
ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ಏಷ್ಯಾಕಪ್ನಲ್ಲಿ ಇಂದು ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ. ದುಬೈನಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಉಗ್ರದಾಳಿ ಹಿನ್ನೆಲೆಯಲ್ಲಿ ಬಾಯ್ಕಾಟ್ಗೆ ಆಗ್ರಹ ಕೇಳಿಬಂದಿದೆ. ಟಿಕೆಟ್ ಬೇಡಿಕೆಯೂ ಕುಸಿತ ಕಂಡಿದೆ.
ಬೆಂಗಳೂರು: ಇವತ್ತು ಏಷ್ಯಾಕಪ್ ಟೂರ್ನಿಯಲ್ಲಿ ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳು ಕಾದಾಡ್ತಿವೆ. ಈ ಮ್ಯಾಚ್ಗೆ ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂ ಆತಿಥ್ಯ ವಹಿಸಿದೆ. ಪೆಹಲ್ಗಾಂ ಉಗ್ರ ದಾಳಿಯ ಬಳಿಕ ಇದೇ ಮೊದಲ ಸಲ ಇಂಡೋ-ಪಾಕ್ ಮುಖಾಮುಖಿಯಾಗ್ತಿವೆ. ಈ ಮ್ಯಾಚನ್ನ ಬಾಯ್ಕಾಟ್ ಮಾಡಬೇಕು ಅನ್ನೋ ಆಗ್ರಹ ಜೋರಾಗಿದೆ. ಉಗ್ರದಾಳಿಯಲ್ಲಿ ಮೃತಪಟ್ಟ ಸಂತ್ರಸ್ಥ ಕುಟುಂಬಸ್ಥರು ಕೂಡಾ ಬಾಯ್ಕಾಟ್ಗೆ ಆಗ್ರಹಿಸಿದ್ದಾರೆ. ಇದರ ಹೊರತಾಗಿಯೂ ಮ್ಯಾಚ್ ಆಯೋಜನೆಗೆ ಕೌಂಟ್ಡೌನ್ ಶುರುವಾಗಿದೆ.
ಸಾಮಾನ್ಯವಾಗಿ ಭಾರತ-ಪಾಕಿಸ್ತಾನ ಮ್ಯಾಚ್ ವಿಶ್ವದ ಯಾವುದೇ ಮೂಲೆಯಲ್ಲಿ ನಡೆದ್ರೂ ಮ್ಯಾಚ್ ಟಿಕೆಟ್ ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಕಂಪ್ಲೀಟ್ ಸೋಲ್ಡೌಟ್ ಆಗ್ತಿದ್ವು. ಆದರೆ ಈ ಸಲ ಹಾಗಾಗಿಲ್ಲ. ವೆಬ್ಸೈಟ್ನಲ್ಲಿ ಈಗಲೂ ಟಿಕೆಟ್ ಅವೆಲೇಬಲ್ ಇದೆ. ಟಿಕೆಟ್ ಪ್ರೈಸ್ ಹೈಕ್ ಹಾಗೆ ಮ್ಯಾಚ್ ಬಾಯ್ಕಾಟ್ ಮಾಡ್ಬೇಕು ಅನ್ನೋ ಆಗ್ರಹದಿಂದಾಗಿ ಈ ಸಲದ ಟಿಕೆಟ್ ಬೇಡಿಕೆ ಕುಸಿದಿದೆ ಎನ್ನಲಾಗ್ತಿದೆ.
ಈ ಹಿಂದಿನ ಟ್ರ್ಯಾಕ್ ರೆಕಾರ್ಡ್ ಗಮನಿಸಿದ್ರೆ ಸೂರ್ಯಕುಮಾರ್ ಯಾದವ್ ಪಡೆ ಈ ಮ್ಯಾಚ್ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದೆ. ಉಭಯ ತಂಡಗಳು ಈಗಾಗಲೇ ತಾವಾಡಿದ ಮೊದಲ ಪಂದ್ಯ ಜಯಿಸಿದ್ದು, ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಭಾರತ ಯುಎಇ ಎದುರು ಸುಲಭ ಗೆಲುವು ದಾಖಲಿಸಿತ್ತು, ಇನ್ನು ಪಾಕಿಸ್ತಾನ ಓಮಾನ್ ಎದುರು ಗೆದ್ದು ಬೀಗಿದೆ. ಇಂದು ನಡೆಯಲಿರೋ ಪಂದ್ಯದಲ್ಲಿ ಗೆಲ್ಲುವ ತಂಡ ಸೂಪರ್ 4 ಹಾದಿಯನ್ನು ಮತ್ತಷ್ಟು ಸುಲಭ ಮಾಡಿಕೊಳ್ಳಲಿದೆ.