FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?

ಭೀಮಾತೀರದ ಹತ್ಯಾಕಾಂಡದ ಮಾಸ್ಟರ್ ಮೈಂಡ್ ಅಪ್ಪುಗೌಡನನ್ನು ಚಡಚಣ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನು ಕೊಲ್ಲಲು ಯೋಜಿಸಿದ್ದರೂ, 6 ಮಂದಿ ಹತ್ಯೆಯಾಗಿದ್ದರಿಂದ ಬೆಚ್ಚಿಬಿದ್ದ ಪಾತಕಿ ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದ. ಈ ಬಂಧನದಿಂದ ಜಮೀನು ವಿವಾದಕ್ಕಾಗಿ ನಡೆದ ಈ ಭೀಕರ ಕೃತ್ಯದ ಸಂಪೂರ್ಣ ಸತ್ಯಾಂಶ ಬಯಲಾಗಿದೆ.

Share this Video
  • FB
  • Linkdin
  • Whatsapp

ವಿಜಯಪುರ: ಇಡೀ ರಾಜ್ಯವನ್ನೇ ನಡುಗಿಸಿದ್ದ ಭೀಮಾತೀರದ ಭೀಕರ ಸಾಮೂಹಿಕ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಪ್ರಕರಣದ ಮಾಸ್ಟರ್ ಮೈಂಡ್, ನಟೋರಿಯಸ್ ಪಾತಕಿ ಅಪ್ಪುಗೌಡನನ್ನು ಚಡಚಣ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಬಂಧನದ ಬೆನ್ನಲ್ಲೇ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಆ ರಕ್ತಪಾತದ ಕುರಿತು ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

15 ದಿನ ಮೊದಲೇ ಸಿದ್ಧವಾಗಿತ್ತು ಮಾಸ್ಟರ್ ಪ್ಲಾನ್!

ಗೋವಿಂದಪುರ ಗ್ರಾಮದ ಕೇವಲ 25 ಎಕರೆ ಜಮೀನಿಗಾಗಿ ನಡೆದ ಈ ನೆತ್ತರ ಹಾದಿಗೆ ಅಪ್ಪುಗೌಡ ಸುಮಾರು 15 ದಿನಗಳ ಹಿಂದೆಯೇ ಸ್ಕೆಚ್ ಹಾಕಿಕೊಟ್ಟಿದ್ದ. ನಿರಾಳೆ ಕುಟುಂಬಸ್ಥರನ್ನು ಮುಗಿಸಲು ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಅಪ್ಪುಗೌಡ ತನ್ನ ಇಬ್ಬರು ಅಳಿಯಂದಿರ ಜೊತೆಗೂಡಿ ಸುಮಾರು 20 ತಲವಾರುಗಳನ್ನು ಸಿದ್ಧಪಡಿಸಿ ಈ ಕೃತ್ಯಕ್ಕೆ ತರಬೇತಿ ನೀಡಿದ್ದ ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬಯಲಾಗಿದೆ.

ಇಬ್ಬರ ಹತ್ಯೆಗೆ ಸ್ಕೆಚ್, ಆದರೆ ಬಿದ್ದದ್ದು 6 ಹೆಣಗಳು!

ಅಪ್ಪುಗೌಡನ ಅಸಲಿ ಪ್ಲಾನ್ ಪ್ರಕಾರ ಅಲ್ಲಿ ನಡೆಯಬೇಕಾಗಿದ್ದು ಕೇವಲ ನಿರಾಳೆ ಕುಟುಂಬದ ಇಬ್ಬರು ಪ್ರಮುಖ ಸದಸ್ಯರ ಹತ್ಯೆ ಮಾತ್ರ. ಆದರೆ ಘಟನಾ ಸ್ಥಳಕ್ಕೆ ನಿರಾಳೆ ಕುಟುಂಬದ ಆರೂ ಸದಸ್ಯರು ಒಟ್ಟಿಗೆ ಬಂದಿದ್ದರಿಂದ, ಸ್ಥಳದಲ್ಲಿದ್ದ ಹಂತಕರು ಗಾಬರಿಗೊಂಡಿದ್ದಾರೆ. ಮಚ್ಚು-ಲಾಂಗುಗಳ ಅಮಲಿನಲ್ಲಿ ಹಾಗೂ ಹಿಂಸೆಯ ಜೋಶ್‌ನಲ್ಲಿ ಸಿಕ್ಕ ಸಿಕ್ಕವರ ಮೇಲೆಲ್ಲಾ ದಾಳಿ ಮಾಡಿದ ಗ್ಯಾಂಗ್, ಇಬ್ಬರ ಬದಲಿಗೆ ಅನಾಮತ್ತಾಗಿ 6 ಜನರ ಹೆಣವಿಟ್ಟಿದ್ದಾರೆ.

ಪತರುಗುಟ್ಟಿ ಹೋದ ಮಾಸ್ಟರ್ ಮೈಂಡ್!

ಯಾವಾಗ ಇಬ್ಬರ ಬದಲಿಗೆ ಆರು ಜನರು ಹತ್ಯೆಯಾದ ಸುದ್ದಿ ತಿಳಿಯಿತೋ, ಮಾಸ್ಟರ್ ಪ್ಲಾನ್ ಕೊಟ್ಟಿದ್ದ ಅಪ್ಪುಗೌಡನೇ ಬೆಚ್ಚಿಬಿದ್ದಿದ್ದಾನೆ. ವಿಷಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತನ್ನ ಫೋನ್ ಸ್ವಿಚ್ ಆಫ್ ಮಾಡಿದ ಅಪ್ಪುಗೌಡ, ಬೆಂಗಳೂರು ಬಿಟ್ಟು ಮಹಾರಾಷ್ಟ್ರಕ್ಕೆ ಪಲಾಯನ ಮಾಡಿದ್ದ. ಆದರೆ ಚಡಚಣ ಪೊಲೀಸರು ಈತನ ಚಲನವಲನದ ಮೇಲೆ ನಿಗಾ ಇಟ್ಟು ಕೊನೆಗೂ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಭೀಮಾತೀರದಲ್ಲಿ ಶಾಂತಿ ನೆಲೆಸಿದೆ ಎನ್ನುವಷ್ಟರಲ್ಲಿ ಅಪ್ಪುಗೌಡನಂತಹ ಕ್ರಿಮಿನಲ್‌ಗಳ ಉದಯವಾಗಿರುವುದು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ಅಪ್ಪುಗೌಡನ ಬಂಧನದಿಂದ ಭೀಮಾತೀರದ ಹತ್ಯಾಕಾಂಡದ ಕಂಪ್ಲೀಟ್ ರಹಸ್ಯ ಬಯಲಾಗಿದ್ದು, ಕಾನೂನು ಕುಣಿಕೆ ಬಿಗಿಯಾಗಿದೆ.

Related Video