
50 ದಿನಗಳ ಆಟ, ಸೆಪ್ಟೆಂಬರ್ ಸಮಾಪ್ತಿ.. ನವೆಂಬರ್ ಕ್ರಾಂತಿ.. ಮುಹೂರ್ತ ಯಾರದ್ದು..?
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನದ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಸೂತ್ರದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿಎಂ ಪಟ್ಟದ ನಿರೀಕ್ಷೆಯಲ್ಲಿದ್ದರೆ, ಸಿದ್ದರಾಮಯ್ಯ ಬಣವು ಇದನ್ನು ತಪ್ಪಿಸಲು ಯತ್ನಿಸುತ್ತಿದೆ.
ಬೆಂಗಳೂರು (ಅ.2): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಕುರಿತ ಎರಡು-ವರೆ ವರ್ಷಗಳ ಸೂತ್ರದ ಚರ್ಚೆಯು ಮತ್ತೊಮ್ಮೆ ತೀವ್ರಗೊಂಡಿದೆ.
ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನರ್ರಚನೆಯ ಬಿಸಿ ರಾಜ್ಯ ರಾಜಕೀಯದಲ್ಲಿ ಆಡಳಿತಾರೂಢ ಕೈ ಕೋಟೆಯೊಳಗೆ ಬದಲಾವಣೆ ಬೆಂಕಿಯನ್ನು ಹೊತ್ತಿಸಿದೆ. ಎಲ್ಲರ ಕಣ್ಣು ಈಗ ನವೆಂಬರ್ ಕ್ರಾಂತಿಯ ಮುಹೂರ್ತದ ಮೇಲಿದೆ.
ಸೆಪ್ಟೆಂಬರ್ ತಿಂಗಳು ಮುಗಿದಿದ್ದು, ನಾಯಕತ್ವ ಬದಲಾವಣೆಯ ನಿರೀಕ್ಷೆಯಲ್ಲಿದ್ದವರಿಗೆ ಹಿನ್ನಡೆಯಾಗಿದೆ. ಆದರೆ, ಮುಂದಿನ 50 ದಿನಗಳ ಅವಧಿಯು ತೀವ್ರ ರಾಜಕೀಯ ಕುತೂಹಲಕ್ಕೆ ವೇದಿಕೆಯಾಗಲಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎರಡೂವರೆ ವರ್ಷಗಳ ನಂತರ ಪಟ್ಟ ಸಿಗುವ ನಿರೀಕ್ಷೆಯಲ್ಲಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣವು ಅದನ್ನು ತಪ್ಪಿಸಲು ತೆರೆಮರೆಯಲ್ಲಿ ಪ್ರಯತ್ನಗಳನ್ನು ಆರಂಭಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.