ಇದು ದೈವಕ್ಕೆ ಅಪಚಾರ.. ದೈವನರ್ತಕರ ಬೇಸರ; ಹುಚ್ಚಾಟ ಆಡೋರಿಗೆ ಕಾಂತಾರ ಟೀಮ್ ಎಚ್ಚರಿಕೆ..!

ಸಿನಿಮಾತಂಡಕ್ಕೆ ತಲೆನೋವು ತಂದಿರೋದು ದೈವದ ವೇಷ, ಹಾಕೋದು ದೈವ ಆವಾಹನೆಯಾದಂತೆ ನಟಿಸೋ ಹುಚ್ಚು ಪ್ರೇಕ್ಷಕರು. ಈ ರೀತಿ ಮಾಡಿದರೆ ಅದು ಪವಿತ್ರ ದೈವಗಳಿಗೆ ಅವಮಾನ ಮಾಡಿದಂತೆ.. ಹೀಗೆ ಹುಚ್ಚಾಟ ಆಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

Share this Video
  • FB
  • Linkdin
  • Whatsapp

ಕಾಂತಾರ ಚಾಪ್ಟರ್-1 ಸಿನಿಮಾ 'ಬಾಕ್ಸಾಫೀಸ್'ನಲ್ಲಿ ಅಬ್ಬರಿಸ್ತಾ ಇದೆ. ಸೋಮವಾರದ ದಿನವೂ ದಾಖಲೆ ಕಲೆಕ್ಷನ್ ಆಗಿದೆ. ಆದ್ರೆ ಈ ನಡುವೆ ಸಿನಿಮಾತಂಡಕ್ಕೆ ತಲೆನೋವು ತಂದಿರೋದು ದೈವದ ವೇಷ, ಹಾಕೋದು ದೈವ ಆವಾಹನೆಯಾದಂತೆ ನಟಿಸೋ ಹುಚ್ಚು ಪ್ರೇಕ್ಷಕರು. ಈ ರೀತಿ ಮಾಡಿದರೆ ಅದು ಪವಿತ್ರ ದೈವಗಳಿಗೆ ಅವಮಾನ ಮಾಡಿದಂತೆ.. ಹೀಗೆ ಹುಚ್ಚಾಟ ಆಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

Add Asianetnews Kannada as a Preferred SourcegooglePreferred

ಹೌದು, ಯಶಸ್ವಿ ಪ್ರದರ್ಶನ ಕಾಣ್ತಾ ಇರೋ ಕಾಂತಾರ ಟೀಂಗೆ ತಲೆನೋವು ತಂದಿರೋ ಏಕೈಕ ವಿಚಾರ ಅಂದ್ರೆ ಇದೇ. ದೈವದ ವೇಷಗಳನ್ನ ತೊಟ್ಟು ಚಿತ್ರಮಂದಿರಕ್ಕೆ ಬರೋದು. ಅಲ್ಲಿ ಹುಚ್ಚು ಹುಚ್ಚಾಗಿ ನರ್ತಿಸೋದು.. ಇನ್ನೊಂದು ಕಡೆಗೆ ಸಿನಿಮಾ ನೋಡ್ತಾ ಮೈಮೇಲೆ ದೈವ ಆವಾಹನೆ ಆದವರಂತೆ ನಟಿಸೋದು ದಿನೇ ದಿನೇ ಜಾಸ್ತಿ ಆಗ್ತಾ ಇದೆ.

ಅಸಲಿಗೆ ಸಿನಿಮಾ ರಿಲೀಸ್ ಆದ ದಿನವೇ ಬೆಂಗಳೂರಿನಲ್ಲಿ ಒಬ್ಬ ಯುವಕ ದೈವ ಆವಾಹನೆ ಆದವರಂತೆ ನಟನೆ ಮಾಡಿದ್ದ. ಈಗ ಆತ ಕ್ಷಮೆ ಕೇಳಿದ್ದಾನೆ. ಈ ನಡುವೆ ತಮಿಳುನಾಡಿನ ದಿಂಡಿಗಲ್​ನ ಚಿತ್ರಮಂದಿರದಲ್ಲಿ ಒಬ್ಬ ಯುವಕ ಪಂಜುರ್ಲಿ ದೈವದ ವೇಷ ತೊಟ್ಟು ಹುಚ್ಚು ಹುಚ್ಚಾಗಿ ನರ್ತಿಸಿದ್ದ.

ಇನ್ನೂ ಹಾವೇರಿಯಲ್ಲಿ ಒಬ್ಬ ಮಹಿಳೆ ಸಿನಿಮಾ ನೋಡ್ತಾ ತನ್ನ ಮೈಮೇಲೆ ದೈವ ಬಂದಂತೆ ವರ್ತಿಸಿದ್ಳು. ಸಿನಿಮಾ ನೋಡೋದನ್ನ ಬಿಟ್ಟು ಜನರೆಲ್ಲಾ ಈಕೆಯ ಅರಚಾಟ ಕಿರುಚಾಟ ನೋಡುವಂತೆ ಮಾಡಿದ್ಳು.

ಇದೀಗ ಮತ್ತೊಬ್ಬ ಮಹಿಳೆ ಕೂಡ ಇದೇ ರೀತಿ ಮೈಮೇಲೆ ಆವಾಹನೆ ಆದಂತೆ ವರ್ತಿಸಿದ್ದಾಳೆ. ದೇಶದ ನಾನಾ ಕಡೆಗೆ ಇಂಥಾ ಘಟನೆಗಳು ನಡೀತಾನೆ ಇವೆ. ಸೋಷಿಯಲ್ ಮಿಡಿಯಾ ತುಂಬಾ ಇಂಥಾ ಅನೇಕ ವಿಡಿಯೋಗಳು ವೈರಲ್ ಆಗಿವೆ.

