ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?

ಬಯೋಪಿಕ್ ಅಂದ್ರೆನೇ ಒಂದು ಮ್ಯಾಜಿಕ್. ಅದರಲ್ಲಿಯೂ ಇಡೀ ಭಾರತವೇ ಆರಾಧಿಸುವ 'ಭಾರತ ರತ್ನ' ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಸಿನಿಮಾ ಬರ್ತಿದೆ ಅಂದಾಗ ನಿರೀಕ್ಷೆ ಡಬಲ್ ಆಗೋದು ಗ್ಯಾರಂಟಿ.

Share this Video
  • FB
  • Linkdin
  • Whatsapp

ಬಯೋಪಿಕ್ ಅಂದ್ರೆನೇ ಒಂದು ಮ್ಯಾಜಿಕ್. ಅದರಲ್ಲಿಯೂ ಇಡೀ ಭಾರತವೇ ಆರಾಧಿಸುವ 'ಭಾರತ ರತ್ನ' ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಸಿನಿಮಾ ಬರ್ತಿದೆ ಅಂದಾಗ ನಿರೀಕ್ಷೆ ಡಬಲ್ ಆಗೋದು ಗ್ಯಾರಂಟಿ. 'ಜೆರ್ಸಿ' ಸಿನಿಮಾ ಮೂಲಕ ಕಣ್ಣೀರು ಹಾಕಿಸಿದ್ದ ನಿರ್ದೇಶಕ ಗೌತಮ್ ತಿನ್ನನೂರಿ ಈ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಆದರೆ, ಎಲ್ಲರ ತಲೆಯಲ್ಲೂ ಕೊರೆಯುತ್ತಿರುವ ಒಂದೇ ಪ್ರಶ್ನೆ... ಸಂಗೀತ ಸರಸ್ವತಿಯಾಗಿ ತೆರೆಮೇಲೆ ಕಾಣಿಸಿಕೊಳ್ಳುವ ಆ ಅದೃಷ್ಟವಂತೆ ಯಾರು? ಸಾಯಿ ಪಲ್ಲವಿನಾ? ರುಕ್ಮಿಣಿ ವಸಂತಾ? ಅಥವಾ ನ್ಯಾಷನಲ್ ಕ್ರಶ್ ರಶ್ಮಿಕಾನಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತದ ನೈಟಿಂಗೇಲ್, ಕರ್ನಾಟಕ ಸಂಗೀತದ ಶ್ರೇಷ್ಠ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ... ತಮ್ಮ ಕೋಗಿಲೆ ಕಂಠದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಈ ಮಹಾನ್ ಸಾಧಕಿಯ ಕಥೆ ಈಗ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಆದರೆ ನಿರ್ದೇಶಕ ಗೌತಮ್ ತಿನ್ನನೂರಿ ಅವರಿಗೆ ನಾಯಕಿಯ ಆಯ್ಕೆಯೇ ಅತಿದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೊದಲು ಈ ಪಾತ್ರಕ್ಕೆ ಕೇಳಿಬಂದಿದ್ದು ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಹೆಸರು. ಸಾಯಿ ಪಲ್ಲವಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲೀತಾ ಇದ್ದಾರೆ. ಸುಬ್ಬುಲಕ್ಷ್ಮಿ ಅವರ ಹಳೆಯ ವಿಡಿಯೋಗಳನ್ನು ನೋಡಿ ತಯಾರಿ ನಡೆಸ್ತಾ ಇದ್ದಾರೆ ಅನ್ನೋ ಬಲವಾದ ಸುದ್ದಿಯಿತ್ತು.

