
ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!
ಪರಪ್ಪನ ಅಗ್ರಹಾರದಲ್ಲಿರೋ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗ್ತಿದೆ ಅನ್ನೋ ವಿಚಾರ ಜಗಜ್ಜಾಹೀರಾಗಿದೆ. ಪರಪ್ಪನ ಅಗ್ರಹಾರದ ಒಂದೊಂದೇ ವಿಡಿಯೋಗಳು ಹೊರಬರ್ತಾ ಇವೆ. ಈ ಸ್ಟೋರಿ ಮುಂದೆ ನೋಡಿ..
ನಟ ದರ್ಶನ್ (Darshan Thoogudeepa) ತನಗೆ ದಿಂಬು, ಹಾಸಿಗೆ ಕೊಡ್ತಾ ಇಲ್ಲ ಪರದಾಡಿದ್ದು, ಈ ಬಗ್ಗೆ ಪದೇ ಪದೇ ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದು ಗೊತ್ತೇ ಇದೆ. ಅಷ್ಟೆಲ್ಲಾ ತಿಪ್ಪರಲಾಗ ಹಾಕಿದ್ರೂ ದಾಸನಿಗೆ ದಿಂಬು, ಹಾಸಿಗೆ ಸಿಕ್ಕಿಲ್ಲ. ಆದ್ರೆ ಅದೇ ಪರಪ್ಪನ ಅಗ್ರಹಾರದಲ್ಲಿ ಟೆರೆರಿಸ್ಟ್ಗಳಿಗೆ, ರೇಪಿಸ್ಟ್ಗಳಿಗೆ ರಾಜಾತಿಥ್ಯ ಸಿಕ್ತಾ ಇದೆ. ಕಣ್ಮುಂದೆಯೇ ಕೈದಿಗಳು ಮಜಾ ಮಾಡ್ತಾ ಇದ್ರೆ ದಾಸ ಮಾತ್ರ ಕಠಿಣ ಸಜಾ ಅನುಭವಿಸ್ತಾ ಇದ್ದಾನೆ.
ಪರಪ್ಪನ ಅಗ್ರಹಾರದಲ್ಲಿರೋ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗ್ತಿದೆ ಅನ್ನೋ ವಿಚಾರ ಜಗಜ್ಜಾಹೀರಾಗಿದೆ. ಪರಪ್ಪನ ಅಗ್ರಹಾರದ ಒಂದೊಂದೇ ವಿಡಿಯೋಗಳು ಹೊರಬರ್ತಾ ಇವೆ. ಭ್ರಷ್ಟ ಅಧಿಕಾರಿಗಳಿಂದ ಜೈಲಿನಲ್ಲಿ ತುಂಡು, ಗುಂಡು ವ್ಯವಸ್ಥೆ ಮಾಡಿಕೊಂಡು ಕೈದಿಗಳು ಜಾಲಿ ಜಾಲಿಯಾಗಿ ಎಂಜಾಯ್ ಮಾಡ್ತಿರೋ ವಿಡಿಯೋಗಳು ಸದ್ದು ಮಾಡ್ತಾ ಇವೆ.
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ಅಕ್ಷರಶಃ ಪರಪ್ಪನ ರೆಸಾರ್ಟ್ ಆಗಿಬಿಟ್ಟಿದೆ. ಇಲ್ಲಿ ದುಡ್ಡಿದ್ದವನು ದೊಡ್ಡಪ್ಪ.. ಭ್ರಷ್ಟ ಅಧಿಕಾರಿಗಳ ಕೈ ಬೆಚ್ಚಗೆ ಮಾಡಿದ್ರೆ ಫೋನು, ಟಿವಿ ಏನ್ ಬೇಕಾದ್ರೂ ಫೆಸಿಲಿಟಿ ಸಿಕ್ಕುತ್ತೆ. ಕಾಂಚಾಣವೊಂದಿದ್ರೆ ಜೈಲು ರೆಸಾರ್ಟ್ ಆಗುತ್ತೆ.
30 ವರ್ಷಗಳ ಕಠಿಣ ಶಿಕ್ಷೆ ಪಡೆದಿರೋ ವಿಕೃತಕಾಮಿ ಉಮೇಶ್ ರೆಡ್ಡಿ ಇಲ್ಲಿ ಪೋನ್, ಟಿವಿ ಯೂಸ್ ಮಾಡ್ತಾ ಹಾಯಾಗಿದ್ದಾನೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಅರೆಸ್ಟ್ ಆಗಿರೋ ರನ್ಯಾ ರಾವ್ ಪ್ರಿಯಕರ ತರುಣ್ ರಾಜ್ ಕೂಡ ಜೈಲಿನಲ್ಲಿ ಬಿಂದಾಸ್ ಲೈಫ್ ನೆಡಸ್ತಾ ಇದಾನೆ.
