ಮನೆಯಿಂದ ಹೊರ ಬಂದ್ರೆ 3 ಲಕ್ಷ, ದಾಸನ ಸರ್ಪಕೋಟೆ: ದರ್ಶನ್ಗೆ ಎಚ್ಚರಿಕೆಯ ಹೆಜ್ಜೆ!
ದರ್ಶನ್ ಜೈಲಿನಿಂದ ಹೊರಬಂದ ಮೇಲೆ ಫುಲ್ ಅಲರ್ಟ್ ಆಗಿದ್ದಾರೆ. ಒಂದೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡ್ತಾ ಇದ್ದಾರೆ. ಅದಕ್ಕೆ ಸಾಕ್ಷಿ ಮೊನ್ನೆ ನಡೆದ ವಾಮನ ಸಿನಿಮಾದ ಪ್ರಿಮೀಯರ್ ಶೋ. ಬಹುದಿನಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ದರ್ಶನ್ ಮಾಲ್ನಲ್ಲಿ ಸಿನಿಮಾ ವೀಕ್ಷಿಸಿದ್ರು. ಈ ಶೋಗೆ ಬರುವ ಮುನ್ನ ಪೊಲೀಸರ ಅನುಮತಿ ಪಡೆದಿದ್ದ ದರ್ಶನ್, ಪೊಲೀಸ್ ಸೆಕ್ಯೂರಿಟಿಗಂತಲೇ ಲಕ್ಷ ಲಕ್ಷ ಖರ್ಚು ಮಾಡಿದ್ದಾರೆ. ದರ್ಶನ್ ಈ ಎಚ್ಚರಿಕೆ ಹೆಜ್ಜೆ ಹಿಂದೆ ಒಂದು ರೋಚಕವಾದ ಕಾರಣ ಇದೆ. ಏನದು ಈ ಸ್ಟೋರಿ ನೋಡಿ. ಬಹುದಿನಗಳ ಬಳಿಕ ಇತ್ತೀಚಿಗೆ ದರ್ಶನ್ ಸಾರ್ವಜನಿಕವಾಗಿ ದರ್ಶನ ಕೊಟ್ಟಿದ್ದಾರೆ. ವಾಮನ ಸಿನಿಮಾದ ಶೋಗೆ ಬಂದಿದ್ದ ದರ್ಶನ್, ಇಡೀ ಸಿನಿಮಾವನ್ನ ನೋಡಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತನಾಡಿ, ವಾಮನನ ಬೆಂಬಲಕ್ಕೆ ನಿಂತುಕೊಂಡಿದ್ರು.
ಆದ್ರೆ ಈ ಶೋಗೆ ಬರೋದಕ್ಕೆ ದರ್ಶನ್ ಗೆ ನೀಡಿದ್ದ ಸೆಕ್ಯೂರಿಟಿ ಹೇಗಿತ್ತು ಅಂದ್ರೆ ಅದು ಅಕ್ಷರಶಃ ಸರ್ಪಗಾವಲು ಆಗಿತ್ತು. ಖಾಸಗಿ ಬೌನ್ಸರ್ಗಳನ್ನ ನೇಮಕ ಮಾಡಿಕೊಂಡು ಯಾರೂ ದರ್ಶನ್ ಹತ್ತಿರ ಸುಳಿಯದಂತೆ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆದುಕೊಂಡು ಪೊಲೀಸ್ ಸೆಕ್ಯೂರಿಟಿಯನ್ನೂ ಪಡೆದುಕೊಂಡಿದ್ರು. ಹೌದು ಕೆ.ಪಿ ಅಗ್ರಹಾರ ಠಾಣೆಯಲ್ಲಿ ದರ್ಶನ್ ಈ ಸಿನಿಮಾ ನೋಡ್ಲಿಕ್ಕೆ ಬರುವ ವಿಚಾರವನ್ನ ತಿಳಿಸಿ ಪೊಲೀಸ್ ಅನುಮತಿ ಪಡೆದುಕೊಳ್ಳಲಾಗಿತ್ತು. ಜೊತೆಗೆ ಮಾಲ್ಗೆ ಚಿತ್ರಮಂದಿರಕ್ಕೆ ಪೊಲೀಸ್ ರನ್ನ ನೇಮಕ ಮಾಡಿ ಸೆಕ್ಯೂರಿಟಿ ನೀಡಲಿಕ್ಕೆ ಭರ್ತಿ 3 ಲಕ್ಷ ಹಣವನ್ನ ಕಟ್ಟಲಾಗಿದೆ. ಇದರ ಜೊತೆಗೆ ಖಾಸಗಿ ಭದ್ರತಾ ಸಿಬ್ಬಂದಿಯ ವೆಚ್ಚವೂ ಸೇರಿಸಿದ್ರೆ ದಾಸನ ಸೆಕ್ಯೂರಿಟಿ ಖರ್ಚು 5 ಲಕ್ಷಕ್ಕೂ ಹೆಚ್ಚಾಗಿದೆ. ಹೌದು ದರ್ಶನ್ ಈ ಪರಿ ಎಚ್ಚರಿಕೆ ವಹಿಸ್ತಾ ಇರೋದಕ್ಕೆ ಕಾರಣ ಲಾಯರ್ ನೀಡಿರೋ ಅದೊಂದು ಸೂಚನೆ.