ಆದರೆ, ಏಕಾಏಕಿ ಸಾಯಿ ಪಲ್ಲವಿ ಈ ಪ್ರಾಜೆಕ್ಟ್‌ನಿಂದ ಹೊರಬಂದ್ರು ಅನ್ನೋ ಶಾಕಿಂಗ್ ನ್ಯೂಸ್ ಬಂತು. ಸಾಯಿ ಪಲ್ಲವಿ ಜಾಗಕ್ಕೆ ಮತ್ತೊಬ್ಬರ ಎಂಟ್ರಿಯಾಯ್ತು. ಅವರೇ ನಮ್ಮ ಕನ್ನಡದ ಹುಡುಗಿ, ಕಾಂತಾರ ಬೆಡಗಿ ರುಕ್ಮಿಣಿ ವಸಂತ್. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ತಮ್ಮ ಕಣ್ಣಿನ ಮೂಲಕವೇ ಮೋಡಿ ಮಾಡಿದ್ದ ರುಕ್ಮಿಣಿ, ಸುಬ್ಬುಲಕ್ಷ್ಮಿ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ ಅಂತಲೇ ಸ್ಯಾಂಡಲ್ವುಡ್​​, ಟಾಲಿವುಡ್ ಅಂಗಳದಲ್ಲಿ ಚರ್ಚೆ ಶುರುವಾಯ್ತು. ಆದರೆ, ಈ ಊಹಾಪೋಹಗಳಿಗೂ ಈಗ ಬ್ರೇಕ್ ಬಿದ್ದಿದೆ. ರುಕ್ಮಿಣಿ ವಸಂತ್ ಸದ್ಯ ಬಹುದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನ 'ಡ್ರ್ಯಾಗನ್' ಸಿನಿಮಾದಲ್ಲಿ ರುಕ್ಮಿಣಿ ನಾಯಕಿಯಾಗಿ ಮಿಂಚಲಿದ್ದಾರೆ. ಇತ್ತ ಸಾಯಿ ಪಲ್ಲವಿ ರಣಬೀರ್ ಕಪೂರ್ ಜೊತೆಗಿನ ಬಹುನಿರೀಕ್ಷಿತ 'ರಾಮಾಯಣ'ದಲ್ಲಿ ಸೀತೆಯಾಗಿ ಬಣ್ಣ ಹಚ್ತಾ ಇದ್ದಾರೆ. ಇಬ್ಬರೂ ಬಿಡುವಿಲ್ಲದಷ್ಟು ಬ್ಯುಸಿ. ಹಾಗಾದರೆ, ಈ ಮೆಗಾ ಬಯೋಪಿಕ್‌ನ ನಾಯಕಿ ಯಾರು? ಇಲ್ಲಿಗೇ ಎಂಟ್ರಿ ಕೊಟ್ಟಿರೋದು ನಮ್ಮ ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ! ರಶ್ಮಿಕಾ ಮಂದಣ್ಣ ಈಗ ಸುಬ್ಬುಲಕ್ಷ್ಮಿ ಪಾತ್ರಕ್ಕೆ ಫಿಕ್ಸ್ ಆಗಿದ್ದಾರೆ ಅನ್ನೋ ಬಿಸಿಬಿಸಿ ಸುದ್ದಿ ಟಾಲಿವುಡ್ ಅಂಗಳದಿಂದ ಬರ್ತಾ ಇದೆ. ಇದು ಕೇವಲ ಗಾಳಿಸುದ್ದಿಯಲ್ಲ.

ಈಗಾಗಲೇ ರಶ್ಮಿಕಾ ನಿವಾಸದಲ್ಲಿ ಸೀಕ್ರೆಟ್ ಆಗಿ 'ಲುಕ್ ಟೆಸ್ಟ್' ಕೂಡ ಮಾಡಲಾಗಿದೆಯಂತೆ. ಎಂ.ಎಸ್. ಸುಬ್ಬುಲಕ್ಷ್ಮಿ ಅವರಂತಹ ದಂತಕಥೆಯ ಪಾತ್ರ ಮಾಡೋದು ಯಾವುದೇ ನಟಿ ಪಾಲಿಗೆ ಜೀವಮಾನದ ಅವಕಾಶ. ಲುಕ್ ಟೆಸ್ಟ್ ಆಗಿರುವ ವಿಚಾರ ನಿಜವೇ ಆಗಿದ್ದರೆ, ಶೀಘ್ರದಲ್ಲಿಯೇ ಚಿತ್ರತಂಡದಿಂದ ಅಧಿಕೃತ ಪೋಸ್ಟರ್ ರಿಲೀಸ್ ಆಗುವ ಸಾಧ್ಯತೆ ಇದೆ. ಸಂಗೀತದ ರಾಣಿಯಾಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮೋಡಿ ಮಾಡ್ತಾರಾ? ಕಾದುನೋಡಬೇಕು. ಆದ್ರೆ ರಶ್ಮಿಕಾ ಕಂಡ್ರೆ ಆಗದವರು ಮಾತ್ರ ಇವರು ಹೇಗೆ ಎಂ.ಎಸ್. ಸುಬ್ಬುಲಕ್ಷ್ಮೀ ಪಾತ್ರಕ್ಕೆ ಸೂಟ್ ಆಗ್ತಾರೆ..? ಇವರೇನಿದ್ರೂ ಎಂ.ಟಿ.ವಿ ಸುಬ್ಬುಲಕ್ಷ್ಮೀ ಅಂತ ಕಾಲೇಳಿತಾ ಇದ್ದಾರೆ..!

Related Video