
ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಸರಣಿ 'ಬ್ರೇಕ್ ಫಾಸ್ಟ್ ಮೀಟಿಂಗ್'ಗಳು ಒಗ್ಗಟ್ಟಿನ ಪ್ರದರ್ಶನಕ್ಕೆ ಕಾರಣವಾಗಿವೆ. ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ ಆಗುತ್ತಾರೆ ಎಂಬ ಸಿದ್ದರಾಮಯ್ಯನವರ ಹೇಳಿಕೆಯು ನಾಯಕತ್ವದ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದೆ.
ಬೆಂಗಳೂರು (ಡಿ.03): ಕರ್ನಾಟಕ ರಾಜಕಾರಣದ 'ಜೋಡೆತ್ತುಗಳು' ಎಂದೇ ಖ್ಯಾತಿ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಇತ್ತೀಚೆಗೆ ನಡೆದ ಸರಣಿ 'ಬ್ರೇಕ್ ಫಾಸ್ಟ್ ಮೀಟಿಂಗ್'ಗಳು ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ. ಶನಿವಾರ ಸಿಎಂ ನಿವಾಸ, ಮಂಗಳವಾರ ಡಿಸಿಎಂ ನಿವಾಸದಲ್ಲಿ ನಡೆದ ಈ ಸಭೆಗಳು ಕೇವಲ ಉಪಾಹಾರ ಕೂಟಗಳಾಗಿರದೆ, ಒಗ್ಗಟ್ಟು ಪ್ರದರ್ಶನ ಮತ್ತು ನಾಯಕತ್ವದ ಕುರಿತು ಕೆಲವು ಬಿಗ್ ಸಿಗ್ನಲ್ಗಳನ್ನು ರವಾನಿಸಿವೆ.
ಅಣ್ಣತಮ್ಮಂದಿರ 'ನಾಟಿ ಊಟ'ದ ಆಟ
ಬ್ರೇಕ್ ಫಾಸ್ಟ್ 2.0ರ ನಂತರ ಸಿದ್ದರಾಮಯ್ಯ ಅವರ ಮಾತಿನ ವರಸೆಯಲ್ಲಿ ಬದಲಾವಣೆ ಕಂಡುಬಂದಿದ್ದು, ಅವರ ವೈರಾಗ್ಯದ ಮಾತುಗಳು ಕುತೂಹಲ ಮೂಡಿಸಿವೆ. ಮೈಸೂರಿನ ಸಿದ್ದು ಅವರಿಗೆ ಡಿಕೆಶಿ ಮನೆಯಲ್ಲಿ ಸಿಕ್ಕ ನಾಟಿ ಕೋಳಿ ಸಾಂಬಾರ್ ರುಚಿ ಮತ್ತು ಆತಿಥ್ಯದ ನಂತರ, 'ರಾಜಕೀಯ ಶಾಶ್ವತವಲ್ಲ, ಏನು ಬೇಕಾದರೂ ಆಗಲಿ' ಎಂಬಂತಹ ತತ್ತ್ವಜ್ಞಾನದ ಮಾತುಗಳನ್ನು ಆಡಿದ್ದಾರೆ. 'ರಾಜಕೀಯವೇನು ನಮ್ಮಪ್ಪನ ಆಸ್ತಿನಾ? ಎಂದು ಪ್ರಶ್ನಿಸುವ ಮೂಲಕ, ಅವರು ತಾವು ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇದಕ್ಕೂ ಮುನ್ನ, ಡಿಕೆ ಶಿವಕುಮಾರ್ ಅವರು 'ನಾನು ಸಿದ್ದರಾಮಯ್ಯ ಬ್ರದರ್ಸ್' ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದೀಗ ಸಿಎಂ ಕೂಡ ಡಿಕೆಶಿ ಶಾಸನಕ್ಕೆ ಸಮ್ಮತಿಯ ಮುದ್ರೆ ಒತ್ತಿದಂತೆ, 'ನಾವು ಬ್ರದರ್ಸ್' ಎಂದು ಪುನರುಚ್ಚರಿಸಿದ್ದಾರೆ.
