Asianet Suvarna News Asianet Suvarna News

ಭಾರತದ ಪ್ರತಿಷ್ಠಿತ ಸಂಸ್ಥೆ IISc ಕಡೆ ಅಮೃತ ಮಹೋತ್ಸವ ಯಾತ್ರೆ

ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆಯ ಅಂಗವಾಗಿ ಭಾರತದ ಪ್ರತಿಷ್ಠಿತ ಸಂಸ್ಥೆ IIScಗೆ ಭೇಟಿ ನೀಡಲಾಯಿತು. ಇಲ್ಲಿ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆ ಯಶಸ್ವಿಯಾಗಿದೆ. ಉತ್ಸಾಹಿ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ಭಾರತದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಇಂಡಿಯನ್ ಇನ್ಸಿಟ್ಯೂಟ್ ಆಫ್‌ ಸೈಯನ್ಸ್‌ಗೆ ಭೇಟಿ ನೀಡಲಾಯಿತು. ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡ ಪ್ರಭ ಸಹಾಯಕ ಸಂಪಾದಕರಾದ ವಿನೋದಕುಮಾರ್ ಬಿ.ನಾಯ್ಕ್‌ ಜೊತೆಯಲ್ಲಿದ್ದು ಕೆಡೆಟ್ಸ್‌ಗೆ ಮಾರ್ಗರ್ಶನ ನೀಡಿದರು. ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್‌ ಸೈಯನ್ಸ್‌ ಸಂಸ್ಥೆಯ ಕೊಡುಗೆ ಅಪಾರವಾದುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. 

ಅಮೃತ ಮಹೋತ್ಸವ ಯಾತ್ರೆ: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಹೆಮ್ಮೆ ಇಸ್ರೋ

ಐಐಎಸ್‌ಸಿಯ ಡೆಪ್ಯುಟಿ ರಿಜಿಸ್ಟಾರ್ ವೀರಣ್ಣ ಕಮ್ಮಾರ ಸಂಸ್ಥೆಯ ಬಗ್ಗೆ ವಿದ್ಯಾರ್ಥಿಗಳಿಗೆ ಹಲವು ಮಾಹಿತಿಗಳನ್ನು ತಿಳಿಸಿಕೊಟ್ಟರು. ಆ ಬಳಿಕ ಕೆಡೆಟ್ಸ್‌ಗಳು ಐಐಎಸ್‌ಸಿ ಸಂಸ್ಥಾಪಕರಾದ ಜೆ.ಎನ್ ಟಾಟಾ ಅವರ ಪ್ರತಿಮೆಗೆ ಕೃತಜ್ಞತೆಯಿಂದ ವಂದಿಸಿದರು. ಬಳಿಕ ವಿಮಾನ ಮತ್ತು ಉಡಾವಣಾ ವಾಹನಗಳ ಮೇಲೆ ವಾಯುಒತ್ತಡ ಉಂಟು ಮಾಡುವ ಪರಿಣಾಮಗಳನ್ನು ಅಧ್ಯಯನ ಮಾಡುವ ಓಪನ್ ಸರ್ಕ್ಯೂಟ್ ವಿಂಡ್‌ ಟನಲ್‌ಗೆ ಭೇಟಿ ನೀಡಿದರು. ಇಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‌ನ ಅಸೋಸಿಯೇಟ್ ಪ್ರೊಫೆಸರ್ ಫ್ರೊ.ಸೌರವ್ ದಿವಾನ್ ಕೆಡೆಟ್ಸ್‌ಗೆ ವಿಂಡ್‌ ಟನಲ್‌ ಬಗ್ಗೆ ಮಾಹಿತಿ ನೀಡಿದರು. ಬಳಿಕ ಹಲವು ವಿಭಾಗಗಳ ಪ್ರೊಫೆಸರ್ಸ್ ಹಲವು ಉಪಕರಣಗಳ ಬಗ್ಗೆ ಕೆಡೆಟ್ಸ್‌ಗಳಿಗೆ ತಿಳಿಸಿಕೊಟ್ಟರು.