ಸೆಪ್ಟೆಂಬರ್ ತಿಂಗಳ ಮಳೆಯು ಭಾರತದ ಹಣದುಬ್ಬರದ ಭವಿಷ್ಯವನ್ನು ನಿರ್ಧರಿಸಲಿದ್ದು, ಮಳೆ ಕೊರತೆ ಮತ್ತು ಎಲ್ ನಿನೋ ಪರಿಸ್ಥಿತಿಗಳು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಯೂನಿಯನ್ ಬ್ಯಾಂಕ್ ವರದಿಯ ಪ್ರಕಾರ, ದುರ್ಬಲ ಮುಂಗಾರು ಕೃಷಿ ಇಳುವರಿಯನ್ನು ಕಡಿಮೆ ಮಾಡಿ, 2027ನೇ ಹಣಕಾಸು ವರ್ಷದಲ್ಲಿ ಸಿಪಿಐ ಹಣದುಬ್ಬರವನ್ನು ಶೇ. 5.5ಕ್ಕಿಂತ ಹೆಚ್ಚಿಸಬಹುದು.

ಎಲ್‌ ನಿನೋ ಎಫೆಕ್ಟ್‌ನಿಂದಾಗ ಈ ಬಾರಿ ಮುಂಗಾರು ಮಳೆ ತೀವ್ರ ಕೊರತೆಯಾಗಿದೆ. ಕಳೆದ ಮೂರು ತಿಂಗಳಲ್ಲಿ ಒಟ್ಟಾರೆ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿದೆ. ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಆಗುವ ಮಳೆಯ ಮೇಲೆ ಭಾರತದ ಹಣದುಬ್ಬರದ ಭವಿಷ್ಯ ನಿಂತಿದೆ. ಒಂದು ವೇಳೆ ನೈಋತ್ಯ ಮುಂಗಾರಿನ ಕೊನೆಯ ತಿಂಗಳಲ್ಲೂ ಮಳೆ ಕೊರತೆ ಮುಂದುವರಿದರೆ, ಎಲ್ ನಿನೋ ಪರಿಸ್ಥಿತಿ ಖಚಿತವಾದರೆ, 2027ನೇ ಹಣಕಾಸು ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (CPI) ಹಣದುಬ್ಬರ ಶೇ. 5.5 ಅಥವಾ ಅದಕ್ಕಿಂತ ಹೆಚ್ಚಾಗಬಹುದು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವರದಿಯಲ್ಲಿ ಈ ಎಚ್ಚರಿಕೆ ನೀಡಿದೆ.

ಕೃಷಿ ಮೇಲೆ ಮುಂಗಾರಿನ ಪ್ರಭಾವ

ಗುರುವಾರದ ವರದಿ ಪ್ರಕಾರ, ಮುಂಗಾರು ಮಳೆ ದೀರ್ಘಾವಧಿ ಸರಾಸರಿಗಿಂತ ಶೇ. 13ರಷ್ಟು ಕಡಿಮೆಯಾಗಿದೆ. ಆದರೆ, ಖಾರಿಫ್ ಬಿತ್ತನೆ ಚೇತರಿಸಿಕೊಂಡಿದೆ ಎಂದು ಬ್ಯಾಂಕ್‌ನ ಸಂಶೋಧನಾ ವರದಿ ಹೇಳಿದೆ. ಬೆಳೆ ಇಳುವರಿ, ಮಣ್ಣಿನ ತೇವಾಂಶ ಮತ್ತು ಮುಂಬರುವ ರಬಿ ಹಂಗಾಮಿಗೆ ಬೇಕಾದ ನೀರಿನ ಲಭ್ಯತೆಗೆ ಸೆಪ್ಟೆಂಬರ್ ಮಳೆ ನಿರ್ಣಾಯಕವಾಗಲಿದೆ. ಭಾರತದ ಹಣದುಬ್ಬರದ ದೃಷ್ಟಿಕೋನವು ಈಗ ಮುಂಗಾರಿನ ಕೊನೆಯ ಹಂತದ ಸೆಪ್ಟೆಂಬರ್ ಮಳೆ ಭವಿಷ್ಯವನ್ನೇ ಅವಲಂಬಿಸಿದೆ ಎಂದು ವರದಿ ಹೇಳಿದೆ.

ಮುಂಗಾರು ಆರಂಭದಲ್ಲಿದ್ದ ಬಿತ್ತನೆ ಕೊರತೆಗೆ ಹೋಲಿಸಿದರೆ, ಖಾರಿಫ್ ಬಿತ್ತನೆ ಈಗ ಗಣನೀಯವಾಗಿ ಚೇತರಿಸಿಕೊಂಡಿದೆ. ಆಗಸ್ಟ್ 21ರ ಹೊತ್ತಿಗೆ, ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ಕೇವಲ ಶೇ. 1.5ರಷ್ಟು ಮಾತ್ರ ಕಡಿಮೆಯಾಗಿದೆ. ಜುಲೈ ಮಧ್ಯದಲ್ಲಿ ಈ ಕೊರತೆ ಶೇ. 16ರಷ್ಟಿತ್ತು. ಕಳೆದ ವರ್ಷ 107.3 ದಶಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ಈ ವರ್ಷ ಸುಮಾರು 105.7 ದಶಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ, ಬಿತ್ತನೆ ಪ್ರಮಾಣ ಒಂದೇ ಅಂತಿಮ ಕೃಷಿ ಫಲಿತಾಂಶವನ್ನು ನಿರ್ಧರಿಸುವುದಿಲ್ಲ ಎಂದು ವರದಿ ಎಚ್ಚರಿಸಿದೆ. ಏಕೆಂದರೆ ಬೆಳೆಗಳ ಬೆಳವಣಿಗೆ ಮತ್ತು ಕೊಯ್ಲಿನ ಸಮಯದಲ್ಲಿ ಮಳೆ ಕೊರತೆ ಮುಂದುವರಿದರೆ, ವಿಶೇಷವಾಗಿ ಮಳೆ-ಆಧಾರಿತ ಪ್ರದೇಶಗಳಲ್ಲಿ ಇಳುವರಿಯ ಮೇಲೆ ಪರಿಣಾಮ ಬೀರಬಹುದು. ಕಡಿಮೆ ಮಣ್ಣಿನ ತೇವಾಂಶವು ರಬಿ ಬೆಳೆಯ ಮೇಲೂ ಪರಿಣಾಮ ಬೀರಲಿದೆ.

