ಉರಗರಕ್ಷಕ ವಾವಾ ಸುರೇಶ್ಗೆ ಕಚ್ಚಿದ ನಾಗರಹಾವು... ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
ಹಾವುಗಳನ್ನು ಹಿಡಿದು ಅವುಗಳನ್ನು ಕಾಡಿಗೆ ಬಿಟ್ಟು ಕಾಪಾಡುವುದರಲ್ಲಿ ಖ್ಯಾತರಾಗಿದ್ದ ನಲವತ್ತೇಳು ವರ್ಷದ ಸುರೇಶ್ ಅವರಿಗೆ ನಾಗರ ಹಾವು ಕಚ್ಚಿದ್ದು, ಕೊಟ್ಟಾಯಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾವುಗಳನ್ನು ಹಿಡಿದು ಅವುಗಳನ್ನು ಕಾಡಿಗೆ ಬಿಟ್ಟು ಕಾಪಾಡುವುದರಲ್ಲಿ ಖ್ಯಾತರಾಗಿದ್ದ ನಲವತ್ತೇಳು ವರ್ಷದ ಸುರೇಶ್ ಅವರಿಗೆ ನಾಗರ ಹಾವು ಕಚ್ಚಿದ್ದು, ಕೊಟ್ಟಾಯಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದರೂ, ಮುಂದಿನ 48 ಗಂಟೆಗಳು ನಿರ್ಣಾಯಕ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಚಂಗನಾಶ್ಶೇರಿ ಸಮೀಪದ ಕುರಿಚಿ ಎಂಬ ಹಳ್ಳಿಯ ಮನೆಯೊಂದರಲ್ಲಿ ನಾಗರಹಾವು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಸುರೇಶ್ ಅವರಿಗೆ ನಾಗರಹಾವು ಕಚ್ಚಿತ್ತು.
ಸಳೀಯ ನಿವಾಸಿಯೊಬ್ಬರು ಸೆರೆಹಿಡಿದ ಘಟನೆಯ ವಿಡಿಯೋದಲ್ಲಿ ಸುರೇಶ್ ಅವರು ನಾಗರಹಾವನ್ನು ಗೋಣಿ ಚೀಲದೊಳಗೆ ಹಾಕಲು ಅದರ ಬಾಲವನ್ನು ಕೈಯಲ್ಲಿ ಹಿಡಿದು ತಲೆಕೆಳಗಾಗಿ ಹಿಡಿದಿದ್ದರು. ಆಗ ಅವರ ಬಲ ತೊಡೆಗೆ ಹಾವು ಕಚ್ಚಿದೆ. ಮಾಧ್ಯಮ ವರದಿಗಳ ಪ್ರಕಾರ ಸುರೇಶ್ ಅವರನ್ನು ಆಸ್ಪತ್ರೆಗೆ ಕರೆತಂದಾಗ ಅವರು ಪ್ರಜ್ಞಾಹೀನರಾಗಿದ್ದರು ಮತ್ತು ಗಂಭೀರ ಸ್ಥಿತಿಯಲ್ಲಿದ್ದರು. ಹಾವು ಕಚ್ಚಿದ ತಕ್ಷಣ ಸುರೇಶ್ ಹಾವನ್ನು ಕೈಯಿಂದ ಬಿಟ್ಟಿದ್ದು, ಅಲ್ಲಿ ಸೇರಿದ ಜನರು ಭಯದಿಂದ ಬೊಬ್ಬೆ ಹಾಕುವುದು ವಿಡಿಯೋದಲ್ಲಿದೆ.