ಕರಾವಳಿಯ ದೈವಗಳು , ದೈವಾರಾಧನೆಗೆ ಅದರದ್ದೇ ಇತಿಹಾಸ, ಪರಂಪರೆ ಪಾವಿತ್ರ್ಯತೆ ಇದೆ. ಹೀಗೆ ಯಾರೆಂದರೆ ಯಾರು ದೈವದ ವೇಷ ತೊಟ್ಟುಕೊಳ್ಳೋದು, ದೈವ ಆವಾಹನೆ ಆದಂತೆ ನಟಿಸೋದು ದೈವಕ್ಕೆ ಅಪಚಾರ ಎಸಗಿದಂತೆ. ಅಸಲಿಗೆ 2022ರಲ್ಲಿ ಕಾಂತಾರ ತೆರೆಗೆ ಬರುವ ಮುನ್ನ ಹೊರಜಗತ್ತಿನ ತುಳುನಾಡಿನ ದೈವಗಳ ಬಗ್ಗೆ ಅಷ್ಟಾಗಿ ತಿಳುವಳಿಕೆ ಇರಲಿಲ್ಲ ಆದ್ರೆ ಕಾಂತಾರದಲ್ಲಿ ಪಂಜುರ್ಲಿ, ಗುಳಿಗ ದೈವಗಳನ್ನ ನೋಡಿದ ಮೇಲೆ ಎಲ್ಲರಿಗೂ ಈ ಬಗ್ಗೆ ಕುತೂಹಲ ಹೆಚ್ಚಾಯ್ತು.

ಕುತೂಹಲದಿಂದ ತಿಳಿದುಕೊಳ್ಳೋದು ಬೇರೆ, ಆದ್ರೆ ಮಕ್ಕಳಿಗೆ ದೈವದ ವೇಷ ಹಾಕಿಸೋದು. ವೇಷ ಭೂಷಣ ಸ್ಪರ್ದೆಗಳಲ್ಲಿ ಇದನ್ನ ಅನುಕರಿಸೋದು. ರೀಲ್ಸ್ ಗಾಗಿ ಈ ವೇಷ ತೊಡೋದು.. ಇಂಥಾ ಹುಚ್ಚಾಟಗಳನ್ನ ಜನ ಮಾಡ್ಲಿಕ್ಕೆ ಶುರುಮಾಡಿದ್ರು. ಆಗಲೇ ತುಳುನಾಡಿನ ದೈವನರ್ತಕರು ಕಾಂತಾರ ಸಿನಿಮಾವನ್ನ ಮುಂದುವರೆಸಬೇಡಿ ಅಂತ ಪ್ರತಿಭಟನೆ ಮಾಡಿದ್ರು. ಯಾವುದೇ ಸೀರಿಯಲ್, ಸಿನಿಮಾಗಳಲ್ಲಿ ದೈವಗಳನ್ನ ತೋರಿಸೋದು ಬೇಡ ಅಂತ ಆಗ್ರಹ ಮಾಡಿದ್ರು.

ಇದರ ಹೊರತಾಗಿಯೂ ಕಾಂತಾರ ಚಾಪ್ಟರ್​-1ನಲ್ಲಿ ದೈವಾರಾಧನೆ, ದೈವ ಆವಾಹನೆ ದೃಶ್ಯಗಳಿವೆ. ಇವುಗಳನ್ನ ಸೂಕ್ತ ಹಿರಿಯರ, ಮಾರ್ಗದರ್ಶಕರ ಸಲಹೆ ಪಡೆದೇ ಮಾಡಲಾಗಿದೆ. ಇವುಗಳನ್ನ ಅನುಕರಿಸಬೇಡಿ ಅಂತ ಸಿನಿತಂಡ ಟೈಟಲ್ ಕಾರ್ಡ್​ನಲ್ಲೇ ಎಚ್ಚರಿಸಿದೆ. ಆದ್ರೆ ಜನ ಮಾತ್ರ ಮತ್ತೆ ಸಿನಿಮಾ ನೋಡಿ ಹುಚ್ಚಾಟಗಳನ್ನ ಮಾಡ್ತಾ ಇದ್ದಾರೆ.

ಹೌದು ಇನ್ಮುಂದೆ ಯಾವುದೇ ಚಿತ್ರಮಂದಿರಗಳಲ್ಲಿ ಅಥವಾ ಸಭೆ, ಸಮಾರಂಭಗಳಲ್ಲಿ ಇಂಥಾ ದೈವ ಆವಾಹನೆ, ಅನುಕರಣೆ ಮಾಡಿದ್ದು ಕಂಡುಬಂದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ತಿವಿ ಅಂತ ಕಾಂತಾರ ಟೀಂ ಬಹಿರಂಗವಾಗಿ ಎಚ್ಚರಿಕೆ ನೀಡಿದೆ. ಸಿನಿಮಾ ನೋಡಿ ಎಂಜಾಯ್ ಮಾಡಿ.. ಆದ್ರೆ ಇಂಥಾ ಹುಚ್ಚಾಟ ಆಡಬೇಡಿ ಅಂತ ಚಿತ್ರತಂಡ ಎಚ್ಚರಿಸಿದೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ…

Related Video