ಹಾಸನದಲ್ಲಿ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣವು, ಕೊಲೆ ಶಂಕೆ ಹುಟ್ಟಿಸಿದ್ದ ಈ ಘಟನೆಯು, ಪೊಲೀಸರ ತನಿಖೆ ಹಾಗೂ ಸಾಂತ್ವಾನ ಕೇಂದ್ರದ ಸಮಾಲೋಚನೆಯ ನಂತರ, ಪ್ರಿಯಾಂಕ ತನ್ನ ತಪ್ಪನ್ನು ಅರಿತು ಪತಿ ಮತ್ತು ಕುಟುಂಬದೊಂದಿಗೆ ಒಂದಾಗುವುದರೊಂದಿಗೆ ಸುಖಾಂತ್ಯ ಕಂಡಿದೆ.
ಹಾಸನ: ಮಹಿಳೆ ನಾಪತ್ತೆ ಪ್ರಕರಣವೆಂದು ಭಾರೀ ಚರ್ಚೆಗೆ ಕಾರಣವಾಗಿದ್ದ ಘಟನೆಯಲ್ಲಿ ಇದೀಗ ಸ್ಪೋಟಕ ತಿರುವು ಕಂಡುಬಂದಿದೆ. ನಾಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕ ಪ್ರಿಯಕರನ ಜೊತೆ ತೆರಳಿ ಸುಳ್ಳು ಸೀನ್ ಕ್ರಿಯೇಟ್ ಮಾಡಿ ಬಳಿಕ ಡೇವಿಡ್ ಮನೆಯಲ್ಲಿ ಪತ್ತೆಯಾಗಿದ್ದಳು. ಸಾಂತ್ವಾನ ಕೇಂದ್ರದಲ್ಲಿ ನಡೆದ ದೀರ್ಘ ಚರ್ಚೆಯ ಬಳಿಕ ಕೊನೆಗೂ ಗಂಡನ ಜೊತೆ ಮನೆ ಸೇರಲು ನಿರ್ಧರಿಸಿದ್ದಾಳೆ.
ಫೆಬ್ರವರಿ 12ರಂದು ಪ್ರಿಯಾಂಕ ಚಿಕ್ಕಮಗಳೂರಿಗೆ ಸಂಬಂಧಿಕರ ಮದುವೆಗೆ ತೆರಳಿದ್ದಳು. ಬಳಿಕ ಆಕೆ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾಳೆ ಎಂಬ ಆತಂಕ ಮನೆಮಂದಿಯನ್ನು ಕಾಡಿತ್ತು. ಈ ನಡುವೆ ಫೆಬ್ರವರಿ 14ರಂದು ಹಾಸನದ ಕಲ್ಕೆರೆ ಕೆರೆ ಬಳಿ ಪ್ರಿಯಾಂಕಳ ಬಟ್ಟೆ, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿತ್ತು. ಇದರಿಂದ ಕೊಲೆ ಶಂಕೆ ಉಂಟಾಗಿ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು.
ಡೇವಿಡ್ ಜೊತೆಗೆ ಪರಾರಿಗೂ ಮುನ್ನ ನಾಟವಾಡಿದ್ದ ಪ್ರಿಯಾಂಕಾ
ಪೊಲೀಸರು ತನಿಖೆ ತೀವ್ರಗೊಳಿಸಿದಾಗ, ಪ್ರಿಯಾಂಕ ಕೊಲೆಯಾಗಿದೆ ಎಂದು ಅಂದುಕೊಳ್ಳಲಿ ಎಂದು ನಾಟಕೀಯ ಸನ್ನಿವೇಶ ಸೃಷ್ಟಿಸಿ ತನ್ನ ಪ್ರಿಯಕರ ಡೇವಿಡ್ ಜೊತೆ ಕುಣಿಗಲ್ ಕಡೆ ತೆರಳಿರುವುದು ಗೊತ್ತಾಯ್ತು. ಅದೇ ದಿನ ರಾತ್ರಿ ಡೇವಿಡ್ ವಾಸವಿದ್ದ ಬಾಡಿಗೆ ಮನೆಯಲ್ಲಿ ಪ್ರಿಯಾಂಕ ಜೀವಂತವಾಗಿ ಪತ್ತೆಯಾಗಿದ್ದಳು. ಈ ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.
