ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಆಡಳಿತವು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಸಂಘರ್ಷದಿಂದ ಕೂಡಿದೆ. ಈ ಅಂತರ್ಯುದ್ಧವನ್ನು ಬಗೆಹರಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶಿಸಿದ್ದು, ಇಬ್ಬರೂ ನಾಯಕರನ್ನು ದೆಹಲಿಗೆ ಕರೆಸಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು: ಕರ್ನಾಟಕದಲ್ಲಿ ಹಸ್ತ ಸಾಮ್ರಾಜ್ಯಕ್ಕೆ ಈಗ ಮೂರು ವರ್ಷಗಳ ಸಂಭ್ರಮ. 2023ರ ಭರ್ಜರಿ ಗೆಲುವಿನ ನಂತರ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರಕ್ಕೆ ಇದು ಹರ್ಷದ ಸಮಯವಾಗಬೇಕಿತ್ತು. ಆದರೆ, ಹರ್ಷದ ಜೊತೆಜೊತೆಗೇ 'ಸಂಘರ್ಷ' ಕೂಡ ಅಷ್ಟೇ ತೀವ್ರವಾಗಿ ಸಾಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಎಂಬ ಇಬ್ಬರು ಪ್ರಭಾವಿ ನಾಯಕರ ನಡುವಿನ 'ಕುರ್ಚಿ ಕಾಳಗ' ಈಗ ಮೂರು ವರ್ಷದ ಮಹಾಯುದ್ಧವಾಗಿ ಮಾರ್ಪಟ್ಟಿದೆ.

Add Asianetnews Kannada as a Preferred SourcegooglePreferred

ಕೇರಳ ಕೆಂಡ ತಣಿಸಿ ಕರುನಾಡ ಜ್ವಾಲೆ ಆರಿಸಲು 'ಹೈ' ಎಂಟ್ರಿ!

ಕೇರಳ ಕಾಂಗ್ರೆಸ್‌ನಲ್ಲಿನ ಭಿನ್ನಮತವನ್ನು ಯಶಸ್ವಿಯಾಗಿ ತಣಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈಗ ಕರುನಾಡಿನ ಕಾಂಗ್ರೆಸ್ ಜ್ವಾಲೆಯನ್ನು ಆರಿಸಲು ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಇತ್ತೀಚೆಗೆ ನಡೆದ ಊಟದ ಭೇಟಿಯಲ್ಲಿ ಖರ್ಗೆ ಅವರು ಸಿದ್ದು-ಡಿಕೆ ಜೋಡಿಗೆ ವಿಶೇಷ ಸಂಧಾನ ಸೂತ್ರವೊಂದನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗುತ್ತಿದೆ. ಕೇರಳದ ಕಗ್ಗಂಟನ್ನು ಬಿಡಿಸಿದ ಮಾದರಿಯಲ್ಲೇ ಕರ್ನಾಟಕದ ಅಂತರ್ಯುದ್ಧಕ್ಕೂ ಪೂರ್ಣವಿರಾಮ ಹಾಕಲು ಹೈಕಮಾಂಡ್ ಈಗ ಮಾಸ್ಟರ್ ಪ್ಲಾನ್ ರೂಪಿಸಿದೆ.

ದೆಹಲಿ ದಂಡಯಾತ್ರೆಗೆ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಸನ್ನದ್ಧ!

ಸದ್ಯದ ಮಾಹಿತಿ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರಿಗೂ ದೆಹಲಿಗೆ ಬುಲಾವ್ ಬಂದಿದೆ. ಈ ದೆಹಲಿ ದಂಡಯಾತ್ರೆಯು ಕೇವಲ ಸೌಜನ್ಯದ ಭೇಟಿಯಲ್ಲ, ಬದಲಾಗಿ ಅಧಿಕಾರ ಹಂಚಿಕೆ ಅಥವಾ ಸಂಪುಟ ಪುನಾರಚನೆಯ ಅಂತಿಮ ತೀರ್ಮಾನದ ಭಾಗ ಎನ್ನಲಾಗುತ್ತಿದೆ. ಮೇ ತಿಂಗಳಿನಲ್ಲೇ ಈ ಮೂರು ವರ್ಷಗಳ ಸುದೀರ್ಘ ಅಂತರ್ಯುದ್ಧಕ್ಕೆ ಪೂರ್ಣವಿರಾಮ ಬೀಳುತ್ತಾ? ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆ.

