
ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್ ಜೊತೆ ಪಿವೋಟ್ ಚಿತ್ರ ರಿಲೀಸ್!
ಜೀ ಕನ್ನಡ ವಾಹಿನಿಯಲ್ಲಿ ಮತ್ತೊಂದು ಕಲರ್ಫುಲ್ ಧಾರಾವಾಹಿಯ ಪ್ರಸಾರ ಆರಂಭಗೊಂಡಿದೆ. 'ಆದಿ-ಲಕ್ಷ್ಮಿ'ಯ ಪುರಾಣ ಧಾರಾವಾಹಿ ಹಳ್ಳಿ ಹುಡುಗಿ ಲಕ್ಷಿ, ಸಿಟಿ ಹುಡುಗ ಆದಿ ನಡುವಿನ ಕಥೆಯನ್ನ ಪ್ರೇಕ್ಷಕರ ಮುಂದೆ ತಂದಿದೆ.
ಜೀ ಕನ್ನಡ ವಾಹಿನಿಯಲ್ಲಿ ಮತ್ತೊಂದು ಕಲರ್ಫುಲ್ ಧಾರಾವಾಹಿಯ ಪ್ರಸಾರ ಆರಂಭಗೊಂಡಿದೆ. 'ಆದಿ-ಲಕ್ಷ್ಮಿ'ಯ ಪುರಾಣ ಧಾರಾವಾಹಿ ಹಳ್ಳಿ ಹುಡುಗಿ ಲಕ್ಷಿ, ಸಿಟಿ ಹುಡುಗ ಆದಿ ನಡುವಿನ ಕಥೆಯನ್ನ ಪ್ರೇಕ್ಷಕರ ಮುಂದೆ ತಂದಿದೆ. ಮೊದಲ ಭೇಟಿಯಲ್ಲೇ ಆದಿಯಿಂದ ತಿರಸ್ಕರಿಸಲ್ಪಟ್ಟ ಲಕ್ಷ್ಮಿ ಪುನಃ ಆತನ ಜಗತ್ತಿಗೆ ಹೇಗೆ ಮರಳಿ ಬರ್ತಾಳೆ ಅನ್ನೋ ಇನ್ಟ್ರೆಸ್ಟಿಂಗ್ ಕಥೆ ಈ ಸೀರಿಯಲ್ ನಲ್ಲಿದ್ದು, ರಜನೀಶ್ ಮತ್ತು ಆಶಾ ಆದಿ ಮತ್ತು ಲಕ್ಷ್ಮಿ ಪಾತ್ರ ನಿರ್ವಹಿಸ್ತಾ ಇದ್ದಾರೆ. ಸೋಮವಾರದಿಂದ ಪ್ರಸಾರ ಆರಂಭಿಸಿರುವ ಈ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 9 ಕ್ಕೆ ಪ್ರಸಾರವಾಗ್ತಾ ಇದೆ.
ತೀರ್ಥರೂಪ ತಂದೆಯವರಿಗೆ ಟ್ರೇಲರ್ ರಿಲೀಸ್: ತೀರ್ಥರೂಪ ತಂದೆಯವರಿಗೆ ಸಿನಿಮಾ ಮೂಲಕ ಎಮೋಷನ್ ಕಥೆ ಹೇಳಲು ಹೊರಟಿದ್ದಾರೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಬದುಕಿನಲ್ಲಾದ ಒಂದು ಚಿಕ್ಕ ತಪ್ಪು ಕುಟುಂಬವನ್ನ ಎಷ್ಟು ದೂರು ಮಾಡುತ್ತದೆ. ಅದು ಒಂದಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಆಶಯದ ಜೊತೆಗೆ ತಂದೆ ತಾಯಿ ಮೌಲ್ಯಗಳನ್ನು ಸಾರುವ ಸಿನಿಮಾ ಇದು. ನಟಿ ಸಿತಾರಾ ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಾಯಕನಾಗಿ ನಿಹಾರ್ ಮುಖೇಶ್ ನಟಿಸಿದ್ದು, ನಾಯಕಿಯಾಗಿ ರಚನಾ ಇಂದರ್ ಅಭಿನಯಿಸಿದ್ದಾರೆ. ರಾಜೇಶ್ ನಟರಂಗ, ರವೀಂದ್ರ ವಿಜಯ್, ಅಜಿತ್ ಹಂಡೆ ಸೇರಿದಂತೆ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ತೀರ್ಥರೂಪ ತಂದೆಯವರಿಗೆ' ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಚಿತ್ರೀಕರಣಗೊಂಡಿದೆ. ಜನವರಿ 1ರಂದು ಚಿತ್ರ ಬಿಡುಗಡೆ ಆಗುತ್ತಿದೆ.
