ಸೋನು ನಿಗಮ್ ಬ್ಯಾನ್ ನಾಟಕ: ಕ್ಷಮೆ ಕೇಳಿದ್ರೂ ಮುಗಿಯುತ್ತಾ ವಿವಾದ?
ಕರ್ನಾಟಕದಿಂದ ಗಾಯಕ ಸೋನು ನಿಗಮ್ನ ಬ್ಯಾನ್ ಮಾಡಬೇಕು ಅನ್ನೋ ತೀರ್ಮಾನ ತೆಗೆದುಕೊಳ್ತಾ ಇದ್ದ ಹಾಗೇನೇ ಸೋನು ನಿಗಮ್ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ಅಹಂಗಿಂತ ನಿಮ್ಮ ಪ್ರೀತಿ ದೊಡ್ಡದು.. ಕ್ಷಮಿಸಿ ಕರ್ನಾಟಕ ಅಂದಿದ್ದಾರೆ. ಹಾಗಾದ್ರೆ ಸೋನು ಬ್ಯಾನ್ ಅನ್ನೋ ನಾಟಕ ಇಲ್ಲಿಗೆ ಮುಗಿದೋಯ್ತಾ..? ಈ ಬಗ್ಗೆ ಚಿತ್ರರಂಗ & ಕನ್ನಡ ಸಂಘಟನೆಗಳು, ಏನ್ ಹೇಳುತ್ವೆ..? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ.
ಯೆಸ್ ಗಾಯಕ ಸೋನು ನಿಗಮ್ ಕೊನೆಗೂ ಕನ್ನಡಿಗರ ಕ್ಷಮೆ ಯಾಚಿಸಿದ್ದಾರೆ. ನನ್ನ ಅಹಂಗಿಂತ ಕನ್ನಡಿಗರ ಪ್ರೀತಿ ದೊಡ್ಡದು ಅಂತ ಹೇಳ್ತಾ ಪೋಸ್ಟ್ ವೊಂದನ್ನ ಹಾಕಿ ಕ್ಷಮಿಸಿ ಕರ್ನಾಟಕ ಅಂದಿದ್ದಾರೆ. ಅಲ್ಲಿಗೆ ಇದನ್ನ ನೋಡಿ ನಮ್ಮ ವಿಶಾಲ ಹೃದಯದ ಕನ್ನಡಿಗರು ‘ಅಯ್ಯೋ ಪಾಪ ನಮ್ಮ ಸೋನು ಅಲ್ವಾ ಕ್ಷಮಿಸೋಣ.. ಅವರ ಹಾಡುಗಳನ್ನ ಮತ್ತೆ ಕೇಳಿ ಎಂಜಾಯ್ ಮಾಡೋಣ ಅಂತ ಸುಮ್ಮನಾಗಿದ್ದಾರೆ.
ಆದ್ರೆ ಸೋನು ಮಾಡಿದ್ದು ಇಷ್ಟು ಸುಲಭವಾಗಿ ಕ್ಷಮಿಸುವಂಥಾ ತಪ್ಪಾ. ಖಾಸಗಿ ಕಾಲೇಜ್ನಲ್ಲಿ ನಡೀತಾ ಇದ್ದ ಕಾರ್ಯಕ್ರಮದಲ್ಲಿ ಕನ್ನಡ ಹಾಡನ್ನ ಹಾಡು ಎಂದಿದ್ದಕ್ಕೆ ಗರಂ ಆಗಿದ್ದ, ಸೋನು ನೀವು ಕನ್ನಡ ಕನ್ನಡ ಅನ್ನೋದಕ್ಕೇನೇ ಪೆಹಲ್ಗಾಮ್ ದಾಳಿ ಆಗಿದ್ದು ಅನ್ನೋ ಮಾತು ಹೇಳಿದ್ರು.
ಅರೇ ಕನ್ನಡ ಹಾಡು ಕೇಳೋದಕ್ಕೂ ಭಯೋತ್ಪಾದಕ ದಾಳಿಗೂ ಎಲ್ಲಿಯ ಸಂಬಂಧ ಸ್ವಾಮಿ..? ಒಂದು ಭಾಷೆಯ ವಿಚಾರ, ಇನ್ನೊಂದು ದೇಶದ ಮೇಲೆ ನಡೆದ ದಾಳಿ .. ಎರಡೂ ಸೂಕ್ಷ್ಮ ವಿಚಾರಗಳನ್ನ ಬೆಸೆದು ಕನ್ನಡಿಗರ ಮನಸಿಗೆ ಘಾಸಿ ಮಾಡಿದ್ದು ಎಷ್ಟು ಸರಿ.. ಅನ್ನೋ ಪ್ರಶ್ನೆ ನಿಜವಾದ ಕನ್ನಡಾಭಿಮಾನಿಗಳೆಲ್ಲರಲ್ಲೂ ಇದೆ.
