
ಸರ್ಕಾರ ಹಲಾಲ್ ಖರೀದಿಸಬೇಡಿ ಎಂದು ಹೇಳಿಲ್ಲ, ಎರಡೂ ಸಮುದಾಯಕ್ಕೂ ಬುದ್ದಿ ಹೇಳಬೇಕು
ರಾಜ್ಯದಲ್ಲಿ ವಿವಾದದ ರೂಪ ತಾಳಿದ ಹಲಾಲ್
ಹಲಾಲ್ ಮಾಂಸ ಖರೀದಿಸಬೇಡಿ ಎಂದು ಸರ್ಕಾರ ಹೇಳಿಲ್ಲ
ಎರಡೂ ಸಮುದಾಯಕ್ಕೂ ಬುದ್ದಿ ಹೇಳುವ ಕೆಲಸವಾಗಬೇಕು
ಬೆಂಗಳೂರು (ಮಾ.30): ಹಲಾಲ್ ಮಾಡಿ ಕತ್ತರಿಸಿದ ಮಾಂಸ (Halal Meat) ಬಹಿಷ್ಕಾರಿಸಲು ಹಿಂದು ಸಂಘಟನೆಗಳು ಕರೆ ಕೊಟ್ಟಿದೆ. ಈ ವಿಚಾರದ ಬಗ್ಗೆ ಈಗ ಎಲ್ಲೆಡೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪರ ವಿರೋಧ ಅಭಿಪ್ರಾಯಗಳು ಕೇಳಿ ಬಂದಿದೆ. ಈ ನಡುವೆ ಕಲಾಪದಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್ (revenue minister R Ashoka), ಸರ್ಕಾರ ಹಲಾಲ್ ಮಾಂಸ ಖರೀದಿಸಬೇಡಿ ಎಂದು ಎಲ್ಲೂ ಹೇಳಿಲ್ಲ. ಎರಡೂ ಸಮುದಾಯಕ್ಕೆ ಬುದ್ದಿ ಹೇಳುವ ಕೆಲಸವಾಗಬೇಕು ಎಂದು ಹೇಳಿದ್ದಾರೆ.
ಬುಧವಾರ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (H D Kumaraswamy) ಈ ವಿಚಾರ ಪ್ರಸ್ತಾಪ ಮಾಡಿದ ಬೆನ್ನಲ್ಲಿಯೇ ಮಧ್ಯಪ್ರವೇಶಿಸಿ ಮಾತನಾಡಿದ ಅಶೋಕ್, "ಯಾರು ಎಲ್ಲಿ ಖರೀದಿಸಬೇಕು ಅನ್ನೋದು ಅವರ ಹಕ್ಕು. ಇಲ್ಲೇ ತೆಗೆದುಕೊಳ್ಳಿ, ಅಲ್ಲೇ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡುವುದು ತಪ್ಪು. ಹಲಾಲ್ ಖರೀದಿಸಬೇಡಿ ಎಂದು ಸರ್ಕಾರ ಎಲ್ಲೂ ಹೇಳಿಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಹಲಾಲ್ ವಿರೋಧಿ ಅಭಿಯಾನ: ಸಿಎಂ ಬೊಮ್ಮಾಯಿ ಕೊಟ್ಟ ಉತ್ತರವೇನು?
ಎರಡೂ ಸಮುದಾಯಕ್ಕೂ ಬುದ್ಧಿವಾದ ಹೇಳುವ ಕೆಲಸವಾಗಬೇಕು. ಈ ವಿಚಾರದಲ್ಲಿ ಸರ್ಕಾರ ಯಾರದೋ ಒಬ್ಬರ ಪರವಾಗಿ ಮಾತನಾಡುವುದಿಲ್ಲ ಎಂದು ಅಶೋಕ್ ಹೇಳಿದ್ದಾರೆ. ಕುರಿತಾಗಿ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕೂಡ, ಎಲ್ಲಾ ಸಂಘಟನೆಗಳು ಹಲವಾರು ವಿಚಾರದಲ್ಲಿ ಬ್ಯಾನ್ ಮಾಡುತ್ತಲೇ ಇರುತ್ತವೆ. ಆದರೆ ಇದಕ್ಕೆಲ್ಲಾ ಸರ್ಕಾರ ತನ್ನ ನಿಲುವನ್ನು ಹೇಳುತ್ತಾ ಇರಲು ಆಗಲ್ಲ, ಯಾವಾಗ ಏನು ಹೇಳಬೇಕೋ ಆಗ ಹೇಳಲಿದ್ದೇವೆ. ಯಾವಾಗ ನಿಲುವು ವ್ಯಕ್ತಪಡಿಸಬೇಕೋ ಆಗ ವ್ಯಕ್ತಪಡಿಸಲಿದ್ದೇವೆ ಎಂದು ಹೇಳುವ ಮೂಲಕ ತಮ್ಮ ನಿಲವನ್ನು ಸ್ಪಷ್ಟಪಡಿಸಿದ್ದಾರೆ.