Asianet Suvarna News Asianet Suvarna News

Bidar: ಮೈಲಾರ ಮಲ್ಲಣ್ಣ ದೇವಸ್ಥಾನದ ಅಭಿವೃದ್ಧಿಗೆ ಅಧಿಕಾರಿಗಳೇ ಕಂಟಕ..!

*  ಪ್ರತಿವರ್ಷ ಲಕ್ಷಾಂತರ ಮಂದಿ ಭಕ್ತರು ಭೇಟಿ ಕೊಡುವ ದೇಗುಲದಲ್ಲಿ ಇಲ್ಲ ಮೂಲಭೂತ ಸೌಕರ್ಯ
*  ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ರಸ್ತೆಗಳು ಇಲ್ಲದೇ ಭಕ್ತರ ಪರದಾಟ
*  ಈ ಭಾಗದಲ್ಲಿ ದಕ್ಷಿಣ ಕಾಶಿ ಎಂದು ಖ್ಯಾತಿ ಹೊಂದಿರುವ ಮೈಲಾರ ಮಲ್ಲಣ್ಣ ದೇವಸ್ಥಾನ
 

ಬೀದರ್(ಫೆ.01):  ಗಡಿ ಜಿಲ್ಲೆ ಬೀದರ್‌ನ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದಲ್ಲಿರುವ ಮೈಲಾರ ಮಲ್ಲಣ್ಣ ದೇವಸ್ಥಾನ ಈ ಭಾಗದಲ್ಲಿ ಅತೀ ಹೆಚ್ಚು ಭಕ್ತರು ಹೊಂದಿರುವ ದೇವಸ್ಥಾನ. ಮಾರ್ತಾಂಡ ರೂಪದಲ್ಲಿ ಬಂದು ಅಸುರರನ್ನ ಸಂಹಾರ ಮಾಡಿ ಮೈಲಾರ ಮಲ್ಲಣ್ಣ ಇಲ್ಲೇ ನೆಲೆಸಿದ್ದಾನೆಂದು ಭಕ್ತರ ನಂಬಿಕೆಯಾಗಿದೆ. ಪ್ರತಿ ವರ್ಷ ಚಟ್ಟಿ ಅಮಾವಾಸೆಯಿಂದ ಎಳ್ಳ ಅಮಾವಾಸೆವರೆಗೂ ಒಂದು ತಿಂಗಳುಗಳ ಕಾಲ ಇಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ರಾಜ್ಯ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹಲವೆಡೆಯಿಂದ ಲಕ್ಷಾಂತರ ಜನ ಭಕ್ತರು ಹರಿದು ಬರುತ್ತಾರೆ. ಅರಸಿಣ ಮತ್ತು ಕೊಬ್ಬರಿ ಮಿಶ್ರಿತ ಬಂಡಾರ ಎರಚಿ ದರ್ಶನ ಪಡೆದು ಪುನೀತರಾಗುತ್ತಾರೆ,. ಹೀಗೆ ಬರುವ ಭಕ್ತರಿಗೆ ಇಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೇ ಪರಿತಪ್ಪುವಂತಾಗಿದೆ.

Karnataka Politics: ದೊಡ್ಡವರಿಗೆ ನಾವೇನ್ ಕಮ್ಮಿ... ಬಿಜೆಪಿ-ಕಾಂಗ್ರೆಸ್‌ ನಾಯಕರ ನಡುವೆ ಹೊಡೆದಾಟ-ಬಡಿದಾಟ!

ಇನ್ನು ಇಲ್ಲಿನ ಅಭಿವೃದ್ಧಿಗೆ ದೇವಸ್ಥಾನದ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಸಾಕಷ್ಟು ಬಾರಿ ಪ್ರಯತ್ನ ಮಾಡಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ಸುತ್ತಲಿನ ಜಾಗ ನಮ್ಮದ್ದು ಎಂದು ಅಡ್ಡಿ ಪಡಿಸುತ್ತಿದ್ದಾರೆ. ಇಲ್ಲಿ ಈಗಲೂ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ರಸ್ತೆಗಳ ನಿರ್ಮಾಣ ಸೇರಿದಂತೆ ಹತ್ತಾರು ಸಮಸ್ಯೆಗಳು ಇವೆ. ಯಾವುದೇ ಒಂದು ಕಾಮಗಾರಿ ಕೈಗೆತ್ತಿಕೊಂಡಿದ್ದರು ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುವ ಮೂಲಕ ದೇವಸ್ಥಾನದ ಅಭಿವೃದ್ಧಿ ಕಂಟಕವಾಗಿದ್ದಾರೆ. ಇನ್ನು ಈ ಹಿಂದೆ ಸುಮಾರು ವರ್ಷಗಳ ಹಿಂದೆ ದೇವಸ್ಥಾನದ ಕೆಳಗೆ ನೂರಾರು ಎಕರೆ ಭೂಮಿ ಇತ್ತು, ಆದರೆ ಅದು ಈಗ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಪಾಲಾಗಿದ್ದು ದೇವಸ್ಥಾನದ ಹೆಸರಲ್ಲಿ ಕೇವಲ ಆರೇಳು ಎಕರೆ ಭೂಮಿ ಮಾತ್ರ ಉಳಿದುಕೊಂಡಿದೆ. ದೇವಸ್ಥಾನ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವಿಲನ್ ಆಗಿದ್ದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಅಸುರರ ಸಂಹಾರಕ್ಕಾಗಿ ಈ ಭಾಗದಲ್ಲಿ ಮಾರ್ತಾಂಡ ರೂಪದಲ್ಲಿ ಬಂದ ಮೈಲಾರ ಮಲ್ಲಣ್ಣನ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಸುರರಂತೆ ಕಾಡುತ್ತಿದ್ದಾರೆ. ಈಗಲಾದರೂ ದಕ್ಷಿಣ ಕಾಶಿ ಎಂದೇ ಖ್ಯಾತಿಯ ಈ ದೇವಾಲಯದ ಅಭಿವೃದ್ಧಿಗೆ ಅಧಿಕಾರಿಗಳು ಸಹಕರಿಸುತ್ತಾರಾ ಕಾದು ನೋಡಬೇಕಾಗಿದೆ.
 

Video Top Stories