Asianet Suvarna News Asianet Suvarna News

ಮೈಸೂರಲ್ಲಿ ಮಗನ ಬೈಕ್‌ ವ್ಹೀಲಿಂಗ್ ಶೋಕಿಗೆ ವೃದ್ಧನ ಬಲಿ: ಪಿಎಸ್‌ಐ ಯಾಸ್ಮೀನ್ ತಾಜ್ ಎತ್ತಂಗಡಿ!

ಮಗನ ಶೋಕಿಗೆ ಕುಮ್ಮಕ್ಕು ನೀಡಿದ ಐಪಿಎಸ್ ಎತ್ತಂಗಡಿ ಮಾಡಲಾಗಿದೆ. ನಂಜನಗೂಡು ಸಂಚಾರ ವಿಭಾಗದ ಪಿಎಸ್‌ಐ ಆಗಿದ್ದ ಯಾಸ್ಮಿನ್ ತಾಜ್ ಅವರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ.

First Published Sep 17, 2023, 5:27 PM IST | Last Updated Sep 17, 2023, 5:27 PM IST

ಮೈಸೂರು (ಸೆ.17):  ಮಗನ ಶೋಕಿಗೆ ಕುಮ್ಮಕ್ಕು ನೀಡಿದ ಐಪಿಎಸ್ ಎತ್ತಂಗಡಿ ಮಾಡಲಾಗಿದೆ. ನಂಜನಗೂಡು ಸಂಚಾರ ವಿಭಾಗದ ಪಿಎಸ್‌ಐ ಆಗಿದ್ದ ಯಾಸ್ಮಿನ್ ತಾಜ್ ಅವರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಇನ್ನು ಯಾಸ್ಮಿನ್ ತಾಜ್ ಅವರ ಪುತ್ರ ಸೈಯದ್ ಐಮಾನ್ ಬೈಕ್‌ ವ್ಹೀಲಿಂಗ್‌ ಶೋಕಿಗೆ ನಿನ್ನೆ ರೈತ ಗುರುಸ್ವಾಮಿ (68) ಸಾವನ್ನಪ್ಪಿದ್ದರು. ಆದರೆ, ಮಹಿಳಾ ಪಿಎಸ್‌ಐ ಪುತ್ರನ ವಿರುದ್ಧ ಈಗಾಗಲೇ ಬೈಕ್‌ ವ್ಹೀಲಿಂಗ್‌ ಮತ್ತು ಬೈಕ್‌ ಕಳ್ಳತನದ ದೂರು ದಾಖಲಾಗಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ.

ನಂಜನಗೂಡು ಪಿಎಸ್‌ಐ ಪುತ್ರನ ಬೈಕ್‌ ವ್ಹೀಲಿಂಗ್ ಹುಚ್ಚಾಟಕ್ಕೆ ವೃದ್ಧ ಬಲಿ, ಅಧಿಕಾರಿ ಅಮಾನತ್ತಿಗೆ ಆಗ್ರಹ

ಇದಕ್ಕಾಗಿ ತಮ್ಮ ಅಧಿಕಾರದ ಪ್ರಭಾವವನ್ನು ಬಳಕೆ ಮಾಡಿದ್ದರು. ಇಷ್ಟಾದ ಮೇಲೂ ಮಗನಿಗೆ ಬುದ್ಧಿ ಹೇಳದೇ ಸಾರ್ವಜನಿಕರ ಮೇಲೆ ಉಡಾಫೆಯ ವರ್ತನೆ ತೋರಿದ್ದರು. ಈಗ ಮಗನ ಪುಂಡಾಟಕ್ಕೆ ಅಮಾಯಕ ವೃದ್ಧ ರೈತ ಬಲಿಯಾಗಿದ್ದಾರೆ. ಅವರ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ದೂರು ದಾಖಲು ಮಾಡಿದಾಗಲೂ, ತನ್ನ ಮಗನ ಓದು ಮತ್ತು ಭವಿಷ್ಯಕ್ಕೆ ಸಮಸ್ಯೆ ಆಗಲಿದೆ ಎಂದು ಕ್ರಮ ಕೈಗೊಳ್ಳದಂತೆ ಒತ್ತಡ ಹೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದೆಲ್ಲದರ ಮಾಹಿತಿ ಪಡೆದ ಸರ್ಕಾರ, ಪಿಎಸ್‌ಐ ಯಾಸ್ಮೀನ್‌ ತಾಜ್‌ ಅವರಿಗೆ ವರ್ಗಾವಣೆ ಶಿಕ್ಷೆಯನ್ನು ನೀಡಿದೆ. ನಂಜನಗೂಡು ಸಂಚಾರಿ ವಿಭಾಗದ ಪಿಎಸ್‌ಐ ಹುದ್ದೆಯಿಂದ ಮೈಸೂರು ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಜೊತೆಗೆ, ಇಂದೇ ಡಿಸಿಆರ್‌ಬಿ ಡಿವೈಎಸ್ಪಿ ಬಳಿ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.