ಈ ಬಾರಿಯ ದಸರಾವನ್ನು ವಿಭಿನ್ನವಾಗಿ ಆಚರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ. ಜಂಬೂಸವಾರಿ ಮೆರವಣಿಗೆಯ ರೂಪ ಬದಲಾಗಲಿದ್ದು, ಇದೇ ಮೊದಲ ಬಾರಿಗೆ ಸೇನಾಪಡೆಯ ಯೋಧರು ಹಾಗೂ ಚಿತ್ರರಂಗದ ನಟ-ನಟಿಯರು ಪಾಲ್ಗೊಳ್ಳಲಿದ್ದಾರೆ. ಬರಗಾಲದ ನಡುವೆಯೂ ಪ್ರವಾಸೋದ್ಯಮದ ದೃಷ್ಟಿಯಿಂದ ಅದ್ಧೂರಿ ಆಚರಣೆ
ಮೈಸೂರು (ಆ.30): ಈ ಬಾರಿ ವಿಭಿನ್ನವಾದ ದಸರಾ ಮಾಡುತ್ತೇವೆ. ದಸರಾದ ಮೆರವಣಿಗೆಯ ರೂಪವನ್ನೇ ಬದಲಾಯಿಸುತ್ತೇವೆ. ಸೇನಾಪಡೆಯ ಯೋಧರು ಕೂಡ ಈ ಬಾರಿಯ ಜಂಬೂಸವಾರಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬರಗಾಲದ ನಡುವೆಯೂ ಈ ಬಾರಿ ದಸರಾ ಅದ್ದೂರಿ!
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಬಾರಿಯ ದಸರಾವನ್ನು ಅದ್ಧೂರಿಯಾಗಿ ಮತ್ತು ಬಹಳ ವಿಭಿನ್ನವಾಗಿ ಆಚರಿಸುತ್ತೇವೆ. ಒಂದೇ ಪ್ರಕಾರದ ಐದು ಜನಪದ ಕಲಾವಿದರಿಗೆ ಈ ಬಾರಿ ಅವಕಾಶ ಇಲ್ಲ. ಬದಲಾದ ಕಾಲಕ್ಕೆ ತಕ್ಕಂತೆ ಮೆರವಣಿಗೆಯ ರೂಪವನ್ನು ಬದಲಾಯಿಸುತ್ತೇವೆ. ಸೇನಾಪಡೆಯ ಯೋಧರು ಕೂಡ ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ, ಕನ್ನಡ ಚಿತ್ರರಂಗದ ನಟ-ನಟಿಯರು ಕೂಡ ಮೆರವಣಿಗೆಯಲ್ಲಿ ಸಾಗಲಿದ್ದಾರೆ ಎಂದು ಹೇಳಿದರು.
ಮೈಸೂರು ದಸರಾದಲ್ಲಿ ಕಂಬಳ ನಡೆಯುತ್ತಾ?
ದಸರಾದಲ್ಲಿ ಕಂಬಳ ಆಯೋಜನೆ ಕುರಿತು ಪ್ರತಿಕ್ರಿಯಿಸಿ, ಕಂಬಳವನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ದಸರಾದಲ್ಲಿ ಕಂಬಳ ಆಯೋಜಿಸುವ ಬಗ್ಗೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಕಂಬಳದಿಂದ ಪರಿಸರ ಹಾನಿ, ನೀರು ಪೋಲು ಎಂಬುದೆಲ್ಲಾ ಸುಮ್ಮನೆ ನೆಪ. ಯಾವ ಪರಿಸರ ಹಾನಿಯೂ ಆಗುವುದಿಲ್ಲ. ನೀರು ಕೂಡ ಹೆಚ್ಚಾಗಿ ಬೇಕಾಗಿಲ್ಲ. ಸುಮ್ಮನೆ ಕೆಲವರು ವಿರೋಧ ಮಾಡುತ್ತಿದ್ದಾರೆ ಎಂದು ಹೇಳಿದರು.
ದಸರಾ ಉದ್ಘಾಟಕರ ವಿಚಾರದಲ್ಲಿ ಹಲವರ ಜೊತೆ ಚರ್ಚೆ ಮಾಡಿದ್ದೇನೆ. ಅಂತಿಮ ನಿರ್ಣಯವನ್ನು ಇನ್ನೂ ತೆಗೆದುಕೊಂಡಿಲ್ಲ ಎಂದರು.
ಬರದ ನೆಪದಲ್ಲಿ ದಸರಾವನ್ನು ಸರಳವಾಗಿ ಆಚರಿಸಲು ಸಾಧ್ಯವಿಲ್ಲ. ಈ ಕುರಿತ ನನ್ನ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ. ಈ ಬಾರಿಯ ದಸರಾವನ್ನು ಅದ್ಧೂರಿಯಾಗಿ ಮಾಡುತ್ತೇನೆ. ಅದರಲ್ಲಿ ಬದಲಾವಣೆ ಪ್ರಶ್ನೆ ಇಲ್ಲ. ದಸರಾದ ಮೇಲೆ ಇಡೀ ಪ್ರವಾಸೋದ್ಯಮ ನಿಂತಿದೆ.
- ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ.


