ಬೆಂಗಳೂರಿನಲ್ಲಿ ಗುಂಡಿ ಗಂಡಾಂತರ: ಕೋಮಾ ಸೇರಿದ ಬೈಕ್ ಸವಾರ, ಬಿಬಿಎಂಪಿಗೆ ಇನ್ನೆಷ್ಟು ಬಲಿ ಬೇಕು?
ಬೆಂಗಳೂರಿನಲ್ಲಿ ಗುಂಡಿ ಗಂಡಾಂತರ ಮುಂದುವರಿದಿದೆ. ಗುಂಡಿಗೆ ಬಿದ್ದ ಬೈಕ್ ಸವಾರ ಆಸ್ಪತ್ರೆ ಸೇರಿ ಕೋಮಾದಲ್ಲಿದ್ದಾರೆ, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಆತನ ಪತ್ನಿ ಚಿಕಿತ್ಸೆ ವೆಚ್ಚಕ್ಕಾಗಿ ಪರದಾಡುತ್ತಿದ್ದಾರೆ ಇನ್ನೊಂದು ಕಡೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
ಬೆಂಗಳೂರು (ನ.5): ರಾಜಧಾನಿ ಬೆಂಗಳೂರಿನಲ್ಲಿ ಗುಂಡಿಗಳ ಅವಾಂತರ ಮುಂದುವರಿದಿದ್ದರೆ, ಎಮ್ಮೆ ಚರ್ಮದ ಅಧಿಕಾರಿಗಳು ಅದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವಂತೆ ಕುಳಿತಿದ್ದಾರೆ. ಗುಂಡಿಗೆ ಬಿದ್ದ ಬೈಕ್ ಸವಾರ ಸಂದೀಪ್ ಕೋಮಾಗೆ ಜಾರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದೆಡೆ ಆತನ ಪತ್ನಿ ಚಿಕಿತ್ಸೆ ವೆಚ್ಚಕ್ಕಾಗಿ ಪರದಾಟ ನಡೆಸುತ್ತಿದ್ದರೆ, ಇನ್ನೊಂಡೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಕಳೆದ ಮಂಗಳವಾರ ಕ್ರಿಕೆಟ್ ಆಟ ಮುಗಿಸಿ ವಾಪಸಾಗುವ ವೇಳೆ, ಜಾಲಹಳ್ಳಿಯ ಗಂಗಮ್ಮ ರಸ್ತೆಯಲ್ಲಿ ಸಂದೀಪ್ ಗುಂಡಿಗೆ ಬಿದ್ದಿದ್ದರು. ಈ ವೇಳೆ ಅವರ ತಲೆಗೆ ಗಂಭೀರ ಗಾಯವಾಗಿತ್ತು.
ಬೆಂಗಳೂರು: ಇಂದು ಮಧ್ಯಾಹ್ನ 12 ರೊಳಗೆ ರಸ್ತೆ ಗುಂಡಿ ಮುಚ್ಚಿ..!
ಈ ಬಗ್ಗೆ ಸುವರ್ಣನ್ಯೂಸ್ಗೆ ಸಂದೀಪ್ ಪತ್ನಿ ಸೀಮಾ ಪ್ರತಿಕ್ರಿಯೆ ನೀಡಿದ್ದು, 7 ವರ್ಷದ ಮಗು ನಮಗಿದೆ. ಬಿಬಿಎಂಪಿ ತಪ್ಪಿಗೆ ನಮಗೇಕೆ ಶಿಕ್ಷೆ. ನನ್ನ ಗಂಡ ಕೋಮಾದಲ್ಲಿರೋದಕ್ಕೆ ಬಿಬಿಎಂಪಿಯೇ ಕಾರಣ. ಆಸ್ಪತ್ರೆಗೆ ಕಟ್ಟೋದಕ್ಕೆ ನಮ್ಮ ಬಳಿ ಹಣ ಕೂಡ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.