ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಕುರಿತು ಎರಡೂ ವಿಭಾಗಗಳ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಅಕ್ಟೋಬರ್ 1 ರಿಂದ ಈ ಬದಲಾವಣೆ ಜಾರಿಯಾಗಲಿದ್ದು, ರೈಲು ಸಂಚಾರಕ್ಕೆ ಅಡ್ಡಿಯಾಗದಂತೆ ಸುಗಮ ವರ್ಗಾವಣೆಗೆ ಸಿದ್ಧತೆ ನಡೆಸಲಾಗಿದೆ. ಸಿಬ್ಬಂದಿಗೆ ತಮ್ಮ ಆಯ್ಕೆಯ ವಿಭಾಗದಲ್ಲಿ ಮುಂದುವರಿಯುವ ಅವಕಾಶ ನೀಡಲಾಗಿದೆ.

ಮಂಗಳೂರು: ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಹಿನ್ನೆಲೆಯಲ್ಲಿ ಎರಡೂ ವಿಭಾಗಗಳ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್‌ಎಂ) ಹಾಗೂ ಹಿರಿಯ ಅಧಿಕಾರಿಗಳ ಸಮನ್ವಯ ಸಭೆ ಶುಕ್ರವಾರ ಮಂಗಳೂರಿನಲ್ಲಿ ನಡೆಯಿತು.

ಮಂಗಳೂರು ವ್ಯಾಪ್ತಿಯ ಆಡಳಿತಾತ್ಮಕ ಬದಲಾವಣೆಗೆ ಅಗತ್ಯವಿರುವ ಸಿದ್ಧತೆಗಳು ಹಾಗೂ ಸುಗಮ ವರ್ಗಾವಣೆಯ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು. ಸಭೆ ಸೌಹಾರ್ದಯುತ ಹಾಗೂ ರಚನಾತ್ಮಕ ವಾತಾವರಣದಲ್ಲಿ ನಡೆದಿದ್ದು, ವ್ಯಾಪ್ತಿ ಬದಲಾವಣೆಯಿಂದ ರೈಲು ಸಂಚಾರ ಮತ್ತು ಪ್ರಯಾಣಿಕರ ಸೇವೆಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಎರಡೂ ವಿಭಾಗಗಳು ಒಮ್ಮತ ವ್ಯಕ್ತಪಡಿಸಿದವು.

ರೈಲು ಸೇವೆಗಳು ಹಾಗೂ ಕಾರ್ಯಾಚರಣೆ

ಅಕ್ಟೋಬರ್‌ 1 ರಿಂದ ಹೊಸ ರೈಲ್ವೆ ವ್ಯಾಪ್ತಿ ಜಾರಿಗೆ ಬರಲಿದ್ದು, ಅಂದಿನಿಂದಲೂ ರೈಲು ಸೇವೆಗಳು ಹಾಗೂ ಕಾರ್ಯಾಚರಣೆಗಳು ಸಹಜವಾಗಿ ಮುಂದುವರಿಯುವಂತೆ ಅಗತ್ಯ ಸಿದ್ಧತೆಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಲು ನಿರ್ಧರಿಸಲಾಯಿತು.

ಕಾರ್ಯಾಚರಣೆಯ ಸಮನ್ವಯ, ಆಸ್ತಿಗಳು, ದಾಖಲೆಗಳು, ನಿಯಂತ್ರಣ ವ್ಯವಸ್ಥೆ, ಸಿಬ್ಬಂದಿ ಸೇರಿದಂತೆ ವ್ಯಾಪ್ತಿ ಬದಲಾವಣೆಯಿಂದ ಎದುರಾಗುವ ವಿವಿಧ ಆಡಳಿತಾತ್ಮಕ ಹಾಗೂ ತಾಂತ್ರಿಕ ವಿಚಾರಗಳ ಕುರಿತು ಅಧಿಕಾರಿಗಳು ಚರ್ಚಿಸಿದರು.

ಸಿಬ್ಬಂದಿಗೆ ಆಯ್ಕೆ ಅವಕಾಶ:

ಮಂಗಳೂರು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ದಕ್ಷಿಣ ರೈಲ್ವೆಯಲ್ಲೇ ಮುಂದುವರಿಯಲು ಅಥವಾ ನೈಋತ್ಯ ರೈಲ್ವೆಗೆ ಸೇರ್ಪಡೆಯಾಗಲು ನಿಯಮಾನುಸಾರ ಆಯ್ಕೆ ನೀಡಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು. ರೈಲ್ವೆ ಮಂಡಳಿ ನಿರ್ದೇಶನದಂತೆ ಗಜೆಟೆಡ್ ಅಲ್ಲದ ಸಿಬ್ಬಂದಿಯನ್ನು ‘ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ’ ವರ್ಗಾಯಿಸುವ ವ್ಯವಸ್ಥೆ ಇದ್ದರೂ, ದಕ್ಷಿಣ ರೈಲ್ವೆಯಲ್ಲಿ ಮುಂದುವರಿಯುವ ಅಥವಾ ನೈಋತ್ಯ ರೈಲ್ವೆಗೆ ಸೇರುವ ಆಯ್ಕೆಯನ್ನು ಸಿಬ್ಬಂದಿಗೆ ನೀಡಲಾಗುತ್ತದೆ. ಇತರ ವರ್ಗಗಳ ಸಿಬ್ಬಂದಿಗೆ ಅನ್ವಯವಾಗುವ ನಿಯಮಾನುಸಾರ ಪ್ರಕ್ರಿಯೆ ಮುಂದುವರಿಯಲಿದೆ.

ಪಾಲಕ್ಕಾಡ್ ಹಾಗೂ ಮೈಸೂರು ವಿಭಾಗಗಳ ನಡುವಿನ ನಿರಂತರ ಸಮನ್ವಯದ ಮೂಲಕ ವ್ಯಾಪ್ತಿ ಬದಲಾವಣೆಯನ್ನು ಸುಗಮವಾಗಿ ಪೂರ್ಣಗೊಳಿಸುವ ವಿಶ್ವಾಸವನ್ನು ಎರಡೂ ವಿಭಾಗಗಳ ಅಧಿಕಾರಿಗಳು ವ್ಯಕ್ತಪಡಿಸಿದರು. ಪ್ರಯಾಣಿಕರ ಸೇವೆ ಹಾಗೂ ರೈಲು ಕಾರ್ಯಾಚರಣೆಯ ನಿರಂತರತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಯಿತು.

ರೈಲ್ವೆ ಮಂಡಳಿಯ ಅಧಿಸೂಚನೆಯಂತೆ 2026ರ ಅಕ್ಟೋಬರ್ 1ರಿಂದ ಮಂಗಳೂರು ರೈಲ್ವೆ ವ್ಯಾಪ್ತಿಯ ಬದಲಾವಣೆ ಅಧಿಕೃತವಾಗಿ ಜಾರಿಗೆ ಬರಲಿದೆ.

ಇದನ್ನೂ ಓದಿ: ದಾವಣಗೆರೆ ಹೊರವಲಯದ 200 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣಕ್ಕೆ ನಿರ್ಧಾರ: ಎಲ್ಲಿ?