Russia-Ukraine War: ನವೀನ್ ಸಾವಿಗೂ ಮುನ್ನ ನಡೆದಿದ್ದೇನು..? ಸ್ನೇಹಿತನ ಮಾತು
ಕಳೆದ 6 ದಿನಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಇದೀಗ ಕನ್ನಡಿಗ ವಿದ್ಯಾರ್ಥಿಯನ್ನು ಬಲಿ ಪಡೆದಿದೆ.ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಚಳಗೇರಿ ಮೂಲದ ವೈದ್ಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಸಾವಿಗೀಡಾಗಿದ್ದಾರೆ.
ಕಳೆದ 6 ದಿನಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಇದೀಗ ಕನ್ನಡಿಗ ವಿದ್ಯಾರ್ಥಿಯನ್ನು ಬಲಿ ಪಡೆದಿದೆ. ಉಕ್ರೇನ್ನ ಖಾರ್ಕೀವ್ನ ಕಟ್ಟಡವೊಂದನ್ನು ಗುರಿಯಾಗಿಸಿ ಮಂಗಳವಾರ ಬೆಳಗ್ಗೆ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಚಳಗೇರಿ ಮೂಲದ ವೈದ್ಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಸಾವಿಗೀಡಾಗಿದ್ದಾರೆ. ಇವರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಾವಿಗೀಡಾದ ಮೊದಲ ಭಾರತೀಯ.
ಖಾರ್ಕೀವ್ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿರುವ ನವೀನ್ ಯುದ್ಧದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಂಕರ್ವೊಂದರಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಸಂಗ್ರಹಿಸಿಟ್ಟುಕೊಂಡಿದ್ದ ಆಹಾರವೆಲ್ಲ ಖಾಲಿಯಾಗಿ ಪರದಾಟ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಆಹಾರ ವಸ್ತುಗಳನ್ನು ಖರೀದಿಸಲು ಬಂಕರ್ ಸಮೀಪದ ದಿನಸಿ ಅಂಗಡಿಯೊಂದಕ್ಕೆ ತೆರಳಿದ್ದರು. ಇದೇ ಸಂದರ್ಭದಲ್ಲಿ ರಷ್ಯಾ ಪಡೆಗಳು ನಡೆಸಿದ ಶೆಲ್ ದಾಳಿಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ' ಎಂದು ನವೀನ್ ಸ್ನೇಹಿತ ಯಶವಂತ್ ಘಟನೆಯನ್ನು ವಿವರಿಸಿದ್ದಾರೆ.