ಅಂಥಾ ಕಠಿಣ ಕೊಲೆ ಕೇಸ್ನಿಂದ ದಾಸನಿಗೆ ಬೇಲ್ ಕೊಡಿಸಿರೋ ವಕೀಲ ಸಿವಿ ನಾಗೇಶ್ ದರ್ಶನ್ಗೆ ಹೊರಗೆ ಹೋದ ಮೇಲೆ ಒಂದೇ ಒಂದು ಎಡವಟ್ಟು ಕೂಡ ಮಾಡಿಕೊಳ್ಳಬಾರದು ಅಂತ ಸೂಚನೆ ಕೊಟ್ಟಿದ್ದಾರಂತೆ. ಅದ್ರಲ್ಲೂ ನಿಮ್ಮ ಫ್ಯಾನ್ಸ್ ತೀರಾ ಅತಿರೇಕ ಸೃಷ್ಟಿಸ್ತಾರೆ, ಅವರ ವಿಷ್ಯದಲ್ಲಿ ಜಾಗೃತೆ ಇರಲಿ ಅಂದಿದ್ದಾರಂತೆ. ದರ್ಶನ್ ಜೈಲಿನಿಂದ ಹೊರಬರ್ತಾನೆ ಅವರನ್ನ ಭೇಟಿ ಮಾಡಬೇಕು ಅಂತ ಅಭಿಮಾನಿಗಳು ಕಾಯ್ತಾನೇ ಇದ್ದಾರೆ. ಆದ್ರೆ ಜೈಲಿನಿಂದ ಹೊರಬಂದು ಇಷ್ಟು ದಿನವಾದ್ರೂ ದರ್ಶನ್ ಫ್ಯಾನ್ಸ್ಗೆ ದರ್ಶನ ಕೊಟ್ಟಿಲ್ಲ. ತಮ್ಮ ಹುಟ್ಟುಹಬ್ಬದ ದಿನವೂ ಬೆನ್ನು ನೋವಿನ ನೆಪ ಹೇಳಿ ಅಭಿಮಾನಿಗಳನ್ನ ಬೇಟಿ ಮಾಡಿರಲಿಲ್ಲ.
