ಕಿಚ್ಚ ಸುದೀಪ್ ಪುತ್ರಿ, ಗಾಯಕಿ ಸಾನ್ವಿ ಸುದೀಪ್‌ ಕೂಡ ಸೇರ್ಪಡೆಯಾಗಿದ್ದಾರೆ. ‘ಟಾಕ್ಸಿಕ್‌’ನಲ್ಲಿ ಯಶ್‌ ಅವರ ಅಭಿನಯಕ್ಕೆ ಫಿದಾ ಆಗಿರುವ ಸಾನ್ವಿ, ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಅದರ ಬಗ್ಗೆಯೇ ಚರ್ಚೆ ಜೋರಾಗಿದೆ. ಚಿತ್ರದ ಅದ್ಧೂರಿ ಮೇಕಿಂಗ್‌, ವಿಶ್ಯುವಲ್ಸ್‌, ತಾಂತ್ರಿಕ ಶ್ರೀಮಂತಿಕೆ ಹಾಗೂ ಯಶ್‌ ಅವರ ವಿಭಿನ್ನ ಆವತಾರಕ್ಕೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಚಿತ್ರವನ್ನು ವೀಕ್ಷಿಸಿರುವ ಕನ್ನಡ ಚಿತ್ರರಂಗದ ಹಲವು ಪ್ರಮುಖರು ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ರಿಷಬ್‌ ಶೆಟ್ಟಿ, ರಕ್ಷಿತಾ ಪ್ರೇಮ್‌, ಗಾಯಕ ವಿಜಯ್‌ ಪ್ರಕಾಶ್‌ ಸೇರಿದಂತೆ ಹಲವರು ಸಿನಿಮಾದ ಗ್ರ್ಯಾಂಡ್‌ನೆಸ್‌ ಮತ್ತು ಮೇಕಿಂಗ್‌ ಶೈಲಿಯನ್ನು ಕೊಂಡಾಡಿದ್ದಾರೆ. ಇದೇ ವೇಳೆ ಕಿಚ್ಚ ಸುದೀಪ್‌ ಕೂಡ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಯಶ್‌ ಅವರ ಪ್ರಯೋಗಶೀಲತೆ ಹಾಗೂ ಸಿನಿಮಾಗಾಗಿ ಪಟ್ಟಿರುವ ಶ್ರಮವನ್ನು ಶ್ಲಾಘಿಸಿದ್ದಾರೆ.

ಈ ಮೆಚ್ಚುಗೆಗಳ ಸಾಲಿಗೆ ಇದೀಗ ಸುದೀಪ್‌ ಪುತ್ರಿ, ಗಾಯಕಿ ಸಾನ್ವಿ ಸುದೀಪ್‌ ಕೂಡ ಸೇರ್ಪಡೆಯಾಗಿದ್ದಾರೆ. ‘ಟಾಕ್ಸಿಕ್‌’ನಲ್ಲಿ ಯಶ್‌ ಅವರ ಅಭಿನಯಕ್ಕೆ ಫಿದಾ ಆಗಿರುವ ಸಾನ್ವಿ, ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಯಶ್‌ ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಮಾಡಿದ್ದಾರೆ!

ಯಶ್‌ ಅವರ ಪರ್ಫಾರ್ಮೆನ್ಸ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಸಾನ್ವಿ, 'ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಮಾಡಿದ ಸಾಧನೆಯನ್ನ ಅದ್ಬುತ ಎಂಬ ಒಂದೇ ಪದದಲ್ಲಿ ಬಣ್ಣಿಸಲು ಖಂಡಿತವಾಗಿ ಸಾಧ್ಯವಿಲ್ಲ. ಅವರು ಕೇವಲ ಅಭಿನಯಿಸಿಲ್ಲ, ಬದಲಿಗೆ ಸಿನಿಮಾದ ಪ್ರತಿಯೊಂದು ಫ್ರೇಮ್‌ನಲ್ಲೂ ತಮ್ಮದೇ ಮ್ಯಾಜಿಕ್ ಮಾಡಿದ್ದಾರೆ. ಸಿನಿಮಾ ಮುಗಿದು ಎಂಡ್ ಕ್ರೆಡಿಟ್ಸ್ ಬಂದ ಮೇಲೆಯೂ ಮನಸ್ಸಿನಲ್ಲಿ ಹಾಗೇ ಉಳಿದುಕೊಳ್ಳುವಂತಹ ಅಭಿನಯ ಅವರದ್ದು. ತಾನೊಬ್ಬ ಎಷ್ಟು ಶ್ರೇಷ್ಠ ಹಾಗೂ ಕೌಶಲಪೂರ್ಣ ನಟ ಎಂಬುದನ್ನ ಅವರು ನಿಜವಾಗಿಯೂ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, ಸಿನಿಮಾ ಮುಗಿದ ಬಳಿಕವೂ ಮನಸ್ಸಿನಲ್ಲಿ ಉಳಿಯುವಂತಹ ಅಭಿನಯ ಯಶ್‌ ಅವರದ್ದು ಎಂದು ಸಾನ್ವಿ ಹೇಳಿದ್ದಾರೆ. ಈ ಸಿನಿಮಾದ ಮೂಲಕ ಯಶ್‌ ತಾವು ಎಂತಹ ಅದ್ಭುತ ನಟ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂಬುದು ಅವರ ಪೋಸ್ಟ್‌ನ ಸಾರ.

ಯಶ್‌ ಅವರ ಮಾಸ್‌ ಆವತಾರಕ್ಕೆ ಈಗಾಗಲೇ ಅಭಿಮಾನಿಗಳು ಫಿದಾ ಆಗಿದ್ದು, ಇದೀಗ ಸಾನ್ವಿ ಸುದೀಪ್‌ ಅವರ ಈ ಮೆಚ್ಚುಗೆಯೂ ಗಮನ ಸೆಳೆಯುತ್ತಿದೆ. ಅದರಲ್ಲೂ ಸುದೀಪ್‌ ಅವರೇ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಪುತ್ರಿಯೂ ಯಶ್‌ ಅವರ ಅಭಿನಯವನ್ನು ವಿಶೇಷವಾಗಿ ಹೊಗಳಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ, ‘ಟಾಕ್ಸಿಕ್‌’ನಲ್ಲಿ ಯಶ್‌ ಅವರ ಅಭಿನಯ ಮತ್ತು ಆವತಾರ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸಾನ್ವಿ ಸುದೀಪ್‌ ಅವರ ಈ ಮಾತುಗಳು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.