Asianet Suvarna News Asianet Suvarna News

ಏಳು ವರ್ಷಗಳಿಂದ ಕೆಲಸಕ್ಕೆ ಚಕ್ಕರ್.. ಸಂಬಳಕ್ಕೆ ಹಾಜರ್..!

ಮಕ್ಕಳಿಗೆ ವಿದ್ಯೆ ಬುದ್ಧಿ ಕಲಿಸುವ ಸಮಾಜದ ಗೌರವಾನ್ವಿತ ಹುದ್ದೆ ಶಿಕ್ಷಕ ವೃತ್ತಿ. ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಬೇಕಾಗಿದ್ದ ಶಿಕ್ಷಕ ಕಳೆದ ಹಲವು ವರ್ಷಗಳಿಂದ ಶಾಲೆಗೆ ಸರಿಯಾಗಿ ಹಾಜರಾಗಿಲ್ಲ. ಮಕ್ಕಳಿಗೆ ಪಾಠವನ್ನೇ ಮಾಡದೆ ತಿಂಗಳ ಸಂಬಳ ಎಣಿಸುತ್ತಿದ್ದ ಶಿಕ್ಷಕಕನ್ನು ಈಗ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಗಳ್ಳಿ. ಉಡುಪಿ(Udupi) ಜಿಲ್ಲೆ ಕುಂದಾಪುರ ತಾಲೂಕಿನ  ಗ್ರಾಮೀಣಿ ಪ್ರದೇಶದಲ್ಲಿರೋ ಈ ಶಾಲೆಗೆ ಮೂವರು ಶಿಕ್ಷಕರಿದ್ದಾರೆ. ಆದರೆ ಮಕ್ಕಳಿಗೆ ಪಾಠ ಮಾಡೋದು ಮಾತ್ರ ಕೇವಲ ಇಬ್ಬರು ಶಿಕ್ಷಕರು. ಕಳೆದ 7 ಷರ್ವಗಳಿಂದಲೂ ಶಿಕ್ಷನೊಬ್ಬ(Teacher) ಶಾಲೆಗೆ ಬರ್ತಿಲ್ಲ. ಹಾಗಂತ ಸಂಬಳ ಮಾತ್ರ ಬಿಟ್ಟಿಲ್ಲ. ದಿನಕರ್ ಶೆಟ್ಟಿ ಎಂಬ ಶಿಕ್ಷಕ ಈ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದಾರೆ. ಆದ್ರೆ ಕಳೆದ 7 ವರ್ಷದಿಂದ ಮಕ್ಕಳಿಗೆ ಪಾಠ(Teaching) ಮಾಡಿಲ್ಲ. ಶಾಲೆಯ ಯಾವ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿಲ್ಲ. ನನಗೂ ಶಾಲೆಗೂ ಸಂಬಂಧವೇ ಇಲ್ಲ ಎನ್ನುವಂತಿದ್ದ ದಿನಕರ್ ಶೆಟ್ಟಿ ತಿಂಗಳ ಕೊನೆಯಲ್ಲಿ ಸಂಬಳ ಮಾತ್ರ ಬಿಟ್ಟಿಲ್ಲ. ಈತನ ಕಳ್ಳಾಟವನ್ನು ಈಗ ಗ್ರಾಮ ಪಂಚಾಯತ್ ಅಧ್ಯಕ್ಷ ಲಾರೆನ್ಸ್ ಡಿಸೋಜಾ ಬಯಲಿಗೆಳೆದಿದ್ದಾರೆ. ಲಾರೆನ್ಸ್ ಡಿಸೋ ಜಾ ಶಿಕ್ಷಣ ಇಲಾಖೆಗೆ ದೂರು ನೀಡಿದ ಬೆನ್ನಲ್ಲೇ ಈಗ ದಿನಕರ್ ಶೆಟ್ಟಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ದಿನಕರ ಶೆಟ್ಟಿ ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಕೂಡ ಹೌದು. ಇದೇ ಕಾರಣಕ್ಕೆ ಉಳಿದ ಶಿಕ್ಷಕರು ಯಾರು ಈತನ ವಿರುದ್ಧ ದೂರು ಕೊಟ್ಟಿರಲಿಲ್ಲ. ಗ್ರಾಮ ಪಂಚಾಯತ್ ಅಧ್ಯಕ್ಷರು ದೂರು ಕೊಟ್ಟ ಬಳಿಕ ಶಾಲೆಗೆ ಶಿಕ್ಷಣ ಇಲಾಖೆಯ(Department of Education) ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆಗ ದಿನಕರ್ ಶೆಟ್ಟಿ ಗೈರುಹಾಜರಿ ಸಾಬೀತಾಗಿದೆ. ಇದರ ಬೆನ್ನಲ್ಲೇ ಅಮಾನತು ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ವೀಕ್ಷಿಸಿ:  ಹಾರ್ಟ್ ಅಟ್ಯಾಕ್ ಸಾವಿನ ಪ್ರಮಾಣ ತಗ್ಗಿಸಲು ಹೊಸ ಯೋಜನೆ : ಏನಿದು AED ಟ್ರೀಟ್ಮೆಂಟ್..?

Video Top Stories