ಅಷ್ಟೆಲ್ಲಾ ಯಾಕೆ ಸ್ವಾಮಿ ಐಸಿಸ್ ನಂಟಿರುವ ಕುಖ್ಯಾತ ಟೆರೆರಿಸ್ಟ್ ಜುಹಾದ್ ಹಮೀದ್ ಶಕೀಲ್ ಮನ್ನಾನ ಕೈಗೂ ನಮ್ಮ ಭ್ರಷ್ಟ ಜೈಲು ಅಧಿಕಾರಿಗಳು ಮೊಬೈಲ್ ಕೊಟ್ಟಿದ್ದಾರೆ. ಈತ ಜೈಲಿನಲ್ಲೇ ವೈಫೈ ವ್ಯವಸ್ಥೆ ಮಾಡಿಕೊಂಡು ಹಾಯಾಗಿ ಟೆರೆರಿಸ್ಟ್ಗಳ ಜೊತೆ ಮಾತನಾಡಿಕೊಂಡಿದ್ದಾನೆ.
ಇನ್ನೂ ಇದೇ ಜೈಲಿನಲ್ಲಿ ಎಣ್ಣೆ ಹೊಡೆದು ಕೈದಿಗಳು ಡ್ಯಾನ್ಸ್ ಮಾಡ್ತಾ ಇರೋ ವಿಡಿಯೋ ಕೂಡ ವೈರಲ್ ಆಗಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಇಷ್ಟೆಲ್ಲಾ ನಡೀತಾ ಇರುವ ಜೈಲಿನಲ್ಲೇ ರೇಣುಕಸ್ವಾಮಿ ಕೊಲೆ ಆರೋಪಿ, ಕನ್ನಡ ಸಿನಿರಂಗದ ಮಾಜಿ ಚಕ್ರವರ್ತಿ ದರ್ಶನ್ ಕೂಡ ಇರೋದು ಗೊತ್ತಿದೆಯಲ್ವಾ..?
ಸುತ್ತಲೂ ಕೈದಿಗಳ ಮಜಾ.. ದಾಸನಿಗೆ ಮಾತ್ರ ಸಜಾ..!
ಹೌದು ಈ ಪರಮ ಭ್ರಷ್ಟರು ತುಂಬಿರೋ ಜೈಲಲ್ಲಿ ಹಣ ಕೊಟ್ರೆ ಯಾರಿಗೆ ಏನ್ ಬೇಕಾದ್ರೂ ಸಿಕ್ಕುತ್ತೆ. ಆದ್ರೆ ದರ್ಶನ್ ಅದೆಷ್ಟು ಹಣ ಕೊಡ್ತಿನಿ ಅಂದ್ರೂ ಏನೂ ಸಿಕ್ತಾ ಇಲ್ಲ. ಬೇರೆಲ್ಲಾ ಫೆಸಿಲಿಟಿ ಪಕ್ಕಕಿಡಿ ಸ್ವಾಮಿ.. ಜಸ್ಟ್ ಹಾಸಿಗೆ , ದಿಂಬು ಕೊಡೋದಕ್ಕೂ ದಾಸನನ್ನ ಪರದಾಡಿಸ್ತಾ ಇದ್ದಾರೆ. ದರ್ಶನ್ ಪರ ವಕೀಲರು ನಾಲ್ಕಾರು ಬಾರಿ ಈ ಬಗ್ಗೆ ಕೋರ್ಟ್ ಮುಂದೆ ಮನವಿ ಮಾಡಿದ್ರೂ ಪ್ರಯೋಜನ ಆಗಿಲ್ಲ.
ಕೊನೆಗೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ಕಾನೂನು ಸೇವಾ ಪ್ರಾಧಿಕಾರ ಜೈಲಿಗೆ ವಿಸಿಟ್ ಮಾಡಿ, ದರ್ಶನ್ಗೆ ನೀಡಿರುವ ಸೌಲತ್ತುಗಳನ್ನ ಪರೀಶಿಲನೆ ಮಾಡಿತ್ತು. ಜೈಲ್ ಮ್ಯಾನುವೆಲ್ ಅನುಸಾರ ಏನು ಬೇಕೋ ಅದೆಲ್ಲಾ ದಾಸನಿಗೆ ಸಿಕ್ಕಿದೆ ಅಂತ ವರದಿ ನೀಡಿತ್ತು.
ದರ್ಶನ್ಕಾರಣಕ್ಕೆ ಅಮಾನತ್ತಾಗಿದ್ದ ಜೈಲು ಅಧಿಕಾರಿಗಳು..!
