ಅಂಬೇಡ್ಕರ್‌ಗೆ ಅಮಿತ್‌ ಶಾ ಅವಮಾನ: ದಲಿತ ಸಂಘಟನೆಗಳಿಂದ ಪ್ರತಿಭಟನೆ, ವಿಜಯಪುರ ಬಂದ್!

ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ವಿಜಯಪುರದಲ್ಲಿ ಬಂದ್ ಆಚರಿಸಲಾಗಿದೆ. ದಲಿತ, ಪ್ರಗತಿಪರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮದ್ಯ ಮಾರಾಟ ನಿಷೇಧಿಸಲಾಗಿದೆ.

Share this Video
  • FB
  • Linkdin
  • Whatsapp

ವಿಜಯಪುರ (ಡಿ.30): ಗೃಹ ಸಚಿವ ಅಮಿತ್ ಶಾ ಅವರು ಚಳಿಗಾಲದ ಅಧಿವೇಶನದ ವೇಳೆ ಸಂಸತ್ತಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಹಾಗೂ ದಲಿತ ಪರ ಸಂಘಟನೆಗಳಿಂದ ವಿಜಯಪುರ ಜಿಲ್ಲಾ ಬಂದ್ ಮಾಡಲಾಗಿದೆ. ವಿಜಯಪುರ ನಗರ ಬಂದ್‌ಗೆ 50ಕ್ಕೂ ಅಧಿಕ ಸಂಘಟನೆಗಳಿಂದ ಬೆಂಬಲ ನೀಡಲಾಗಿತ್ತು.

ದಲಿತ, ಪ್ರಗತಿಪರ, ಕನ್ನಡಪರ, ರೈತ ಸಂಘಟನೆಗಳಿಂದ ಬಂದ್‌ಗೆ ಬೆಂಬಲ ನೀಡಿದ್ದರಿಂದ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿಜಯಪುರ ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಡಿಡಿಪಿಐ, ಡಿಡಿಪಿಯು ರಿಂದ ಶಾಲಾ‌ಕಾಲೇಜು ರಜೆ ಘೋಷಿಸಿ ಆದೇಶ ಹೊರಡಿಸಿದ್ದರು. ಇತ್ತ ಮದ್ಯ ಮಾರಾಟ ಸಂಗ್ರಹಕ್ಕೂ ಜಿಲ್ಲಾಡಳಿತ ನಿಷೇಧ ಹೇರಿದೆ. ನಿನ್ನೆ ಮದ್ಯರಾತ್ರಿಯಿಂದ ಇಂದು ಮದ್ಯರಾತ್ರಿಯವರೆಗೂ ಮದ್ಯ ಮಾರಾಟ ಮಾಡುವಂತಿಲ್ಲ. ಹೊಸ ವರ್ಷಾಚರಣೆಗೆ ರೆಡಿಯಾಗ್ತಿದ್ದವರಿಗೆ ಬಂದ್ ಶಾಕ್ ನೀಡಿದೆ. ಡಿ.31 ಬೆಳಗಿನಜಾವದವರೆಗೂ ಮದ್ಯ ಮಾರಾಟಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಆದೇಶ ಹೊರಡಿಸಿದ್ದಾರೆ.

ಇನ್ನು ನಗರದಾದ್ಯಂತ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್‌ ಮಾಡುವಂತೆ ಕಾಂಗ್ರೆಸ್ ಹಾಗೂ ದಲಿತ, ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದವು. ಕಳೆದ ಡಿ.28ರಂದು ಬಂದ್ ನಡೆಯಬೇಕಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದಿಂದ ಬಂದ್ ಮುಂದೂಡಲಾಗಿತ್ತು. ಹೀಗಾಗಿ, ಎಲ್ಲ ಸಂಘಟನೆಗಳು ಇಂದು ಬಂದ್‌ಗೆ ಕರೆ ನೀಡಿವೆ. ಬಂದ್ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆಯನ್ನೂ ನೀಡಲಾಗಿತ್ತು.

Related Video