ವಿನಾಯಕ ಚತುರ್ಥಿ ಅಂಗವಾಗಿ ಎಲ್ಲರೂ ಗಣೇಶನನ್ನು ಕೂರಿಸಿ ಪೂಜೆ ಮಾಡಿದರೆ, ಇಲ್ಲೊಬ್ಬ ವ್ಯಕ್ತಿ ಗಣೇಶನನ್ನೇ ಬಿರಿಯಾನಿ ಮಾಡೋಕೆ ಕೂರಿಸಿದ್ದಾನೆ. ಹೌದು ಅಂಗಡಿಯ ಮುಂದೆ ಬಿರಿಯಾನಿ ಮಾಡುವುದಕ್ಕೆ ಗಣೇಶನನ್ನು ಕೂರಿಸಿ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಮಾಲೀಕನಿಗೆ ಮುಂದಾದ ಗತಿ ಮಾತ್ರ ರೋಚಕವಾಗಿದೆ.
ತಿರುನೆಲ್ವೇಲಿ: ಗಣೇಶ ಹಬ್ಬದ ಪವಿತ್ರ ಸಂದರ್ಭದಲ್ಲೇ ತಮಿಳುನಾಡಿನಲ್ಲಿ ಭಕ್ತರ ಭಾವನೆಗೆ ಧಕ್ಕೆ ತರುವಂತಹ ಅಕ್ಷಮ್ಯ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಾಪಾರ ಹೆಚ್ಚಿಸಿಕೊಳ್ಳುವ ಸಲುವಾಗಿ ಹಿಂದೂಗಳ ಆರಾಧ್ಯ ದೈವ ಗಣೇಶನೇ ಚಿಕನ್ ಬಿರಿಯಾನಿ ಮಾಡುತ್ತಿರುವಂತಹ ವಿವಾದಾತ್ಮಕ ಚಿತ್ರವಿರುವ ಫ್ಲೆಕ್ಸ್ ಅಳವಡಿಸಿದ್ದ ಬಿರಿಯಾನಿ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ತಮಿಳುನಾಡಿನ ತಿರುನೆಲ್ವೇಲಿ ನಗರದ ವಿ.ಎಂ. ಛತ್ರಂ ಸೇತುವೆ ಸಮೀಪ ಜಯಂತ್ ಎಂಬಾತ ಬಿರಿಯಾನಿ ಅಂಗಡಿ ನಡೆಸುತ್ತಿದ್ದಾನೆ. ವಿನಾಯಕ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 13 ಮತ್ತು 14ರಂದು ಎರಡು ದಿನಗಳ ಕಾಲ 'ಅರೇಬಿಕ್-ಸ್ಟೈಲ್ ಚಿಕನ್ 65 ಬಿರಿಯಾನಿ'ಯನ್ನು ಕೇವಲ 99 ರೂಪಾಯಿಗೆ ನೀಡುವುದಾಗಿ ಆಫರ್ ಘೋಷಿಸಿದ್ದ. ಆದರೆ, ಈ ಆಫರ್ನ ಪ್ರಚಾರದ ಬ್ಯಾನರ್ನಲ್ಲಿ ಸ್ವತಃ ಗಣೇಶನೇ ಬಿರಿಯಾನಿ ಪಾತ್ರೆಯಲ್ಲಿ ಚಿಕನ್ ಬಿರಿಯಾನಿ ಬೇಯಿಸುತ್ತಿರುವ ರೀತಿಯ ಚಿತ್ರವನ್ನು ಮುದ್ರಿಸಿ, ಅಂಗಡಿಯ ಮುಂಭಾಗ ಬೃಹತ್ ಫ್ಲೆಕ್ಸ್ ನೇತುಹಾಕಿದ್ದ.
ಭುಗಿಲೆದ್ದ ಜನಾಕ್ರೋಶ, ಹಿಂದೂ ಸಂಘಟನೆಗಳ ಪ್ರತಿಭಟನೆ:
ಪವಿತ್ರ ಹಬ್ಬದ ಸಂದರ್ಭದಲ್ಲಿ ಪ್ರಥಮ ಪೂಜಿತ ದೇವರಿಗೆ ಮಾಂಸಾಹಾರದ ಬಿರಿಯಾನಿ ನಂಟು ಕಟ್ಟಿ ಜಾಹೀರಾತು ನೀಡಿರುವುದನ್ನು ಕಂಡ ಸ್ಥಳೀಯರು ಹಾಗೂ ಹಿಂದೂ ಮುನ್ನಾನಿ (Hindu Munnani) ಸಂಘಟನೆಯ ಕಾರ್ಯಕರ್ತರು ಅಂಗಡಿ ಎದುರು ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಧಾರ್ಮಿಕ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಬ್ಯಾನರ್ ತೆರವುಗೊಳಿಸಿ ಮಾಲೀಕನ ಬಂಧನ:
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ತಿರುನೆಲ್ವೇಲಿ ನಗರ ಪೊಲೀಸರು, ಅಂಗಡಿಯ ಕೌಂಟರ್ ಮೇಲೆ ಹತ್ತಿ ವಿವಾದಾತ್ಮಕ ಬ್ಯಾನರ್ ಅನ್ನು ಕಿತ್ತೆಸೆದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಗೂ ಶಾಂತಿ ಕದಡಲು ಯತ್ನಿಸಿದ ಆರೋಪದ ಮೇಲೆ ಅಂಗಡಿ ಮಾಲೀಕ ಜಯಂತ್ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ತೀವ್ರ ವಿರೋಧ:
ಈ ಘಟನೆಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವ್ಯಾಪಾರಿಯ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. 'ವ್ಯಾಪಾರದ ಲಾಭಕ್ಕಾಗಿ ಹಿಂದೂ ದೇವರನ್ನು ಈ ರೀತಿ ಹೀಯಾಳಿಸುವುದು ಎಷ್ಟು ಸರಿ? ಬೇರೆ ಧರ್ಮಗಳ ಪವಿತ್ರ ಗುರುಗಳನ್ನು ಈ ರೀತಿ ಚಿತ್ರಿಸುವ ಧೈರ್ಯ ಇವರಿಗೆ ಬರುತ್ತಿತ್ತೇ? ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸಬೇಡಿ' ಎಂದು ಬಳಕೆದಾರರು ಕಿಡಿಕಾರಿದ್ದಾರೆ.


