Asianet Suvarna News Asianet Suvarna News

ಕೋಲಾರ: ವೇಣುಗೋಪಾಲ ಸ್ವಾಮಿ ದೇವಾಲಯದ ಗೋಪುರದಲ್ಲಿದೆ ಪಾರಿವಾಳ ಲೋಕ..!

*  ಪಕ್ಷಿಗಳ ಉಳಿವಿಗಾಗಿ ಪಣತೊಟ್ಟ ಗ್ರಾಮಸ್ಥರು 
*  ವೇಣುಗೋಪಾಲ ಸ್ವಾಮಿಗೆ ಪಾರಿವಾಳಗಳ ಇಂಚರ ಅದರ ಕೂಗುಗಳೇ ಬೆಳಗಿನ ಸುಪ್ರಭಾತ
*  ಪ್ರತ್ಯೇಕ ಗೂಡುಗಳನ್ನ ನಿರ್ಮಾಣ ಮಾಡಿ ಪಕ್ಷಿ ಪ್ರೇಮ ಮೆರೆಯುತ್ತಿರುವ ಜನರು 
 

ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್‌, ಕೋಲಾರ 

ಕೋಲಾರ(ಮೇ.27): ಒಂದು ಕಾಲದಲ್ಲಿ ಆ ಪಕ್ಷಿ ಇಲ್ಲದೆ ಹೋಗಿದ್ರೆ ರಾಜ ಮಹಾರಾಜರು ಸಹ ಕಷ್ಟ ಪಡಬೇಕಾಗಿತ್ತು. ಏನೇ ಸಂದೇಶ ನೀಡಬೇಕಾಗಿದ್ರು, ಉತ್ತರ ಕೊಡಬೇಕಾದ್ರೂ ಅದರ ಅವಶ್ಯಕತೆ ಬಹಳ ಇತ್ತು. ಕಾಲ ಬದಲಾದಂತೆ ಆಧುನಿಕ ತಂತ್ರಜ್ಞಾನದ ಬಳಿಕೆಯಿಂದ ದಿನದಿಂದ ದಿನಕ್ಕೆ ಅಳಿವಿನ ಅಂಚಿಗೆ ಬಂದು ತಲುಪಿದೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಆ ಪಕ್ಷಿಗಳ ಉಳಿವಿಗಾಗಿ ಗ್ರಾಮಸ್ಥರು ಪಣತೊಟ್ಟು ಪೋಷಣೆ ಮಾಡ್ತಿದ್ದು ,ಎಲ್ಲರೂ ಮಾದರಿಯಾಗಿದ್ದಾರೆ.

