
ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು: ಗ್ರಾ.ಪಂ. ಅಧ್ಯಕ್ಷ ಭೀಮನಗೌಡನ ಕೊಲೆ ರಹಸ್ಯ ಬಯಲು!
ವಿಜಯಪುರ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮನಗೌಡ ಬಿರಾದಾರ್ ಹತ್ಯೆಗೆ ರಾಜಕೀಯ ದ್ವೇಷ ಹಾಗೂ ಅಧಿಕಾರದ ಆಸೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಷೌರದ ಅಂಗಡಿಯಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆಗೈದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ವಿಜಯಪುರ (ಸೆ.04): ಒಂದು ಕಾಲದಲ್ಲಿ ಕುಖ್ಯಾತಿ ಪಡೆದಿದ್ದ ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮನಗೌಡ ಬಿರಾದಾರ್ ಅವರ ಹತ್ಯೆ ವಿಜಯಪುರ ಜಿಲ್ಲೆಯಲ್ಲಿ ತೀವ್ರ ಆತಂಕ ಮೂಡಿಸಿದೆ. ಹತ್ಯೆಯ ಹಿಂದಿನ ರಹಸ್ಯವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ, ಕೊಲೆಗೆ ಕಾರಣ ಬಹಿರಂಗಪಡಿಸಿದ್ದಾರೆ.
ಕ್ಷೌರದ ಅಂಗಡಿಯಲ್ಲಿ ನಡೆದಿದ್ದ ಘಟನೆ
ಆಗಸ್ಟ್ 26 ರಂದು ಬೆಳಿಗ್ಗೆ ಭೀಮನಗೌಡರು ಶೇವಿಂಗ್ ಮಾಡಿಸಲು ಕ್ಷೌರದ ಅಂಗಡಿಗೆ ಹೋಗಿದ್ದರು. ಅದೇ ಸಮಯದಲ್ಲಿ ಏಕಾಏಕಿ ಅಲ್ಲಿಗೆ ನುಗ್ಗಿದ ಇಬ್ಬರು ಹಂತಕರು, ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಪಿಸ್ತೂಲಿನಿಂದ ಗುಂಡು ಹಾರಿಸಿ ಪರಾರಿಯಾಗಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಹಂತಕ ಜಾಕೀರ್ ಸೇರಿದಂತೆ ಇಬ್ಬರನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಕೊಲೆಗೆ ಕಾರಣವೇನು?
ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ, ಇದು ರಾಜಕೀಯ ದ್ವೇಷ ಹಾಗೂ ಅಧಿಕಾರದ ಆಸೆಯಿಂದ ನಡೆದ ಕೃತ್ಯ ಎಂಬುದು ಬಯಲಾಗಿದೆ. ಹಂತಕ ಜಾಕೀರ್ ಮತ್ತು ಭೀಮನಗೌಡರ ನಡುವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಕುರಿತು ಕಳೆದ 2 ವರ್ಷಗಳಿಂದ ವೈಷಮ್ಯವಿತ್ತು. ಮುಂದಿನ ದಿನಗಳಲ್ಲಿ ಜಾಕೀರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದನು. ಆದರೆ, ಭೀಮನಗೌಡರು ಅದಕ್ಕೆ ಅಡ್ಡಬರುತ್ತಾರೆಂಬ ಭಯದಿಂದ ಕೊಲೆಗೆ ಸಂಚು ರೂಪಿಸಿದ್ದಾಗಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಭೀಮಾ ತೀರದಲ್ಲಿ ಹೊಸ ಆತಂಕ
ಭೀಮನಗೌಡರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ಅವರ ಕುಟುಂಬವು ಸುಮಾರು 50 ವರ್ಷಗಳಿಂದ ಗ್ರಾಮ ಪಂಚಾಯಿತಿ ಅಧಿಕಾರದಲ್ಲಿದೆ. ಭೀಮನಗೌಡರು 'ಬಡವರ ಬಂಧು' ಎಂದೇ ಜನಪ್ರಿಯರಾಗಿದ್ದರು. ಭೀಮಾ ತೀರ ಇತ್ತೀಚೆಗೆ ಶಾಂತವಾಗಿದ್ದು, ಈ ಘಟನೆಯಿಂದ ಮತ್ತೆ ಆ ಭಾಗದಲ್ಲಿ ಗ್ಯಾಂಗ್ ವಾರ್ ಆರಂಭವಾಗುವ ಆತಂಕ ಸೃಷ್ಟಿಸಿದೆ. ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.