ಟೋಲ್ನಲ್ಲೇ ಬಲೆಗೆ ಬಿದ್ದ ಮಾಡಾಳ್, ನಡುರಸ್ತೆಯಲ್ಲೆ ಬಿತ್ತು ಕೈಗೆ ಕೋಳ!
ನಿರೀಕ್ಷಣಾ ಜಾಮೀನು ರದ್ದಾದ ಬೆನ್ನಲ್ಲಿಯೇ ನಾಪತ್ತೆಯಾಗಿದ್ದ ಚೆನ್ನಗಿರಿಯ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸ್ ನಡುರಸ್ತೆಯಲ್ಲಿಯೇ ಬಂಧಿಸಿದೆ. ಕ್ಯಾತ್ಸಂದ್ರ ಟೋಲ್ನಲ್ಲಿ ಲೋಕಾಯುಕ್ತ ಪೊಲೀಸ್ ಶಾಸಕನನ್ನು ಬಂಧಿಸಿದೆ.
ಬೆಂಗಳೂರು (ಮಾ.27): 8 ಕೋಟಿ ರೂಪಾಯಿ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ದಾವಣಗೆರೆಯ ಚೆನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪರನ್ನು ಲೋಕಾಯುಕ್ತ ಪೊಲೀಸ್ ಬಂಧಿಸಿದೆ. ಅವರ ನಿರೀಕ್ಷಣಾ ಜಾಮೀನು ರದ್ದಾದ ಬೆನ್ನಲ್ಲಿಯೇ ನಾಪತ್ತೆಯಾಗಿದ್ದ ಮಾಡಾಳ್ ವಿರುಪಾಕ್ಷಪ್ಪ ಅವರನ್ನು ಕ್ಯಾತ್ಸಂದ್ರ ಟೋಲ್ ಬಳಿ ಪೊಲೀಸರು ಬಂಧಿಸಿದ್ದಾರೆ.
ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನು ರದ್ದಾಗಿರುವ ವಿಷಯ ತಿಳಿಯುತ್ತಿದ್ದಂತೆ ಚೆನ್ನಗಿರಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಮಾಡಾಳ್ ವಿರುಪಾಕ್ಷಪ್ ಎಸ್ಕೇಪ್ ಆಗುವ ಪ್ರಯತ್ನ ಮಾಡಿದ್ದರು. ಕಾರ್ಯಕ್ರಮ ಮುಗಿಸಿ ಮನೆಗೆ ಬಂದಿದ್ದ ಮಾಡಾಳ್ ವಿರೂಪಾಕ್ಷಪ್ಪ. ಕೆಲ ದಾಖಲೆಗಳನ್ನ ತೆಗೆದುಕೊಂಡು ಕಾರಿನಲ್ಲಿ ಹೊರಡುವ ಸಿದ್ಧತೆಯಲ್ಲಿದ್ದರು. ಆ ಮೂಲಕ ಬಂಧನದಿಂದ ತಪ್ಪಿಸಿಕೊಳ್ಳಲು ಮತ್ತೆ ಪ್ರಯತ್ನ ಮಾಡುತ್ತಿದ್ದರು.
ಎದೆ ಹಿಡ್ಕೊಂಡು ಮಾಡಾಳ್ ಡ್ರಾಮಾ: ಏನ್ ತೊಂದ್ರೆ ಇಲ್ಲ ಕರ್ಕೊಂಡು ಹೋಗಿ ಎಂದ ವೈದ್ಯರು
ಖಾಸಗಿ ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಅವರನ್ನು ಟೋಲ್ ಪ್ಲಾಜಾದಲ್ಲಿಯೇ ಅಡ್ಡಗಡ್ಡಿದ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡರು. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಯಿತು. ಆ ಬಳಿಕ ಅವರನ್ನು ಲೋಕಾಯುಕ್ತ ಕಚೇರಿಗೆ ಶಿಫ್ಟ್ ಮಾಡಲಾಗಿದೆ.