ಒಂದೆಡೆ ಸುಂದರವಾದ, ಪುರಾತನ ಕಾಲದ ದೇವಸ್ಥಾನ. ದೇವಸ್ಥಾನದ ಗೋಪುರದ ಬಳಿ ಪುಟಾಣಿ ಗೂಡು ಕಟ್ಕೊಂಡು ವಾಸಿಸುತ್ತಿರುವ ಪಾರಿವಾಳಗಳ ಹಿಂಡು. ಆ ಪಾರಿವಾಳಗಳಿಗೆ ಧಾನ್ಯಗಳನ್ನು ಹಾಕಿ ಪೋಷಿಸುತ್ತಿರುವ ಗ್ರಾಮಸ್ಥರು. ಅಂದಹಾಗೆ ಈ ರೀತಿ ಸುಂದರವಾದ ದೃಶ್ಯಗಳು ಕಂಡು ಬರೋದು ಕೋಲಾರ ತಾಲ್ಲೂಕಿನ ಕಿತ್ತಂಡೂರು ಗ್ರಾಮದಲ್ಲಿ. ಊರಿನ ಮಧ್ಯದಲ್ಲಿ ಪುರಾತನ ಕಾಲದ ವೇಣುಗೋಪಾಲ ಸ್ವಾಮಿಯ ದೇವಾಲಯದ ಗೋಪುರದ ಮೇಲೆ ಪಾರಿವಾಳಗಳ ಲೋಕವೆ ಸೃಷ್ಟಿಯಾಗಿದ್ದು ಇದಕ್ಕೆ ನೂರಾರು ವರ್ಷಗಳ ಇತಿಹಾಸ ಸಹ ಇದೆ. ಹೌದು ಆಧುನಿಕ ಪ್ರಪಂಚದಲ್ಲಿ  ತಂತ್ರಜ್ಜಾನದ ಬಳಕೆಯಿಂದ ಪ್ರತಿನಿತ್ಯ ನಮ್ಮಲ್ಲೇ ಒಂದಾಗಿ ವಾಸಿಸುತ್ತಿದ್ದ ಅದೆಷ್ಟೋ ಪಕ್ಷಿಗಳು ಅಳಿವಿನ ಅಂಚಿಗೆ ಬಂದು ತಲುಪಿದೆ. ಅದರಲ್ಲಿ ಈ ಪಾರಿವಾಳಗಳು ಸಹ ಒಂದೂ ಭಾಗ. ಕಳೆದ ಕೆಲ ವಷ೯ಗಳಿಂದ ಕೆಲ ಕಡೆಗಳಲ್ಲಿ ಮಾತ್ರ ಪಾರಿವಾಳಗಳ ಹಿಂಡು ಕಾಣಸಿಗ್ತಿದ್ದು, ಒಂದು ಕಾಲದಲ್ಲಿ ಇದೇ ಪಾರಿವಾಳಗಳನ್ನು ರಾಜ ಮಹಾರಾಜರು ಮಾಹಿತಿ ಕಳುಹಿಸೋದಕ್ಕೆ, ವಿನಿಮಯ ಮಾಡೋದಕ್ಕೆ ಬಳಕೆ ಮಾಡಿಕೊಳ್ತಿದ್ರು. ಕಾಲ ಕಳೆದಂತೆ ಆಧುನಿಕ ತಂತ್ರಜ್ಜಾನ ಬಳಿಕ ಇದರ ಬಳಕೆ ಸಂಪೂರ್ಣವಾಗಿದ್ದು, ಟವರ್ ಗಳಿಂದ ಬರುವ ತರಂಗಗಳಿಂದ ಪಾರಿವಾಳಗಳು ಅಳಿವಿನ ಅಂಚಿಗೆ ಬಂದು ತಲುಪಿದೆ. ಆದ್ರೆ ಕಿತ್ತಂಡೂರು ಗ್ರಾಮದ ಈ ದೇವಸ್ಥಾನದಲ್ಲಿ ಇಂದಿಗೂ ನಮಗೆ ಸಾವಿರಾರು ಪಾರಿವಾಳಗಳು ಒಂದೇ ಕಡೆಯಲ್ಲಿ ಕಾಣಸಿಗ್ತಿದ್ದು,ಇದಕ್ಕೆ ಪ್ರಮುಖ ಕಾರಣಕರ್ತರು ಗ್ರಾಮಸ್ಥರು. ಹೌದು ಈ ಗೋಪುರವೇ ಇವುಗಳ ಪಾಲಿನ ಅರಮನೆ ಆಗಿದ್ದು, ಪಾರಿವಾಳಗಳ ಮೇಲೂ ಗ್ರಾಮಸ್ಥರಿಗೆ ಅಪಾರ ಪ್ರೀತಿ ಇರೋದ್ರಿಂದ, ಪ್ರತಿ ನಿತ್ಯ ಧಾನ್ಯ ಕಾಳುಗಳನ್ನು ಹಾಕಿ ಪೋಷಣೆ ಮಾಡುತ್ತಿದ್ದು, ಇವುಗಳ ಚಟುವಟಿಕೆಗಳು ಸಹ ಗ್ರಾಮದ ಜನರ ಮನಸ್ಸಿಗೆ ನೆಮ್ಮದಿ ನೀಡುತ್ತಿದೆ.ಯಾವುದೇ ದುಷ್ಟ ಶಕ್ತಿಗಳು ಪಕ್ಷಿಗಳನ್ನ ತಾಕದಂತೆಯೂ ಗ್ರಾಮಸ್ಥರು ರಕ್ಷಣೆ ಮಾಡ್ತಿದ್ದಾರೆ. 

BIG 3: ಈ ಸೇತುವೆಯಲ್ಲಿ ನಡೆದಾಡಲಿಕ್ಕೆ ಗುಂಡಿಗೆ ಬೇಕು: ಅಡಿಕೆ ಮರವೇ ಸೇತುವೆ..!