'ಪೀಟರ್' ಚಿತ್ರದ ಎಮೋಷನ್ ಸಾಂಗ್ ರಿಲೀಸ್: ದೂರದರ್ಶನ ಸಿನಿಮಾ ಖ್ಯಾತಿಯ ನಿರ್ದೇಶಕ ಸುಕೇಶ್ ಶೆಟ್ಟಿ ಅವರ ಎರಡನೇ ಸಿನಿಮಾ ಪೀಟರ್.. ಟೈಟಲ್, ಹಾಡಿನ ಮೂಲಕ ಕುತೂಹಲ ಹೆಚ್ಚಿಸಿದ್ದ ಪೀಟರ್ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಎಲ್ಲೆಡೆ ಅದ್ಬುತ ಪ್ರಶಂಸೆ ಪಡೆದಿದೆ. ಇದೀಗ ಪೀಟರ್ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಗಿದೆ. ಪೀಟರ್ ಸಿನಿಮಾದಲ್ಲಿ ರಾಜೇಶ್ ಧ್ರುವ, ಜಾನ್ವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ, ವರುಣ್ ಪಟೇಲ್, ದೀನಾ ಪೂಜಾರಿ, ಭರತ್ ತಾರಾಬಳಗದಲ್ಲಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ಚಿತ್ರ ನಿರ್ಮಿಸಿದ್ದಾರೆ.
ಡೆವಿಲ್ ಜೊತೆ ಪಿವೋಟ್ ಚಿತ್ರ ರಿಲೀಸ್: ಕನ್ನಡದಲ್ಲಿ ಪಿವೋಟ್ ಅನ್ನೋ ಸಿನಿಮಾ ಬರುತ್ತಿದೆ. ಸಾಮಾನ್ಯವಾಗಿ ಕುಡುಕರಿಗೆ ಪಿವೋಟ್ ಅಂತ ಕರೀತಾರೆ. ಇದೀಗ ಇದೇ ಡಿಸೆಂಬರ್ 12ಕ್ಕೆ ಪಿವೋಟ್ ಸಿನಿಮಾ ಬಿಡುಗಡೆ ಆಗುತ್ತಿದೆ. ಡೆಸೆಂಬರ್ 11ರಂದು ನಟ ದರ್ಶನ್ ಅಭಿನಯಿಸಿರೋ ಡೆವಿಲ್ ಸಿನಿಮಾ ಬಿಡುಗಡೆ ಆಗುತ್ತಿದ್ದು, ಆ ಸಿನಿಮಾದ ಜೊತೆಗೆ ಪಿವೋಟ್ ಕೂಡ ತೆರೆ ಕಾಣುತ್ತಿದೆ. ಈ ಸಿನಿಮಾ ಮೇಲೆ ನಂಬಿಕೆ ಇಟ್ಟು ಲಹರಿ ಕಂಪನಿ ಮ್ಯೂಸಿಕ್ ರೈಟ್ಸ್ ಪಡೆದುಕೊಂಡಿದೆ. ಪಿವೋಟ್ ಚಿತ್ರಕ್ಕೆ ಕಾರ್ತಿಕ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದು, ಲಿಖಿತ್ , ಹಾಗು ಅಶ್ವಿನಿ ಚಾವರೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಖೈದಿ ಪ್ರೇಮಿ ಚಿತ್ರದ ಮುಹೂರ್ತ ಸಮಾರಂಭ: ರಾಯಚೂರು ಮೂಲದ ಯುವಕರ ತಂಡವೊಂದು ವಿಭಿನ್ನ ಕಾನ್ಸೆಪ್ಡ್ ಇಟ್ಟುಕೊಂಡು ಖೈದಿಪ್ರೇಮಿ ಎಂಬ ಚಿತ್ರ ಮಾಡಲು ಹೊರಟಿದೆ. ಮರುಜನ್ಮ ಮೂವೀಸ್ ನಿರ್ಮಾಣದ ಈ ಚಿತ್ರಕ್ಕೆ ವಂಶಿ ಎಡೆದೊರೆ ಕಥೆ, ಚಿತ್ರಕಥೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಖೈದಿಪ್ರೇಮಿ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆದಿದ್ದು ಪ್ರಥಮ ದೃಶ್ಯಕ್ಕೆ ಥ್ರಿಲ್ಲರ್ ಮಂಜು ಕ್ಲಾಪ್ ಮಾಡಿದರೆ, ನಿರ್ದೇಶಕ ವಸಂತ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಎಂ.ತಿಲಕ್ ಈ ಚಿತ್ರದ ನಾಯಕನಾಗಿದ್ದು ಚಿತ್ರದ ನಿರ್ಮಾಣದ ಹೊಣೆ ಕೂಡ ಹೊತ್ತಿದ್ದಾರೆ.