'ಹೈಕಮಾಂಡ್ ಹೇಳಿದಾಗ ಡಿಕೆ ಸಿಎಂ': ಸಿದ್ದು ಸ್ಪಷ್ಟೋಕ್ತಿ
ಈ ಎಲ್ಲ ಮಾತುಗಳ ನಡುವೆಯೇ, ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, 'ಹೈಕಮಾಂಡ್ ಹೇಳಿದಾಗ ಡಿಕೆ ಸಿಎಂ ಆಗ್ತಾರೆ' ಎಂದು ಸ್ಪಷ್ಟವಾಗಿ ಘೋಷಿಸಿದ್ದಾರೆ. ಸದ್ಯಕ್ಕೆ ನಾವಿಬ್ಬರೂ ಒಗ್ಗಟ್ಟಾಗಿದ್ದೇವೆ, ಎಲ್ಲ ಗುರಿ, ದಾರಿ ಒಂದೇ ಎಂದು ಘೋಷಿಸುವ ಮೂಲಕ, ಡಿಕೆಶಿ ಅವರು 'ಬ್ರದರ್ಸ್' ಎಂದು ಬರೆದ ಶಾಸನಕ್ಕೆ ಸಮ್ಮತಿ ಸೂಚಿಸಿದ್ದಾರೆ. ಆದರೆ, ಈ ಹಠಾತ್ ಒಗ್ಗಟ್ಟು ಪ್ರದರ್ಶನದ ಹಿಂದೆ ಊಹಾಪೋಹಗಳಿಗೆ ತೆರೆ ಎಳೆಯುವ ತಂತ್ರ ಅಡಗಿದೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಒಂದು ಕಡೆ ವೈರಾಗ್ಯದ ಮಾತು, ಇನ್ನೊಂದು ಕಡೆ ಡಿಕೆಶಿ ಸಿಎಂ ಆಗುವ ಕುರಿತು ಸ್ಪಷ್ಟ ಮಾತುಗಳ ಮೂಲಕ ಸಿಎಂ ಅವರು ಸೈಲೆಂಟ್ ಆಗಿ ತಮ್ಮ ರಾಜಕೀಯ ನಡೆಗಳ ಕುರಿತು ಸೂಚನೆ ನೀಡುತ್ತಿದ್ದಾರೆ.
ಇನ್ನೂ ಬೂದಿ ಮುಚ್ಚಿದ ಕೆಂಡ?
ಸಿದ್ದು-ಡಿಕೆಶಿ ನಡುವಿನ ಬ್ರೇಕ್ ಫಾಸ್ಟ್ ಮೀಟಿಂಗ್ಗಳನ್ನು ವಿರೋಧ ಪಕ್ಷವಾದ ಬಿಜೆಪಿ (ಕಮಲ ಪಡೆ) 'ಕಾಲೆಳೆಯುವುದನ್ನು' ಮುಂದುವರಿಸಿದೆ. ಇಬ್ಬರೂ ನಾಯಕರು ಒಗ್ಗಟ್ಟು ಪ್ರದರ್ಶಿಸಿದರೂ, 'ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡ' ಎಂಬ ಅಭಿಪ್ರಾಯ ಉಳಿದಿದೆ. ಈ ಕದನ ವಿರಾಮ ಶಾಶ್ವತವಾಗಬೇಕಾದರೆ ಅಥವಾ ನಾಯಕತ್ವದ ವಿಚಾರದಲ್ಲಿ ಸಂಪೂರ್ಣ ಸ್ಪಷ್ಟತೆ ಬರಬೇಕಾದರೆ ಪಕ್ಷದ ಹೈಕಮಾಂಡ್ನ ಎಂಟ್ರಿ ಆಗಲೇಬೇಕಿದೆ. ಹೀಗಿದ್ದರೂ, ಇಂದ್ರಪ್ರಸ್ಥದ ನಾಯಕರು ಈ ಸೂಕ್ಷ್ಮ ವಿಷಯದ ಬಗ್ಗೆ ದಿಟ್ಟ ಹೆಜ್ಜೆ ಇಡಲು ಯೋಚಿಸುತ್ತಿದ್ದಾರೆ. ಒಟ್ಟಿನಲ್ಲಿ, 'ಬ್ರೇಕ್ ಫಾಸ್ಟ್ 2.0' ಆಂತರಿಕ ಭಿನ್ನಾಭಿಪ್ರಾಯಗಳಿಗೆ ತಾತ್ಕಾಲಿಕ ಮದ್ದು ನೀಡಿದಂತಿದೆ.