ಪ್ರದೇಶದಲ್ಲಿ ಆತನ ಸುಟ್ಟ ಮೃತದೇಹ ಪತ್ತೆಯಾಗಿತ್ತು. ಪೊಲೀಸರ ತನಿಖೆಯಲ್ಲಿ ಹಂತಕ ಸ್ನೇಹಿತರ ಅಸಲಿ ಮುಖವಾಡ ಕಳಚಿದೆ. ವರುಣ್‌ನ ಸ್ನೇಹಿತ ಶಶಾಂಕ್, ಬೆಂಗಳೂರಿನಿಂದ ಗಾಂಜಾ (ಮಾಲ್) ತರುವಂತೆ ವರುಣ್ ಅಕೌಂಟ್‌ಗೆ 7 ಸಾವಿರ ರೂಪಾಯಿ ಹಾಕಿದ್ದ. ಆದರೆ ವರುಣ್ ಗಾಂಜಾವನ್ನೂ ತರದೆ, ಹಣವನ್ನೂ ಮರಳಿಸದೆ ಸತಾಯಿಸುತ್ತಿದ್ದ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಶಶಾಂಕ್ ಮತ್ತು ಗ್ಯಾಂಗ್, ವರುಣ್‌ನನ್ನು ಕಿಡ್ನ್ಯಾಪ್ ಮಾಡಿ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬೆಂಕಿ ಹಚ್ಚಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ನಶೆಯ ಹವ್ಯಾಸಕ್ಕೆ ಬಲಿಯಾದ ವರುಣ್ ಕುಟುಂಬ ಬೀದಿಗೆ ಬಿದ್ದಿದೆ.

Related Video