ಲಂಡನ್‌ನ ಕೇಂಬ್ರಿಡ್ಜ್ ಯೂನಿಯನ್‌ನಲ್ಲಿ ಕನ್ನಡ ರಾಜ್ಯೋತ್ಸವ: ರವಿ ಹೆಗಡೆ ಹೇಳಿದ್ದೇನು?

ಲಂಡನ್ ಪಾರ್ಲಿಮೆಂಟರಿ ಲೀಡರ್‌ಶಿಪ್ ಸಮ್ಮಿಟ್-2024ರ ಉದ್ದೇಶವೇ ಲಂಡನ್ನಿನ ಐತಿಹಾಸಿಕ ತಾಣಗಳಿಗೆ ಭೇಟಿ ನೀಡುವುದು ಮತ್ತು ಲಂಡನ್ನಿನ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವುದಾಗಿತ್ತು.

Share this Video
  • FB
  • Linkdin
  • Whatsapp

ಲಂಡನ್‌ (ಜ.18): ಲಂಡನ್ ಪಾರ್ಲಿಮೆಂಟರಿ ಲೀಡರ್‌ಶಿಪ್ ಸಮ್ಮಿಟ್-2024ರ ಉದ್ದೇಶವೇ ಲಂಡನ್ನಿನ ಐತಿಹಾಸಿಕ ತಾಣಗಳಿಗೆ ಭೇಟಿ ನೀಡುವುದು ಮತ್ತು ಲಂಡನ್ನಿನ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವುದಾಗಿತ್ತು. ಬೆಂಗಳೂರಿನಿಂದ ಹೊರಟ ಸಾಧಕರ ತಂಡ, ಲಂಡನ್ ತಲುಪಿದ ಮಾರನೆಯ ದಿನವೇ ಕೇಂಬ್ರಿಜ್‌ನತ್ತ ಪ್ರಯಾಣ ಬೆಳೆಸಿತು. ಲಂಡನ್ನಿನಿಂದ ಕೇಂಬ್ರಿಜ್‌ಗೆ ನೂರು ಕಿಲೋಮೀಟರ್ ದೂರ, ಒಂದೂವರೆ ಗಂಟೆಯ ಪಯಣ. ಸಾಧಕರ ತಂಡ ಕೇಂಬ್ರಿಜ್‌ಗೆ ಹೋಗುವ ಹಾದಿಯಲ್ಲಿ ಅಪರೂಪದ ದೃಶ್ಯ ಕಾಣಸಿಕ್ಕಿತು. 2024ರಲ್ಲಿ ಅದೇ ಮೊದಲ ಸಲ ಲಂಡನ್ನಿನಲ್ಲಿ ಮಂಜಿನ ಮಳೆಯಾಗಿತ್ತು. ಪ್ರಯಾಣದ ಉದ್ದಕ್ಕೂ ಹತ್ತಿಯಂತೆ ಮಂಜು ನೆಲದ ಮೇಲಿಳಿಯುವುದು ಕಾಣಿಸುತ್ತಿತ್ತು. ಎರಡೂ ಬದಿಯಲ್ಲಿ ವಿಶಾಲವಾದ ಬಯಲುಗಳ ನಡುವೆ, ಸಾಧಕರಿರುವ ಬಸ್ಸು ಕೇಂಬ್ರಿಜ್‌ನತ್ತ ಸಾಗಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಸಾಧಕರನ್ನು ಸ್ವಾಗತಿಸುತ್ತಾ ಕೇಂಬ್ರಿಜ್ ಯೂನಿಯನ್ ಮಹತ್ವವನ್ನು ವಿವರಿಸಿದರು. `ಕನ್ನಡ ಮಾಸದಲ್ಲಿ ನಾವೆಲ್ಲ ಈ ಐತಿಹಾಸಿಕ ಜಾಗದಲ್ಲಿ ಸೇರಿರುವುದು ಹೆಮ್ಮೆಯ ಸಂಗತಿ. ಇದು ಅತ್ಯಂತ ಪುರಾತನವಾದ ಮತ್ತು ಇತಿಹಾಸ ಪ್ರಸಿದ್ಧವಾದ ಡಿಬೇಟ್ ಚೇಂಬರ್. ಇದಕ್ಕಿಂತ ದೊಡ್ಡ ಮೀಟಿಂಗು ರೂಮುಗಳು, ಇದಕ್ಕಿಂತ ಅದ್ದೂರಿಯಾದ ಸಭಾಮಂದಿರಗಳನ್ನು ನೀವೆಲ್ಲ ನೋಡಿರಬಹುದು. ಆದರೆ ಕೇಂಬ್ರಿಜ್ ಯೂನಿಯನ್ ಡಿಬೇಟ್ ಚೇಂಬರಿಗೆ ಇರುವ ಮಹತ್ವವೇ ಬೇರೆ. ನೀವು ನೋಡುತ್ತಿರುವ ಬ್ರಿಟಿಷ್ ನಿರ್ಮಾಣ ಕೌಶಲ, ಈ ಕೋಣೆಯ ಸೌಂದರ್ಯ, ಎರಡು ಶತಮಾನಗಳ ನಂತರವೂ ಅದನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು, ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಅಪೂರ್ವ ಕಾರ್ಯ’ ಎಂದು ರವಿ ಹೆಗಡೆ ಹೇಳಿದರು.

ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ನಡೆಯುವ ಶೈಲಿಯಲ್ಲಿಯೇ ಇಲ್ಲಿಯೂ ಚರ್ಚೆ ನಡೆಯುತ್ತದೆ. ವಿಶ್ವಪ್ರಸಿದ್ಧ ಚರ್ಚಾಪಟುಗಳು ಕೇಂಬ್ರಿಜ್ ಯೂನಿಯನ್ನಿಗೆ ಬಂದು ಮಾತಾಡಿದ್ದೆ. ಚರ್ಚಿಲ್, ರೂಸ್‌ವೆಲ್ಟ್ ಅವರಿಂದ ಹಿಡಿದು ದಲಾಯಿ ಲಾಮಾ ತನಕ ಅನೇಕ ದೇಶಗಳ ಮಂದಿ ಇಲ್ಲಿ ಮಾತಾಡಿದ್ದಾರೆ. ಇಲ್ಲಿ ಗೋಡೆಯ ಮೇಲೆ ಯೆಸ್ ಮತ್ತು ನೋ- ಅನ್ನುವುದನ್ನು AYES ಮತ್ತು NOES ಎಂದು ಬರೆದಿದ್ದಾರೆ. ಇಂಥ ವಿಶಿಷ್ಟವಾದ ಜಾಗದಲ್ಲಿ ನೀವೆಲ್ಲ ಇಂದು ಅನೇಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಲಿದ್ದೀರಿ. ಬ್ರಿಟನ್ನಿನ ಉತ್ಕೃಷ್ಟ ವ್ಯಕ್ತಿಗಳು ತಮ್ಮ ಅನುಭವ ಮಂಡಿಸಲಿದ್ದಾರೆ ಎಂದು ರವಿ ಹೆಗಡೆ ಕಾರ್ಯಕ್ರಮದ ಸ್ವರೂಪದ ಪರಿಚಯ ಮಾಡಿಕೊಟ್ಟರು.

Related Video