ಅಸಲಿಗೆ ಸೋನು ಏನು ಸುಮ್ಮನೇ ಕ್ಷಮೆ ಕೇಳಿಲ್ಲ. ಮೊದಲು ತನ್ನ ವಿರುದ್ದ ಪ್ರತಿಭಟನೆಗಳು ಶುರುವಾದಾಗ ವಿಡಿಯೋವೊಂದನ್ನ ಮಾಡಿ ಸಮರ್ಥನೆ ಮಾಡಿಕೊಂಡಿದ್ರು. ಅದ್ರಲ್ಲೂ ಪೆಹಲ್ಗಾಮ್ ದಾಳಿ ಜೊತೆ ಹೋಲಿಕೆ ಮಾಡಿದ್ದಕ್ಕೂ ಸೋನು ಮಾತಲ್ಲಿ ಸಮರ್ಥನೆ ಇತ್ತು.
ಆದ್ರೆ ಯಾವಾಗ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಯ್ತೋ ಸೋನುಗೆ ಬಿಸಿ ತಾಕ್ತು. ಕರ್ನಾಟಕ ಫಿಲ್ಮ್ ಚೇಂಬರ್ ಸಭೆ ನಡೆಸಿ ಸೋನು ಜೊತೆಗೆ ಅಸಹಕಾರ ಅಂತ ಹೇಳಿದ ಮೇಲೆ ಇದು ಒಂದು ರೀತಿಯ ಬ್ಯಾನ್ ಅನ್ನೋದು ಸೋನುಗೆ ಆರ್ಥ ಆಯ್ತು. ಆಗ ಮತ್ತೊಂದು ಬಗೆಯಲ್ಲಿ ಸಮರ್ಥನೆ ಮಾಡಿಕೊಂಡಿದ್ರು ಸೋನು.
ಹೌದು ಕರ್ನಾಟಕದಲ್ಲಿ ಬ್ಯಾನ್ ಅಂತ ಸುದ್ದಿಯಾಗ್ತಾ ಇದ್ದ ಹಾಗೇನೇ ಒಂದು ಸುದೀರ್ಘ ಪೋಸ್ಟ್ ಹಾಕಿದ್ದ ಸೋನು ನಿಗಮ್ ನನಗೀಗ 51 ವರ್ಷ ವಯಸ್ಸು. ಬದುಕಿನ ದ್ವಿತಿಯಾರ್ಧದಲ್ಲಿ ಇದ್ದೇನೆ. ಈ ವಯಸ್ಸಲ್ಲಿ ನನ್ನ ಮಗನ ವಯಸ್ಸಿನ ಹುಡುಗರು ಧಮ್ಕಿ ಹಾಕಿದ್ರೆ ನಾನು ಕ್ಷಮೆ ಕೇಳಬೇಕಾ.. ಎಲ್ಲವನ್ನೂ ವಿಚಾರವಂತ ಕನ್ನಡಿಗರ ವಿವೇಚನೆಗೆ ಬಿಡ್ತಿನಿ ಅಂತ ಪೋಸ್ಟ್ ಹಾಕಿದ್ರು ಸೋನು ನಿಗಮ್.
