Asianet Suvarna News Asianet Suvarna News

Russia Ukraine Crisis: ಉಕ್ರೇನ್‌ನಲ್ಲಿರುವ ರಾಜ್ಯದ ಯಾರಿಗೂ ತೊಂದರೆಯಾಗಿಲ್ಲ: ಸಿಎಂ ಬೊಮ್ಮಾಯಿ

*ಉಕ್ರೇನ್‌ನಲ್ಲಿ ಕರ್ನಾಟಕದ 135 ವಿದ್ಯಾರ್ಥಿಗಳು ಅತಂತ್ರ
*ಬಾಂಬ್‌ ದಾಳಿಯಿಂದ ಆತಂಕ ವಾಪಸ್‌ ಕರೆಸಿಕೊಳ್ಳುವಂತೆ ಮೊರೆ
*ವಿದೇಶಾಂಗ ಸಚಿವರ ಜತೆ ಸಿಎಂ ಬೊಮ್ಮಾಯಿ ಮಾತುಕತೆ

ಬೆಂಗಳೂರು (ಫೆ. 25): ಉಕ್ರೇನ್‌-ರಷ್ಯಾ ಕದನದಿಂದಾಗಿ ಉಕ್ರೇನ್‌ನಲ್ಲಿ ಓದುತ್ತಿರುವ ಕನ್ನಡಿಗ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲಿನ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಕರ್ನಾಟಕದ 135 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಘೋಷಿಸಿ, ಬಾಂಬ್‌ ದಾಳಿ ಆರಂಭಿಸಿದ ಕಾರಣ ವಿದ್ಯಾರ್ಥಿಗಳೆಲ್ಲ ಜೀವಭಯದಿಂದ ಕಂಗಾಲಾಗಿದ್ದಾರೆ. ಈ ಮದ್ಯೆ ವಿದೇಶಾಂಗ ಸಚಿವರ ಜತೆ ಮಾತನಾಡಿದ್ದೇನೆ, ವಿದೇಶಾಂಗ ಕಾರ್ಯದರ್ಶಿ ಹಾಗೂ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಜತೆ ಸಂಪರ್ಕ ಸಾಧಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ. 

ಇದನ್ನೂ ಓದಿRussia Ukraine Crisis: ಆಶ್ರಯ ಬೇಡಿ ಪೋಲೆಂಡ್ ಗೆ ತೆರಳಿದ ಉಕ್ರೇನ್ ಪ್ರಜೆಗಳು!

ಉಕ್ರೇನ್‌ನಲ್ಲಿರುವ ರಾಜ್ಯದ ಯಾರಿಗೂ ತೊಂದರೆಯಾಗಿಲ್ಲ, ಅಲ್ಲಿನ ರಾಯಭಾರಿ ಕಚೇರಿ ಜತೆ ನಿರಂತರ ಸಂಪರ್ಕದಲ್ಲಿದ್ದು, ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಉಕ್ರೇನ್‌-ರಷ್ಯಾ ಯುದ್ಧದ ಸುದ್ದಿ ತಿಳಿಯುತ್ತಿದ್ದಂತೆ ಗುರುವಾರ ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳ ಪೋಷಕರೂ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ನಿರಂತರ ಕರೆ ಮಾಡಿ ಅವರ ಪರಿಸ್ಥಿತಿ ವಿಚಾರಿಸುತ್ತಿದ್ದಾರೆ. ಇನ್ನು ಬೆಳಗ್ಗೆಯಿಂದ ಸಂಪರ್ಕದಲ್ಲಿದ್ದ ಮಕ್ಕಳ ಮೊಬೈಲ್‌ ಸಂಜೆಯ ಹೊತ್ತಿಗೆ ಸಂಪರ್ಕಕ್ಕೆ ಸಿಗದೆ ಕೆಲ ಪೋಷಕರು ಭೀತಿಗೆ ಒಳಗಾಗಿದ್ದಾರೆ