
ಬೆಂಗಳೂರು ಕೆರೆ ಶುದ್ಧೀಕರಣ: ಅಧಿಕಾರಿಗಳ ಬೆಂಡೆತ್ತಿದ NGT
ಕೆರೆ ಶುದ್ಧೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (NGT), ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳ ವಿರುದ್ಧ ಗರಂ ಆಗಿದೆ. ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶ, ಮಾತಿನಲ್ಲೇ ಅಧಿಕಾರಿಗಳ ಬೆಂಡೆತ್ತಿದ ಘಟನೆ ನಡೆದಿದೆ.
ಬೆಂಗಳೂರು (ಡಿ.11): ಬೆಂಗಳೂರಿನ ಬೆಳ್ಳಂದೂರು ಮತ್ತು ವರ್ತೂರು ಕೆರೆ ಶುದ್ಧೀಕರಣ ಪ್ರಕ್ರಿಯೆ ವಿಳಂಬವಾಗುತ್ತಿರುವುದಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (NGT) ಕೆಂಡಾಮಂಡಲವಾಗಿದೆ.
Add Asianetnews Kannada as a Preferred Source

ಬಿಬಿಎಂಪಿ ಆಯುಕ್ತರು ಮತ್ತು ಜಲಮಂಡಳಿ ಅಧ್ಯಕ್ಷರನ್ನು ಬುಧವಾರ ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, ಮಾತಿನಲ್ಲೇ ಬೆಂಡೆತ್ತಿದ ಘಟನೆ ನಡೆದಿದೆ. ಕೆಲಸ ಪೂರ್ಣಗೊಳಿಸಲು NGT ಈಗ ಮಾರ್ಚ್ 31ರ ಗಡುವನ್ನು ವಿಧಿಸಿದ್ದು, ತಪ್ಪಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಸ್ಥಳೀಯರಿಗೆ ಶಾಪವಾಗಿ ಪರಿಣಮಿಸಿದ್ದು, ಬೆಂಕಿ, ನೊರೆ, ವಾಸನೆ ಮುಂತಾದ ಬೇಡವಾದ ಕಾರಣಗಳಿಗೆ ಆಗಾಗ ಸುದ್ದಿಯಾಗುತ್ತಿರುತ್ತದೆ.
ಕಳೆದ ನವೆಂಬರ್ನಲ್ಲಿ ನಗರದ ಹುಳಿಮಾವು ಕೆರೆ ಕೋಡಿ ಒಡೆದು ಮನೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿ, ಅಪಾರ ನಷ್ಟವಾಗಿರುವುದನ್ನು ಸ್ಮರಿಸಬಹುದು.