ಪೊಲೀಸರ ಮುಂದಾಳತ್ವದಲ್ಲಿ ಪ್ರಿಯಾಂಕನನ್ನು ಹಾಸನದ ಸಾಂತ್ವಾನ ಕೇಂದ್ರಕ್ಕೆ ಕರೆತರಲಾಯಿತು. ಅಲ್ಲಿಗೆ ಪತಿ ರುದ್ರೇಶ್ ಕೂಡ ಆಗಮಿಸಿದ್ದು, ಮೊದಲು ಗಂಡನ ಜೊತೆ ಹೋಗುವುದಕ್ಕೆ ನಿರಾಕರಿಸಿದ್ದ ಪ್ರಿಯಾಂಕ. ಇದೀಗ ಹಲವು ದಿನಗಳ ನಂತರ ಒಪ್ಪಿಗೆ ಸೂಚಿಸಿದ್ದಾಳೆ. ಪೊಲೀಸರ ಪರ್ಮಿಷನ್ ಪಡೆದು ಪತಿ ರುದ್ರೇಶ್ ಪತ್ನಿ ಪ್ರಿಯಾಂಕ ಜೊತೆ ಮಾತನಾಡಿದ್ದರು. ಸುಮಾರು ಒಂದೂವರೆ ಗಂಟೆ ಪತಿ ರುದ್ರೇಶ್ ಜೊತೆ ಪ್ರಿಯಾಂಕ ಚರ್ಚೆ ನಡೆಸಿದ್ದಳು. ಹಾಸನ ಸಾಂತ್ವಾನ ಕೇಂದ್ರ ದಲ್ಲಿ ಪತಿ-ಪತ್ನಿ ಮುಕ್ತ ಮಾತುಕತೆ ನಡೆಸಿದ್ದರು. ತಪ್ಪಿನ ಅರಿವಾಗಿ ಪತಿ ರುದ್ರೇಶ್ ಜೊತೆ ಮನೆ ಸೇರಲು ಪ್ರಿಯಾಂಕ ಮುಂದಾಗಿದ್ದಾಳೆ.
ಸಾಂತ್ವಾನ ಕೇಂದ್ರದಿಂದ ತವರುಮನೆಗೆ ಹೋದ ಪ್ರಿಯಾಂಕಾ
ಮಗ ಹಾಗೂ ಕುಟುಂಬದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಪತಿ ರುದ್ರೇಶ್ ಪ್ರಿಯಾಂಕಳ ತಪ್ಪನ್ನು ಮನ್ನಿಸಿ ಮತ್ತೆ ಜೊತೆಯಾಗಿ ಬದುಕಲು ನಿರ್ಧರಿಸಿದ್ದಾನೆ. ಇದರಿಂದ ಪ್ರಭಾವಿತಳಾದ ಪ್ರಿಯಾಂಕ, ಪ್ರಿಯಕರ ಡೇವಿಡ್ ಜೊತೆ ಹೋಗುವ ನಿರ್ಧಾರವನ್ನು ಕೈಬಿಟ್ಟು, ಗಂಡನ ಜೊತೆ ಜೀವನ ಮುಂದುವರಿಸಲು ಒಪ್ಪಿಗೆ ನೀಡಿದ್ದಾಳೆ. ಕೊನೆಗೂ ಸಾಂತ್ವಾನ ಕೇಂದ್ರದಿಂದ ಪ್ರಿಯಾಂಕ ತನ್ನ ತವರು ಮನೆಗೆ ತೆರಳಿದ್ದು, ಅಲ್ಲಿಂದ ಗಂಡನ ಮನೆ ಸೇರಲು ತೀರ್ಮಾನಿಸಿದ್ದಾಳೆ. ಆರಂಭದಲ್ಲಿ ಪ್ರಿಯಕರನ ಜೊತೆ ಹೋಗಲು ಮನಸ್ಸು ಮಾಡಿದ್ದ ಪ್ರಿಯಾಂಕ, ಈಗ ತನ್ನ ತಪ್ಪಿನ ಅರಿವಾಗಿ ಕುಟುಂಬ ಮತ್ತು ಮಗನ ಭವಿಷ್ಯದ ದೃಷ್ಟಿಯಿಂದ ಗಂಡನ ಜೊತೆ ಬದುಕುವ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಕೊನೆಗೆ ಕುಟುಂಬ ಮೌಲ್ಯಗಳಿಗೆ ಆದ್ಯತೆ ನೀಡಿದ ನಿರ್ಧಾರದಿಂದ ಪ್ರಕರಣ ಅಂತ್ಯ ಕಂಡಿದೆ.