ಪ್ರಾದೇಶಿಕ ಕೊರತೆ ಮತ್ತು ಜಲಾಶಯಗಳ ಮಟ್ಟ

ಮಳೆ ಕೊರತೆಯು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ವಾಯುವ್ಯ ಭಾಗದಲ್ಲಿ ಶೇ. 10, ದಕ್ಷಿಣ ಭಾಗದಲ್ಲಿ ಶೇ. 22 ಹಾಗೂ ಪೂರ್ವ ಮತ್ತು ಈಶಾನ್ಯ ಭಾಗದಲ್ಲಿ ಶೇ. 27ರಷ್ಟು ಮಳೆ ಕೊರತೆ ಇದೆ. ರಾಜ್ಯ ಮಟ್ಟದಲ್ಲಿ ನೋಡಿದರೆ, ಗುರುವಾರದ ಹೊತ್ತಿಗೆ ಆಂಧ್ರಪ್ರದೇಶದಲ್ಲಿ ಶೇ. 40 ಮತ್ತು ಬಿಹಾರದಲ್ಲಿ ಶೇ. 42ರಷ್ಟು ಮಳೆ ಕೊರತೆ ದಾಖಲಾಗಿದೆ.

ಜಲಾಶಯಗಳಲ್ಲಿನ ನೀರಿನ ಮಟ್ಟ ಸ್ವಲ್ಪ ಸಮಾಧಾನ ತಂದಿದೆ. ಕೇಂದ್ರ ಜಲ ಆಯೋಗದ ನಿಗಾದಲ್ಲಿರುವ 176 ಜಲಾಶಯಗಳಲ್ಲಿ ಆಗಸ್ಟ್ 20ರ ಹೊತ್ತಿಗೆ ಸುಮಾರು 117 ಶತಕೋಟಿ ಕ್ಯೂಬಿಕ್ ಮೀಟರ್ ನೀರಿದೆ. ಇದು ಒಟ್ಟು ಸಂಗ್ರಹ ಸಾಮರ್ಥ್ಯದ ಶೇ. 64ರಷ್ಟಾಗಿದೆ. ಆದರೂ, ಇದು ಕಳೆದ ವರ್ಷದ ಮಟ್ಟಕ್ಕಿಂತ ಶೇ. 18ರಷ್ಟು ಕಡಿಮೆಯಾಗಿದೆ. ಉತ್ತರ ಮತ್ತು ದಕ್ಷಿಣ ಭಾಗದ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಿದೆ.

ಹಣದುಬ್ಬರ ಮುನ್ಸೂಚನೆ ಮತ್ತು ಆರ್ಥಿಕ ಅಪಾಯಗಳು

ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 90 ಡಾಲರ್ ಆಸುಪಾಸಿನಲ್ಲಿ ಸ್ಥಿರವಾಗಿದ್ದರೆ, 2027ನೇ ಹಣಕಾಸು ವರ್ಷದಲ್ಲಿ ಸಿಪಿಐ ಹಣದುಬ್ಬರ ಶೇ. 5ರಷ್ಟಿರಲಿದೆ ಎಂದು ಯೂನಿಯನ್ ಬ್ಯಾಂಕ್ ಅಂದಾಜಿಸಿದೆ. ಆದರೆ, ಎಲ್ ನಿನೋ ಖಚಿತವಾದರೆ ಆಹಾರ ಹಣದುಬ್ಬರ ಹೆಚ್ಚಾಗಬಹುದು. ಆಗ ಸಿಪಿಐ ಹಣದುಬ್ಬರ ಶೇ. 5.5 ಅಥವಾ ಅದಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಮಳೆ ಕೊರತೆಯಿಂದಾಗುವ ಹಣದುಬ್ಬರದ ಪರಿಣಾಮವು ನಿಧಾನವಾಗಿ, ವಿಶೇಷವಾಗಿ ಸುಗ್ಗಿಯ ನಂತರದ ಅವಧಿಯಲ್ಲಿ ಕಾಣಿಸಿಕೊಳ್ಳಲಿದೆ. ಆಹಾರ ಹಣದುಬ್ಬರದಲ್ಲಿ ನಿರಂತರ ಏರಿಕೆಯಾದರೆ, 2027ನೇ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಗ್ರಾಮೀಣ ಆದಾಯ ಮತ್ತು ಬೇಡಿಕೆಯ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ, ಆರ್ಥಿಕ ವರ್ಷದ ಕೊನೆಯಲ್ಲಿ ಬಡ್ಡಿದರ ಏರಿಕೆಯಾಗುವ ಸಾಧ್ಯತೆಯನ್ನೂ ಇದು ಹೆಚ್ಚಿಸುತ್ತದೆ ಎಂದು ವರದಿ ತಿಳಿಸಿದೆ. (ANI)