ಇನ್ನೂ ವೇಣುಗೋಪಾಲ ಸ್ವಾಮಿಗೆ ಪಾರಿವಾಳಗಳ ಇಂಚರ ಅದರ ಕೂಗುಗಳೇ ಬೆಳಗಿನ ಸುಪ್ರಭಾತವಾಗಿದೆ. ಇವುಗಳ ಹಾವ ಭಾವ, ಭಂಗಿಗಳನ್ನ ನೋಡುವುದೆ ಕಣ್ಣಿಗೆ ಪರಮಾನಂದವಾಗಿದ್ದು, ಹೋಗಿ ಬರುವ ಜನರು ಇದನ್ನು ನೋಡಿಕೊಂಡು ಕೆಲಕಾಲ ಕಣ್ತುಂಬಿಕೊಳ್ತಿದ್ದಾರೆ. ಇನ್ನು ಪ್ರತಿ ದಿನ 200-300 ಗ್ರಾಂನಷ್ಟು ಧಾನ್ಯಗಳು ಇವುಗಳಿಗೆ ಬೇಕಾಗಿದ್ದು, ಗ್ರಾಮದ ಜನ್ರು ಅಕ್ಕಿ, ಗೋಧಿ, ವಿವಿಧ ರೀತಿಯ ಕಾಳುಗಳನ್ನ ಹಾಕುತ್ತಾರೆ. ಬೆಳಗ್ಗೆ 7 ಗಂಟೆಯಾಗುತ್ತಿದ್ದಂತೆ ಹಾರಿ ಬರುವ ಪಾರಿವಾಳಗಳು ಅದೆಷ್ಟೇ ಜನರು ಇದ್ರು ಸಃ ಭಯಪಡದೇ ಅಷ್ಟೇ ಸಲುಗೆಯಿಂದ ಕುಳಿತುಕೊಂಡು ಆಹಾರ ಸೇವಿಸೋದು ಇಲ್ಲಿನ ಮತ್ತೊಂದು ವಿಶೇಷ. ಇನ್ನೂ ಲಕ್ವ ಪಾರವಾಳಗಳ ತಳಿಗೆ ಎಲ್ಲಿಲ್ಲದ ಬೇಡಿಕೆ ಸಹ ಇರೋಂದ್ರಿಂದ ಔಷಧಕ್ಕೆ ಬಳಸುವುದರಿಂದ ಇವುಗಳನ್ನ ಪತ್ತೆ ಹಚ್ಚುವುದು ಕಷ್ಟ. ಕಪ್ಪು, ಬಿಳಿ, ಕಪ್ಪು ಬಿಳಿ ಮಿಶ್ರಿತ ಪಾರಿವಾಳಗಳೆ ಇಲ್ಲಿ ಹೆಚ್ಚಾಗಿದೆ. ಹಿಂದಿನ ಕಾಲದಲ್ಲಿ ರಾಜ ಮಹರಾಜರು ಇವುಗಳನ್ನ ಸಂದೇಶ ರವಾನೆ ಮಾಡಲು ಬಳಸುತ್ತಿದ್ರು, ಜೊತೆಗೆ ಇವುಗಳಿಗಾಗಿ ಪ್ರತ್ಯೇಕ ಗೂಡುಗಳನ್ನ ನಿರ್ಮಾಣ ಮಾಡಿ ಪಕ್ಷಿ ಪ್ರೇಮ ಮೆರೆಯುತ್ತಿದ್ರು. ಆದ್ರೇ ಯಾವುದೇ ಅಪೇಕ್ಷೆ ಇಲ್ಲದೆ ಈ ಗ್ರಾಮಸ್ಥರು ಅದಕ್ಕಿಂತ ಹೆಚ್ಚಿನ ಪ್ರೇಮ ಮೆರೆಯುತ್ತಿರೊದ್ರಿಂದ ಇಂದಿಗೂ ಸಾವಿರಾರು ಪಾರಿವಾಳಗಳು ಇಲ್ಲಿ ಜೀವಿಸುತ್ತಿರೋದು ವಿಶೇಷ.

ಒಟ್ನಲ್ಲಿ ಆಧುನಿಕ ಯುಗದಲ್ಲಿ ಪಾರಿವಾಳಗಳು ಅವನತಿಗೆ ತಲುಪುತ್ತಿದೆ. ರಾಜ ಮಹಾರಾಜರು ಇವುಗಳಿಗಾಗಿ ಮಹಲ್ ಗಳನ್ನ ನಿರ್ಮಿಸಿರುವ ಇತಿಹಾಸಗಳು ನಮ್ಮ ಕಣ್ಣ ಮುಂದಿದ್ದು. ಇಂತಹ ಕಾಲಮಾನದಲ್ಲಿ ಈ ಗ್ರಾಮದ ಜನ್ರು ಪ್ರೀತಿಯಿಂದ ಪಾರಿವಾಳಗಳ ಪೋಷಣೆ ಮಾಡುತ್ತಿರುವುದು ಪಕ್ಷಿ ಪ್ರೇಮಕ್ಕೆ ಹಿಡಿದ ಕೈಗನ್ನಡಿಯಿದ್ದಂತೆ.