ದರ್ಶನ್ನ ನೋಡ್ಲಿಕ್ಕೆ ರಾಜ್ಯದ ನಾನಾ ಕಡೆಯ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಸೇರೋದು, ಅಲ್ಲಿ ಏನಾದ್ರೂ ಗಲಾಟೆ ಆಗಬಹುದು. ಹಾಗೇನಾದ್ರೂ ಅದ್ರೆ ಅದ್ರಿಂದ ದರ್ಶನ್ ಬೇಲ್ ಗೆ ಆಪತ್ತು ಬರಬಹುದು ಅನ್ನೋದು ವಕೀಲರ ಎಚ್ಚರಿಕೆ. ಹೌದು ಕಳೆದ ವರ್ಷ ದರ್ಶನ್ಗೆ ಒಂದಾದ ಮೇಲೊಂದು ಆಪತ್ತು, ಎಡವಟ್ಟು ಎದುರಾದವು. ಮಂಡ್ಯದಲ್ಲಿ ಪತ್ನಿ, ಗೆಳತಿ ಬಗ್ಗೆ ಮಾತನಾಡಿದ್ದಕ್ಕೆ ಮಹಿಳಾ ಆಯೋಗದಲ್ಲಿ ಕೇಸ್ ಆಯ್ತು. ಕಾಟೇರ ಸಕ್ಸಸ್ ಪಾರ್ಟಿಯಲ್ಲಿ ತಡರಾತ್ರಿವರೆಗೂ ಇದ್ದಿದ್ದಕ್ಕೆ ಎಫ್.ಐ.ಆರ್ ಆಯ್ತು. ಕೊನೆಗೆ ಮನೆಯಲ್ಲಿ ಸಾಕಿದ ನಾಯಿ ಕಚ್ಚಿದ್ದಕ್ಕೂ ದರ್ಶನ್ ಪೊಲೀಸ್ ಠಾಣೆ ಮೆಟ್ಟಿಲು ಏರುವಂತೆ ಆಯ್ತು. ಇಷ್ಟೆಲ್ಲಾ ಆದ ಮೇಲೆ ಕಳೆದ ವರ್ಷ ಜೂನ್ನಲ್ಲಿ ಕೊಲೆ ಆರೋಪವೇ ಬಂದು ಜೈಲು ಸೇರುವಂತೆ ಆಗೋಯ್ತು.
ಇದೇ ಕಾರಣಕ್ಕೆ ಬೇಲ್ ಮೇಲೆ ಹೊರಬಂದ ಮೇಲೆ ದರ್ಶನ್ ಫುಲ್ ಅಲರ್ಟ್ ಆಗಿದ್ದಾರೆ. ಅದ್ರಲ್ಲೂ ತಮ್ಮ ಬೆನ್ನು ಬೀಳುವ ಅಭಿಮಾನಿಗ ಬಗ್ಗೆಯೇ ದಾಸನಿಗೆ ಸಿಕ್ಕಾಪಟ್ಟೆ ಟೆನ್ಶನ್ ಇದೆಯಂತೆ. ಕೆಲ ದಿನಗಳ ಹಿಂದೆ ವಾಮನ ಟ್ರೈಲರ್ ಲಾಂಚ್ ಗೆ ಪ್ರಸನ್ನ ಥಿಯೇಟರ್ಗೆ ದರ್ಶನ್ ಬರ್ತಾರೆ ಅಂದುಕೊಂಡು ಬಂದಿದ್ದ ಫ್ಯಾನ್ಸ್, ದರ್ಶನ್ ಬರೋದಿಲ್ಲ ಅಂತ ಗೊತ್ತಾಗಿ ಥಿಯೇಟರ್ ಧ್ವಂಸ ಮಾಡಿಹಾಕಿದ್ರು. ಇಂಥಾ ಕೆಡಿ ಫ್ಯಾನ್ಸ್ ಕಡೆಯಿಂದ ಏನಾದ್ರೂ ಎಡವಟ್ಟಾದ್ರೆ, ಅದರ ಪರಿಣಾಮ ತನ್ನ ಮೇಲಾಗುತ್ತೆ ಅನ್ನೋದನ್ನ ಅರಿತುಕೊಂಡಿರೋ ದರ್ಶನ್ ಸದ್ಯಕ್ಕೆ ಫ್ಯಾನ್ಸ್ನ ಮೀಟ್ ಮಾಡೋದು ಬೇಡ ಅಂತ ಡಿಸೈಡ್ ಮಾಡಿದ್ದಾರೆ. ಜೊತೆಗೆ ತಾವು ಹೋದ ಕಡೆ ಬಂದ ಕಡೆಯೆಲ್ಲಾ ಲಕ್ಷ ಲಕ್ಷ ಖರ್ಚು ಮಾಡಿ ಸೆಕ್ಯೂರಿಟಿ ವ್ಯವಸ್ಥೆ ಮಾಡಿಕೊಳ್ತಾ ಇದ್ದಾರೆ. ತನ್ನ ಸುತ್ತ ಅಕ್ಷರಶಃ ಸರ್ಪಕೋಟೆ ಕಟ್ಟಿಕೊಂಡಿದ್ದಾರೆ.