
ಅಮಿತ್ ಶಾ ಹೇಳಿಕೆ ಸಾಂಸ್ಕೃತಿಕ ಭಯೋತ್ಪಾದನೆ ಎಂದ ಸಿದ್ದರಾಮಯ್ಯ
ದೇಶದ ಭಿನ್ನ ರಾಜ್ಯಗಳ ನಾಗರೀಕರು ಇಂಗ್ಲೀಷ್ ನ ಬದಲಾಗಿ ಹಿಂದಿಯಲ್ಲಿ ವ್ಯವಹರಿಸಬೇಕು ಎಂದು ಅಮಿತ್ ಶಾ ಹೇಳಿರುವ ಮಾತು ಸಾಂಸ್ಕೃತಿಕ ಭಯೋತ್ಪಾದನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ಬೆಂಗಳೂರು (ಏ. 8): ದೇಶದಲ್ಲಿ ಇಂಗ್ಲೀಷ್ ಗಿಂತ (English) ಹೆಚ್ಚಾಗಿ ಭಾರತೀಯ ಭಾಷೆಯಾಗಿರುವ ಹಿಂದಿಯನ್ನು (Hindi) ಎರಡು ರಾಜ್ಯದವರು ವ್ಯವಹರಿಸುವಾಗ ಬಳಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಹೇಳಿರುವ ಮಾತಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ (Siddaramaiah ) ಕಿಡಿಕಾರಿದ್ದಾರೆ. ಅಮಿತ್ ಶಾ ಹೇಳಿಕೆ ಸಾಂಸ್ಕೃತಿಕ ಭಯೋತ್ಪಾದನೆ ಎಂದು ಸಿದ್ಧರಾಮಯ್ಯ ಟೀಕೆ ಮಾಡಿದ್ದಾರೆ.
ಗೃಹ ಸಚಿವರ ಮಾತುಗಳು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾದವಾಗಿವೆ. ದೇಶದ ಬಹುತೇಕ ರಾಜ್ಯಗಳಲ್ಲಿರುವ ಆಯಾ ರಾಜ್ಯದ ಮಾತೃಭಾಷೆಗಳಿಗೆ ಮಾಡಿರುವ ಅವಮಾನ ಇದಾಗಿದೆ. ಅನಗತ್ಯ ಘರ್ಷಣೆಗಳಿಗೆ ಎಡೆ ಮಾಡಿಕೊಡುವ ಬೇಜವಾಬ್ದಾರಿ ಹೇಳಿಕೆ ಇದು ಎಂದು ಕಿಡಿಕಾರಿದ್ದಾರೆ.
ಹಿಂದಿ ಬಳಸಿ ಎಂದು ಅಮಿತ್ ಶಾ ಹೊರಡಿಸಿದ ಫರ್ಮಾನು ವಿರುದ್ಧ ಗುಡುಗಿದ ಸಿದ್ದರಾಮಯ್ಯ
ಅಮಿತ್ ಶಾ ತಕ್ಷಣವೇ ಈ ಮಾತುಗಳನ್ನು ಹಿಂಪಡೆದುಕೊಳ್ಳಬೇಕು. ಸ್ವಾಭಿಮಾನಿ ಕನ್ನಡಿಗನಾಗಿ ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ.ಹಿಂದಿ, ಇಂಗ್ಲೀಷ್, ತಮಿಳು,ಮಲೆಯಾಳಿ, ಗುಜರಾತಿ ಸೇರಿದಂತೆ ಯಾವ ಭಾಷೆಗೂ ನಾವು ವಿರೋಧಿಗಳಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ. ಯಾವುದೇ ಒಂದು ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯ ಇಲ್ಲ ಎಂದು ಸಿದ್ಧರಾಮಯ್ಯ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.