T Narasipur: ಟಿ.ನರಸೀಪುರದ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾವು ಪಾಕಿಸ್ತಾನದಲ್ಲಿದ್ದೀವಾ ಎಂದು ಪ್ರಶ್ನಿಸಿದ ಅವರು, ಗಣೇಶ ಮೆರವಣಿಗೆಗೆ ನಿರ್ಬಂಧ ಖಂಡಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರು (ಸೆ.13): ನಾವು ಭಾರತದಲ್ಲಿದ್ದೀವಾ? ಪಾಕಿಸ್ತಾನದಲ್ಲಿದ್ದೀವಾ ಅನ್ನೋ ಪ್ರಶ್ನೆ ನಮ್ಮಲ್ಲಿ ಕಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸರ್ಕಾರ ಇರೋದು ಒಂದು ವರ್ಷ

ಗಣೇಶಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಟಿ.ನರಸೀಪುರ ಪೊಲೀಸ್ ಇನ್ಸ್‌ಪೆಕ್ಟರ್ ಧಮ್ಕಿ ಹಾಕಿದ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಆರ್ ಅಶೋಕ್ ಅವರು, ಇನ್ಸ್‌ಪೆಕ್ಟರ್ ಗ್ರಹಚಾರ ಬಿಡಿಸಲು ನಾವು ಇಲ್ಲಿಗೆ ಬಂದಿದ್ದೇವೆ. ಕಾಂಗ್ರೆಸ್ ಪಾರ್ಟಿ ಅನುಮತಿ ನೆಪದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವವರಿಗೆ ಕಿರುಕುಳ ಕೊಡುತ್ತಿದೆ. ಈ ಸರ್ಕಾರ ಬಹಳ ವರ್ಷ ಇರೊಲ್ಲ, ಇನ್ನೊಂದು ವರ್ಷ ಮಾತ್ರ ಇರೋದು.

ನಾನೇ ಬಂದಿದ್ದೇನೆ ಬಾ ನಿನ್ನ ದರ್ಪ ತೋರಿಸು

ಪೊಲೀಸರು ದುರಹಂಕಾರಿಗಳಲ್ಲ, ಆದರೆ ಈ ರೀತಿ(ಇನ್ಸ್‌ಪೆಕ್ಟರ್ ಧನಂಜಯ್) ಒಬ್ಬಿಬ್ರು ಇಲಾಖೆಯಲ್ಲಿ ಇರ್ತಾರೆ. ಮುಸ್ಲಿಂ ಧಾರ್ಮಿಕ ಕಾರ್ಯಕ್ಕೆ ಮೆರವಣಿಗೆ ಹೋಗ್ತಾರೆ. ಯಾವುದೇ ಹಿಂದೂಗಳು ಕಲ್ಲು ತೂರಾಟ ಮಾಡಲ್ಲ. ಆದರೆ ಅವರ ಮಸೀದಿಯಿಂದ ಕಲ್ಲು ತೂರಾಟ ಆಗುತ್ತೆ. ಮೊದಲು ಅವರನ್ನ ಕರೆಸಿ ಆವಾಜ್ ಹಾಕಬೇಕಿತ್ತು? ಮದ್ದೂರಿನಲ್ಲಿ ಹೀಗೆ ಮಾಡಿದ್ದಕ್ಕೆ ನಿಮಗೆ ಮುದ್ದೆ ತಿನ್ನಿಸಿದ್ದೇವೆ. ಒಂದು ವರ್ಷವಾದ ಮೇಲೆ ವರ್ಗಾವಣಗೆ ಎಲ್ಲಿಗೆ ಹೋಗ್ತಿರಾ? ಇಲ್ಲಿಗೇ ಬರಬೇಕು ಹುಷಾರ್. ನಮ್ಮ ಹತ್ತು ಜನ ಕಾರ್ಯಕರ್ತರು ಹೋದರು ಅಂತ ದರ್ಪ ತೋರಿಸ್ತೀರಾ? ಈಗ ನಾನೇ ಬಂದಿದ್ದೇನೆ ಬಾ ನಿನ್ನ ದರ್ಪ ತೋರಿಸು ಇನ್ಸ್ಪೆಕ್ಟರ್ ಧನಂಜಯ ವಿರುದ್ಧ ಆರ್ ಅಶೋಕ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಡಿಕೆ ಶಿವಕುಮಾರ್ ನೀನು ಹಿಂದೂ ಹೌದೋ ಅಲ್ವೋ?