ಅದ್ರೆ ಈ ಪೋಸ್ಟ್ ಹಾಕಿದ ಕೆಲವೇ ಘಂಟೆಗಳಲ್ಲಿ ಸೋನು ವರಸೆ ಬದಲಾಯಿಸಿ ಕ್ಷಮೆ ಕೇಳಿದ್ದಾರೆ. ಇದರ ಹಿಂದೆ ಸೋನು ಜಾಣತನ ಇದೆ. ಕನ್ನಡದಿಂದ ನೂರಾರು ಹಾಡುಗಳ ಅವಕಾಶ ಸೋನುಗೆ ಬರುತ್ತೆ. ಒಂದು ಹಾಡಿಗೆ 2 ರಿಂದ 4 ಲಕ್ಷ ಸಂಭಾವನೆ ಸಿಗುತ್ತೆ. ಸಾಲದಕ್ಕೆ ಕರ್ನಾಟಕದಲ್ಲಿ ನಡೆಯೋ ಒಂದೇ ಒಂದು ಮ್ಯೂಸಿಕ್ ಕಾರ್ಯಕ್ರಮಕ್ಕೆ ಸೋನುಗೆ 15 ರಿಂದ 20 ಲಕ್ಷ ಸಿಗುತ್ತೆ. ಸೋ ಇಷ್ಟೆಲ್ಲಾ ಹಣ ಕೊಡುವ ಇಂಡಸ್ಟ್ರಿ ಜೊತೆಗೆ ಸುಮ್ನೆ ಕಿರಿಕ್ ಯಾಕೆ ಅಂತ ಕಾಟಾಚಾರಕ್ಕೆ ಸೋನು ಕ್ಷಮೆ ಕೇಳಿದಂತಿದೆ.
ಹೌದು ಸೋನು ನಿಗಮ್ ಕನ್ನಡಿಗರ ಬಗ್ಗೆ ಅವಹೇಳನಹಕಾರಿಯಾಗಿ ಮಾತನಾಡಿದಾಗ ಕನ್ನಡ ಚಿತ್ರರಂಗ ಏನೂ ಗಟ್ಟಿಯಾಗಿ ಪ್ರತಿರೋಧ ಒಡ್ಡಲಿಲ್ಲ. ಕೆಲ ಚಿತ್ರಸಾಹಿತಿಗಳು ಮಾತನಾಡಿದ್ದು ಬಿಟ್ರೆ ದೊಡ್ಡ ದೊಡ್ಡ ನಟರು ಸೋನು ಬಗ್ಗೆ ಒಂದೇ ಮಾತು ಆಡಲಿಲ್ಲ. ಕನ್ನಡ ವಿರೋಧಿಯನ್ನ ಖಂಡಿಸಲಿಲ್ಲ.
ಆದ್ರೆ ಯಾವಾಗ ಕನ್ನಡ ಪರ ಸಂಘಟನೆಗಳ ಹೋರಾಟ ಜೋರಾಯ್ತೋ ಫಿಲ್ಮ್ ಚೇಂಬರ್ ಮೀಟಿಂಗ್ ವೊಂದನ್ನ ಕರೆದು ಸೋನು ನಿಗಮ್ ಗೆ ಅಸಹಕಾರ ಅಂತ ಘೋಷಣೆ ಮಾಡಿತು. ಬ್ಯಾನ್ ಅನ್ನೋ ಪದ ಕೂಡ ಬಳಸಲಿಲ್ಲ. ದುರಂತ ಅಂದ್ರೆ ಈ ಬಗ್ಗೆ ನಡೆದ ಸಭೆಯಲ್ಲಿ ಯಾಬೊಬ್ಬ ಟಾಪ್ ಮ್ಯೂಸಿಕ್ ಡೈರೆಕ್ಟರ್ ಕೂಡ ಇರಲಿಲ್ಲ.
ಅಲ್ಲಿಗೆ ಕಾಟಾಚಾರಕ್ಕೆ ಸೋನು ನಿಗಮ್ ಮೇಲೆ ಅಸಹಕಾರ ಅನ್ನೋ ಘೋಷಣೆ ಮಾಡಿದ್ದ ಕನ್ನಡ ಚಿತ್ರರಂಗ, ಸೋನು ಸಾರಿ ಹೇಳ್ತಾನೇ ಅವರನ್ನ ಬರಸೆಳೆದು ಅಪ್ಪಿ ಮುದ್ದಾಡಲಿಕ್ಕೆ ಸಿದ್ದವಾದಂತಿದೆ. ಆಧ್ರೆ ಕನ್ನಡ ಸಂಘಟನೆಗಳು ಸೋನು ನಿಗಮ್ ಬಹಿರಂಗ ಕ್ಷಮೆ ಯಾಚಿಸಿಬೇಕು ಅಂತ ಪಟ್ಟು ಹಿಡಿದಿವೆ. ಮುಂದಿನ ದಿನಗಳಲ್ಲಿ ಸೋನು ಬ್ಯಾನ್ ಕಥೆ ಏನಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.