Asianet Suvarna News Asianet Suvarna News

ಮೋದಿ, ಶಾ ಯಾರೇ ಬರಲಿ, ಕೋಲಾರದಲ್ಲಿ ಗೆಲವು ನನ್ನದೇ: ಸಿದ್ದರಾಮಯ್ಯ ಗುಟುರು

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಬಂದು, ಏನೇ ಮಾಡಿದರೂ‌ ನಾನು ಗೆಲ್ಲುತ್ತೇನೆ. ಬದಾಮಿಯಲ್ಲೂ ನನ್ನನ್ನು ಸೋಲಿಸಲು ಅಮಿತ್ ಶಾ ಬಂದಿದ್ದರು. ಅಶೋಕ್ ಪಟ್ಟಣಶೆಟ್ಟಿ ಬದಲು ಶ್ರೀ ರಾಮುಲು ನಿಲ್ಲಿಸಿದರು. ಆದರೂ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗುಟುರು ಹಾಕಿದ್ದಾರೆ.

ಮೈಸೂರು (ಜ.21): ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಬಂದು, ಏನೇ ಮಾಡಿದರೂ‌ ನಾನು ಗೆಲ್ಲುತ್ತೇನೆ. ಬದಾಮಿಯಲ್ಲೂ ನನ್ನನ್ನು ಸೋಲಿಸಲು ಅಮಿತ್ ಶಾ ಬಂದಿದ್ದರು. ಅಶೋಕ್ ಪಟ್ಟಣಶೆಟ್ಟಿ ಬದಲು ಶ್ರೀ ರಾಮುಲು ನಿಲ್ಲಿಸಿದರು. ಆದರೂ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗುಟುರು ಹಾಕಿದ್ದಾರೆ.

ನಾನು ಅಲ್ಲಿ ಪ್ರಚಾರಕ್ಕೆ ಹೋಗಿದ್ದು ಎರಡೇ ದಿನ. ನಾನು ಬದಾಮಿ ಕ್ಷೇತ್ರ ಬದಲಾಯಿಸಿದ್ದು ದೂರ ಅನ್ನೋ ಕಾರಣಕ್ಕೆ. ನಾನು ಅಲ್ಲಿ ನಿಂತರೆ ಸೋಲುತ್ತೀನಿ ಅಂತಾ ಅಲ್ಲ.  ಬದಾಮಿ ಜನ ಹೆಲಿಕ್ಯಾಪ್ಟರ್ ಕೊಡಿಸುತ್ತೇವೆ ಅಂದರು. ನಾನೇ ಬೇಡ ಎಂದು ಕೋಲಾರದಿಂದ ಸ್ಪರ್ಧೆ ಮಾಡಲು ಸಿದ್ಧವಾಗಿದ್ದೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕ್ಷೇತ್ರ ಹತ್ತಿರವಾಗುತ್ತದೆ ಎನ್ನುವ ದೃಷ್ಟಿಯಿಂದ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ನಾವು 130 ಸ್ಥಾನ ಗೆಲ್ಲುತ್ತೇವೆ. ಅದು 150 ಆದರೂ ಆಗಬಹುದು ಎಂದು ತಿಳಿಸಿದರು. 

ಕೋಲಾರದಲ್ಲಿ ಸಿದ್ದುಗಾಗಿ ಮನೆ ಹುಡುಕಾಟ: ಇತ್ತ ಟಗರು ಬೇಟೆಗೆ ಕೇಸರಿ ಖೆಡ್ಡಾ

ರಾಜ್ಯದ ಜನ ಕಾಂಗ್ರೆಸ್ ಅಧಿಕಾರದಲ್ಲಿ ಆಗಿದ್ದ ಕೆಲಸಗಳ ಬಗ್ಗೆ ತಿಳಿದುಕೊಂಡಿದ್ದಾರೆ. ನಾವು ಹಿಂದೆ ಪ್ರಣಾಳಿಕೆಯಲ್ಲಿ ಹೇಳಿದ್ದ ಶೇಕಡ 99 ರಷ್ಟು ಕೆಲಸ ಮಾಡಿದ್ದೇವೆ. ಈಗಲೂ 200 ಯುನಿಟ್ ಉಚಿತ ವಿದ್ಯುತ್, ಕುಟುಂಬ ಮುಖ್ಯಸ್ಥೆಗೆ ತಿಂಗಳು 2 ಸಾವಿರ ಹಣ ನೀಡುವುದಾಗಿ ಘೊಷಣೆ ಮಾಡಿದ್ದೇವೆ. ಇನ್ನೂ ಹಲವು ಘೋಷಣೆ ಮಾಡಲಿದ್ದೇವೆ. ಇವುಗಳು ಚುನಾವಣೆಯಲ್ಲಿ ನಮ್ಮ ಕೈ ಹಿಡಿಯುತ್ತವೆ. ಯಾರು ಏನೇ ಹೇಳಿದರೂ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಸತ್ಯ ಎಂದರು.

ಮೋದಿ ಸರ್ಟಿಫಿಕೇಟ್‌ ಅನಗತ್ಯ:
ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೋದಿ ಸರ್ಟಿಫಿಕೇಟ್ ಅನಗತ್ಯ. ರಾಜ್ಯದಲ್ಲಿ ಪಿಎಸ್‌ಐ ಹಗರಣ ನಡೆದಿರುವುದು ಸುಳ್ಳಾ ? ಎಡಿಜಿಪಿ ಜೈಲು ಸೇರಿರುವುದು ಸುಳ್ಳಾ ? ಏನು ಆಗಿಲ್ಲ ಅಂದರೆ ಆತ ಇನ್ನು ಏಕೆ ಜೈಲಿನಲ್ಲಿದ್ದಾನೆ ? ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ರಾಜ್ಯಕ್ಕೆ ಪದೇ ಪದೇ ಬಿಜೆಪಿ ಕೇಂದ್ರ ನಾಯಕರ ಭೇಟಿ. ಯಾರು ಬಂದರೂ ಏನು ಪ್ರಯೋಜನ ಇಲ್ಲ. ನಡ್ಡಾಗೂ ರಾಜ್ಯಕ್ಕೂ ಏನು ಸಂಬಂಧ. ಅವರು ಏಕೆ ರಾಜ್ಯಕ್ಕೆ ಬರುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದರು. 

Video Top Stories