ಮುಖ್ಯಮಂತ್ರಿ ಡಿಕೆ ಶಿವಕುಮಾರ ಬಾಯಲ್ಲಿ ಮಂತ್ರ, ಬೆಳಗ್ಗೆ ನಾಲ್ಕು ಗಂಟೆಯಿಂದ 12 ಗಂಟೆ ಗಂಗಾ ನದಿಯಲ್ಲಿ ಮುಳುಗಿದ ಮಾತ್ರಕ್ಕೆ ಹಿಂದೂವಾಗಲ್ಲ ಡಿಕೆ ಶಿವಕುಮಾರ ಅವರೇ, ಈಗ ತೋರಿಸಿ ನಿಮ್ಮ ನಿಜವಾದ ಹಿಂದೂತ್ವವನ್ನ. ಒಬ್ಬ ಇನ್ಸ್‌ಪೆಕ್ಟರ್ ಹಿಂದೂಗಳಿಗೆ ಗಣೇಶ ಹಬ್ಬದ ವಿಚಾರವಾಗಿ ಅವಾಜ್ ಹಾಕ್ತಾನೆ. ಇಲ್ಲಿ ಬಂದು ತೋರಿಸುವ ನಿನ್ನ ಹಿಂದೂತ್ವ. ಹಿಂದೂಗಳಿಗೆ ಧಮ್ಕಿ ಹಾಕಿರುವ ಇನ್ಸ್‌ಪೆಕ್ಟರ್‌ ಅಮಾನತು ಮಾಡಬೇಕು. ನೀನು ಹಿಂದೂನಾ ಅಲ್ವಾ? ಅಂತ ಈಗ ತೋರಿಸು. ನಿನಗೆ ಕೇವಲ ವೋಟಿಗಾಗಿ ಹಿಂದೂಗಳು ಬೇಕಾ? ಬ್ರದರ್ಸ್ ಬೇಕಾ? ಚುನಾವಣೆ ಬಂದಾಗ ಹಿಂದೂಗಳು ಬೇಕು. ಗೆಲ್ಲೋದಕ್ಕೆ ಪೂಜೆ ಪ್ರಾರ್ಥನೆಗಳಿಗೆ ಗಂಗಾ ನದಿಯಲ್ಲಿ ಮುಳುಗಿದ್ರೆ ಸಾಲದು. ಈಗ ನೀವು ನಿಜವಾಗಲೂ ಹಿಂದೂ ಹೌದೋ ಅಲ್ವೋ ತೋರಿಸುವ ಎಂದು ಸವಾಲೆಸೆದರು.

ಆ ರಸ್ತೆಯಲ್ಲಿ ಹೋಗಬಾರದು, ಈ ರಸ್ತೆಯಲ್ಲಿ ಹೋಗಬಾರದು ಅನ್ನೋಕೆ ಇವರು ಯಾರು? ರಸ್ತೆ ಯಾರದ್ದು? ನಮ್ಮಪ್ಪಂದು ಅಲ್ಲ, ಡಿಕೆಶಿವಕುಮಾರ ಅವರಪ್ಪಂದೂ ಅಲ್ಲ. ರಸ್ತೆಗಳು ಸಾರ್ವಜನಿಕ ಸ್ಥಳ. ಯಾರು ಬೇಕಾದರೂ ಹೋಗಬಹುದು. ಗಣಪತಿ ಮೆರವಣಿಗೆ ವೇಳೆ ಇಂತಿಂಥ ರಸ್ತೆಯಲ್ಲಿ ಹೋಗಬಾರದು ಅನ್ನೋದು ಇವರು ಯಾರು? ಕಲ್ಲು ತೂರಾಟ ನಡೆಸ್ತಾರೆ ಅಂದ್ರೆ ತಪ್ಪು ಎಲ್ಲಿದೆ? ಯಾರ ಮೇಲೆ ಕ್ರಮ ಆಗಬೇಕು? ಹಿಂದೂಗಳಿಗೆ ಅವಾಜ್ ಹಾಕೋಕೆ ಬರುತ್ತೆ, ಕಲ್ಲು ತೂರಾಟ ನಡೆಸುವವರ ಮೇಲೆ ಈ ದರ್ಪ ತೋರಿಸು. ರಸ್ತೆಗಳು ಸಾರ್ವಜನಿಕ ಆಸ್ತಿ. ನಾವು ಬಿಡುವ ಪ್ರಶ್ನೆಯೇ ಇಲ್ಲ. ಮಸೀದಿ ಮುಂದೆ ಪಟಾಕಿ ಹೊಡೆಯಬೇಡ ಅಂತಾ ಹೇಳ್ತೀರಾ ರಸ್ತೆ ಏನು ನಿಮ್ಮಪ್ಪಂದಾ? ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.