ಹೌದು ಈಗೇನೋ ದರ್ಶನ್ಗೆ ಏನೊಂದು ಸೌಲಭ್ಯ ಕೊಡದೇ ಕಟ್ಟು ನಿಟ್ಟು ಮಾಡಲಾಗಿದೆ. ಎಲ್ಲವನ್ನೂ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗ್ತಾ ಇದೆ. ಆದ್ರೆ ಕಳೆದ ಬಾರಿ ಇದೇ ದರ್ಶನ್ ಜೈಲಿನಲ್ಲಿ ರಾಜದರ್ಬಾರ್ ಮಾಡಿ, ಆ ಫೋಟೋ ವೈರಲ್ ಆಗಿ ಜೈಲು ಅಧಿಕಾರಿಗಳು ಅಮಾನತ್ತು ಆಗಿದ್ರು. ದರ್ಶನ್ ಬೇಲ್ ಮರುಪರಿಶೀಲನೆ ಸಮಯದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಈ ವಿಚಾರ ಪ್ರಸ್ತಾಪ ಆಗಿತ್ತು ಸುಪ್ರೀಂ ನ್ಯಾಯಮೂರ್ತಿಗಳು ಪರಪ್ಪನ ಅಗ್ರಹಾರದ ಅಧಿಕಾರಿಗಳಿಗೆ ಮಂಗಳಾರತಿ ಮಾಡಿದ್ರು.
ಅದೇ ಕಾರಣಕ್ಕೆ ಈ ಸಾರಿ ದರ್ಶನ್ಗೆ ಯಾವ ಸೌಲತ್ತು ಕೊಡದೇ ಸ್ಟ್ರಿಕ್ಟ್ ರೂಲ್ಸ್ ಫಾಲೋ ಮಾಡಲಾಗ್ತಾ ಇದೆ. ಈ ನಡುವೆ ದರ್ಶನ್ ಬೇರೆ ಪದೇ ಪದೇ ಜೈಲರ್ಸ್ ಮೇಲೆ ನ್ಯಾಯಾಲಯಕ್ಕೆ ದೂರು ಕೊಟ್ಟಿದ್ದರಿಂದ ಅವರು ಗರಂ ಆಗಿದ್ದಾರೆ. ದರ್ಶನ್ಗೆ ಬುದ್ದಿ ಕಲಿಸೋದಕ್ಕೆ ಮುಂದಾಗಿದ್ದಾರೆ. ಏನೇ ಕೇಳಿದ್ರೂ ‘ ಕೋರ್ಟಿಗೆ ಹೋಗ್ತಿ.. ನಿನ್ನ ತೀರ್ಮಾನ ಬ್ಯಾರಕ್ ನಲ್ಲಿ ನಾವು ಮಾಡ್ತೀವಿ ಅಂತಿದ್ದಾರೆ.
ದರ್ಶನ್ ಅಭಿಮಾನಿಗಳು ಮಾತ್ರ , ಪರಪ್ಪನ ಅಗ್ರಹಾರದಿಂದ ಬರ್ತಾ ಇರೋ ವಿಡಿಯೋಗಳನ್ನ ನೋಡಿ ಗೋಳಾಡ್ತಾ ಇದ್ದಾರೆ. ಅವರಿಗೆಲ್ಲಾ ಒಂದು ನ್ಯಾಯ ನಮ್ಮ ಬಾಸ್ಗೆ ಮಾತ್ರ ಒಂದು ನ್ಯಾಯ.. ಅಯ್ಯಯ್ಯೋ ಅನ್ಯಾಯ..ಅಂತ ಒಂದೇ ಕಣ್ಣಲ್ಲಿ ಅಳ್ತಾ ಇದ್ದಾರೆ.
ಆದ್ರೆ ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಚಾರ ಏನಂದ್ರೆ ಬೇರೆ ಕೈದಿಗಳಂತೆ ದರ್ಶನ್ಗೂ ಸೌಲತ್ತು ಕೊಡೋದಲ್ಲ. ಬದಲಾಗಿ ದರ್ಶನ್ಗೆ ಮಾಡಿರುವಷ್ಟೇ ಕಟ್ಟುನಿಟ್ಟು ಪ್ರತಿಯೊಬ್ಬ ಕೈದಿಗೂ ಮಾಡಬೇಕಿದೆ. ಜೈಲು ಅಂದ್ರೆ ಮನಃಪರಿವರ್ತನೆಯ ಕೇಂದ್ರ... ಅದು ಬಿಟ್ಟು ಮನೋರಂಜನೆಯ ಕೇಂದ್ರ ಆಗಬಾರದು..!
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..