ಡಿಕೆಶಿ ಕನಸಿಗೆ 'ಕಾಲ ಕಂಟಕ' ಎದುರಾಗಿದೆಯೇ?

ಮುಖ್ಯಮಂತ್ರಿಯಾಗಬೇಕು ಎಂಬುದು ಡಿ.ಕೆ. ಶಿವಕುಮಾರ್ ಅವರ ಬಹಿರಂಗ ಆಸೆ. ಆದರೆ ದಿನಗಳು ಉರುಳಿದಂತೆ ಅವರ ಕನಸು ನನಸಾಗುವುದು ಕಠಿಣವಾಗುತ್ತಿದೆ. ಇದಕ್ಕೆ ಕಾರಣ 'ಕಾಲ ಕಂಟಕ'. ಹೌದು, ಸಮಯ ಮೀರುತ್ತಿದೆ, ಲೋಕಸಭಾ ಚುನಾವಣೆ ಹಾಗೂ ನಂತರದ ರಾಜಕೀಯ ಬೆಳವಣಿಗೆಗಳು ಡಿಕೆಶಿ ಪಾಲಿಗೆ ಸವಾಲಾಗಿ ಪರಿಣಮಿಸಿವೆ. ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಅಸ್ತ್ರವನ್ನು ಝಳಪಿಸುವ ಮೂಲಕ ಹಿಡಿತ ಸಾಧಿಸುತ್ತಿದ್ದರೆ, ಡಿಕೆಶಿ ನಾಯಕತ್ವ ಬದಲಾವಣೆಯ ಭರವಸೆಯಲ್ಲಿದ್ದಾರೆ.

ಸಂಧಾನ ಸೂತ್ರ ಮತ್ತು ಹೈವೋಲ್ಟೇಜ್ ಮೀಟಿಂಗ್ 

ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಮತ್ತು ಡಿಸಿಎಂ ಜೊತೆ ನಡೆಸಲಿರುವ ಈ ಹೈವೋಲ್ಟೇಜ್ ಮೀಟಿಂಗ್‌ನಲ್ಲಿ 'ಅಂತಿಮ ತೀರ್ಮಾನ' ಹೊರಬೀಳುವ ಸಾಧ್ಯತೆಯಿದೆ. ಕ್ಯಾಬಿನೆಟ್ ಸರ್ಜರಿ ಮಾಡಬೇಕೇ ಅಥವಾ ನಾಯಕತ್ವ ಬದಲಾವಣೆ ಮಾಡಬೇಕೇ ಎಂಬ ಗೊಂದಲಕ್ಕೆ ಹೈಕಮಾಂಡ್ ತೆರೆ ಎಳೆಯಲಿದೆ. 2023ರಲ್ಲಿ ಹೊತ್ತಿದ್ದ ಕಿಡಿ ಈಗ ಜ್ವಾಲಾಮುಖಿಯಾಗುವ ಮೊದಲೇ ಅದನ್ನು ಆರಿಸುವುದು ಹೈಕಮಾಂಡ್ ಮುಂದಿರುವ ಸವಾಲು.

ಒಟ್ಟಾರೆಯಾಗಿ, ಕರುನಾಡ ಕಾಂಗ್ರೆಸ್‌ನ ಈ ಅಂತರ್ಯುದ್ಧವು ತಾರ್ಕಿಕ ಅಂತ್ಯ ಕಾಣುತ್ತದೆಯೇ ಅಥವಾ ಬೂದಿ ಮುಚ್ಚಿದ ಕೆಂಡದಂತೆ ಮುಂದಿನ ಚುನಾವಣೆಯವರೆಗೂ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಮೇ ತಿಂಗಳ ಈ ದೆಹಲಿ ಪ್ರವಾಸವೇ ಕರ್ನಾಟಕ ರಾಜಕಾರಣದ ದಿಕ್ಸೂಚಿಯಾಗಲಿದೆ.

Related Video