Asianet Suvarna News Asianet Suvarna News

Karwar: ಕೈ ಮುಗಿತೀವಿ ಸೇತುವೆ ನಿರ್ಮಿಸಿಕೊಡಿ, ಸಚಿವ ಹೆಬ್ಬಾರ್‌ಗೆ ಬಾಲಕಿಯ ಮನವಿ

*  ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲದೇ ಪರದಾಡಬೇಕಾದ ಪರಿಸ್ಥಿತಿ
*  ಮಳೆಗಾಲದಲ್ಲಂತೂ ಹೊರಜಗತ್ತಿನಿಂದ ಸಂಪರ್ಕ ಕಡಿದುಕೊಳ್ಳುವ ಗ್ರಾಮ
*  ಸೇತುವೆಗಾಗಿ ಜನಪ್ರತಿನಿಧಿಗಳಿಗೆ ಮನವಿ ಮಾಡಿ ರೋಸಿಹೋಗಿರುವ ಜನ
 

ಕಾರವಾರ(ನ.25):  ನದಿಯಂಚಿನಲ್ಲಿರುವ ಆ ಪುಟ್ಟ ಗ್ರಾಮದಲ್ಲಿ ನೂರಾರು ಜನರು ನೆಮ್ಮದಿಯಿಂದ ಜೀವನ ನಡೆಸ್ತಿದ್ದಾರೆ. ಆದರೆ, ಯಾವಾಗ ಮಳೆ ಬರುತ್ತೋ ಆ ಗ್ರಾಮದ ಜನರ ನೆಮ್ಮದಿಯೇ ಹಾಳಾಗಿ ಬಿಡುತ್ತದೆ. ಮಳೆ ಬಂದ ಕೂಡಲೇ ಈ ಗ್ರಾಮವೇ ಸಂಪರ್ಕ ಕಳೆದುಕೊಳ್ಳುತ್ತಿದ್ದು, ತುಂಬಿ ಹರಿಯುವ ಹಳ್ಳದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡೇ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಗ್ರಾಮಸ್ಥರು ನಡೆದು ಸಾಗಬೇಕಾದ ದುಸ್ಥಿತಿಯಿದೆ. 

Belagavi: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಾಳು ಕೊಂಪೆಯಾದ ನೂರಾರು ಮನೆಗಳು

ಹೌದು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಕಳೆದರೂ ಈವರೆಗೂ ಕೆಲವು ಹಳ್ಳಿಗಳಲ್ಲಿ ಕನಿಷ್ಠ ಮೂಲಭೂತ ಸೌಕಾರ್ಯವೂ ಇಲ್ಲದೇ ಪರದಾಡಬೇಕಾದ ಸ್ಥಿತಿಯಿದೆ. ಇದಕ್ಕೆ ನೈಜ ಉದಾಹರಣೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸಾಕುಳಿ ಗ್ರಾಮ. ಈ ಗ್ರಾಮದಲ್ಲಿ ಹಳ್ಳವೊಂದು ತುಂಬಿ ಹರಿಯುವ ಕಾರಣ ಗ್ರಾಮಸ್ಥರಿಗೆ ಪ್ರತಿ ಮಳೆಗಾಲದ ವೇಳೆ ಹೊರ ಊರಿನ ಸಂಪರ್ಕವೇ ಕಡಿತಗೊಳ್ಳಬೇಕಾದ ಸ್ಥಿತಿ ಎದುರಾಗುತ್ತದೆ. ಸಣ್ಣ ಮಳೆ ಬಂದರೂ ತುಂಬಿ ಹರಿಯುವ ಹಳ್ಳಕ್ಕೆ ಯಾವುದೇ ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ಹಳ್ಳದಲ್ಲಿಯೇ ಸರ್ಕಸ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಪ್ರತಿನಿತ್ಯ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಗ್ರಾಮಸ್ಥರು ಹಳ್ಳದಲ್ಲೇ ಜೀವ ಕೈಯಲ್ಲಿ ಹಿಡಿದು ನಡೆದುಕೊಂಡೇ ಸಾಗಬೇಕಾಗಿದೆ. ