ಹೆಸರಲ್ಲಷ್ಟೇ ಬ್ಯಾಂಕ್.. ಬ್ಯಾಲೆನ್ಸ್ ಖಾಲಿ.. ಇದು ಹಾಸ್ಯನಟನ ನೋವಿನ ಕಹಾನಿ!
ಕನ್ನಡ ಚಿತ್ರರಂಗದ ಹಿರಿಯ ಪೋಷಕ ಕಲಾವಿದ, 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಕನ್ನಡಿಗರನ್ನ ರಂಜಿಸಿದ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ವಿಧಿವಶರಾಗಿದ್ದಾರೆ. ಬ್ಯಾಂಕ್ ಜನಾರ್ಧನ್ ಅಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ದುರಂತ ಅಂದ್ರೆ ಜನಾರ್ಧನ್ ಹೆಸರಿನ ಜೊತೆಗೆ ಮಾತ್ರ ಬ್ಯಾಂಕ್ ಇತ್ತು ಆದ್ರೆ ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ಇರಲಿಲ್ಲ. ಹಾಸ್ಯ ನಟನ ನಿಜ ಬದುಕಲ್ಲಿ ಬರೀ ನೋವೇ ತುಂಬಿತ್ತು. ಬ್ಯಾಂಕ್ ಜನಾರ್ಧನ್.. ಈ ಹೆಸರು ಕೇಳ್ತಾನೆ ಕನ್ನಡಿಗರ ಮೊಗದಲ್ಲಿ ಒಂದು ಮಂದಹಾಸ ಮೂಡುತ್ತೆ. ಯಾಕಂದ್ರೆ 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರೋ ಜನಾರ್ಧನ್ ಬಹುತೇಕ ಹಾಸ್ಯ ಪಾತ್ರಗಳಲ್ಲೇ ಮಿಂಚಿದ್ದಾರೆ. ಜಗ್ಗೇಶ್, ಕಾಶಿನಾಥ್, ಉಪೇಂದ್ರ, ಸಾಧುಕೋಕಿಲ ಜೊತೆಗಿನ ಜನಾರ್ಧನ್ ಹಾಸ್ಯ ದೃಶ್ಯಗಳು ನೋಡಿದಾಗಲೆಲ್ಲಾ ನಗು ಉಕ್ಕಿಸುತ್ವೆ. ಅಸಲಿಗೆ ಚಿತ್ರದುರ್ಗದ ಮೂಲದವರಾದ ಜನಾರ್ಧನ್ ವಿಜಯಾ ಬ್ಯಾಂಕ್ನಲ್ಲಿ ಕೆಲಸ ಮಾಡ್ತಾ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ರು.
ಜನಾರ್ಧನ್ ನಟನಾ ಪ್ರತಿಭೆಯನ್ನ ಗುರುತಿಸಿ ಧಿರೇಂದ್ರ ಗೋಪಾಲ್ ಇವರನ್ನ ಚಿತ್ರರಂಗಕ್ಕೆ ಕರೆತಂದ್ರು. 1985ರಲ್ಲಿ ಬಂದ ಪಿತಾಮಹ ಬ್ಯಾಂಕ್ ಜನಾರ್ಧನ್ ನಟಿಸಿದ್ದ ಮೊದಲ ಸಿನಿಮಾ. ಅಲ್ಲಿಗೆ ಜನಾರ್ಧನ್ರದ್ದು ಭರ್ತಿ 4 ದಶಕಗಳ ಕಲಾಸೇವೆ. ಬ್ಯಾಂಕ್ ಉದ್ಯೋಗಿಯಾಗಿದ್ದರಿಂದ ಜನಾರ್ಧನ್ರನ್ನ ಬ್ಯಾಂಕ್ ಜನಾರ್ಧನ್ ಅಂತ ಕರೆಯಲಾಗ್ತಾ ಇತ್ತು. ಆರಂಭದಲ್ಲಿ ಬರೀ ಸಣ್ಣ ಪುಟ್ಟ ಪಾತ್ರಗಳನ್ನ ಕೊಡ್ತಾರೆ ಅಂತ ಬೇಸರಿಸಿಕೊಂಡು ಜನಾರ್ಧನ್ ಚಿತ್ರರಂಗ ತೊರೆದಿದ್ದರಂತೆ. ಆದ್ರೆ ಕಾಶೀನಾಥ್ರ ಅಜಗಜಾಂತರ ಸಿನಿಮಾದಿಂದ ಬ್ಯಾಂಕ್ ಜನಾರ್ಧನ್ಗೆ ಬಿಗ್ ಬ್ರೇಕ್ ಸಿಕ್ತು. ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶ ಬರತೊಡಗಿ ಬ್ಯಾಂಕ್ ಬಿಟ್ಟು ಪೂರ್ಣ ಪ್ರಮಾಣದ ಕಲಾವಿದರ ಆಗಿಬಿಟ್ರು. ತರ್ಲೆ ನನ್ ಮಗ, ಶ್, ಪೊಲೀಸನ ಹೆಂಡತಿ, ಗುಂಡನ ಮದುವೆ ಸಿನಿಮಾಗಳಲ್ಲಿನ ಜನಾರ್ಧನ್ ಅಭಿನಯ ಮರೆಯೋದುಂಟೇ.
ಅದ್ರಲ್ಲೂ 1990ರ ದಶಕದಲ್ಲಿ ಜಗ್ಗೇಶ್-ಜನಾರ್ಧನ್ ಜೋಡಿ ಅದೆಷ್ಟು ಫೇಮಸ್ ಅಂದ್ರೆ ಇವರ ಕಾಮಿಡಿ ಜೊತೆಯಾಟ ನೋಡಲಿಕ್ಕೆ ಅಂತಲೇ ಜನ ಥಿಯೇಟರ್ಗೆ ಬರ್ತಾ ಇದ್ರು. 1985 ರಿಂದ 2023ರ ತನಕ ಜನಾರ್ಧನ್ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಜನಾರ್ಧನ್ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ-ಕಿರಿಯ ಕಲಾವಿದರು ಜನಾರ್ಧನ್ ಅಂತಿಮ ದರ್ಶನ ಪಡೆದು ಅವರಿಗೆ ನಮನ ಸಲ್ಲಿಸಿದ್ದಾರೆ. ಹೌದು ಇವರ ಹೆಸರಲ್ಲೇನೋ ಬ್ಯಾಂಕ್ ಇತ್ತು. ಆದ್ರೆ ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ನಾಸ್ತಿ. ಕಳೆದ ಒಂದು ದಶಕದಿಂದ ಹೆಚ್ಚಾಗಿ ಅವಕಾಶಗಳು ಸಿಗದೇ ಜನಾರ್ಧನ್ ಕಂಗಾಲಾಗಿದ್ರು.
ಅದ್ರಲ್ಲೂ ಕೋವಿಡ್ ಸಮಯದಲ್ಲಿ ಆರ್ಥಿಕ ಸಮಸ್ಯೆಯಿಂದ ಪರದಾಡಿದ್ರು. 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ರೂ ಈ ಹಿರಿಯ ಕಲಾವಿದನಿಗೆ ಆರ್ಥಿಕ ಭದ್ರತೆ ಇರಲಿಲ್ಲ. ಈ ಬಗ್ಗೆ ಖುದ್ದು ಜನಾರ್ಧನ್ಗೂ ಬೇಸರ ಇತ್ತು. ಹಾಸ್ಯ ನಟನ ಕೊನೆಯ ದಿನಗಳು ನೋವಿನ ದಿನಗಲಾಗಿದ್ವು. ಆದ್ರೆ ತಾವು ಅದೆಷ್ಟೇ ನೋವುಂಡರೂ ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಹಾಸ್ಯ ಪಾತ್ರಗಳ ಮೂಲಕ ಕನ್ನಡಿಗರನ್ನ ರಂಜಿಸ್ತಾ ಇದ್ರು ಜನಾರ್ಧನ್. ಚಿತ್ರರಂಗದಲ್ಲೂ ಜನಾರ್ಧನ್ ಎಲ್ಲರ ಜೊತೆ ಸ್ನೇಹ, ಸಲುಗೆಯಿಂದ ಇದ್ದವರು. ಅಂತೆಯೇ ಅವರನ್ನ ಗೌರವದಿಂದ ಬೀಳ್ಕೊಟ್ಟಿದೆ ಚಿತ್ರರಂಗ. ಜನ ಮೆಚ್ಚಿದ ಜನಾರ್ಧನ್ ಭೌತಿಕವಾಗಿ ನಮ್ಮಿಂದ ದೂರವಾದರೂ ತಮ್ಮ ಪಾತ್ರಗಳ ಮೂಲಕ ಚಿತ್ರಗಳ ಮೂಲಕ ಎಂದೆಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಉಳಿಯಲಿದ್ದಾರೆ.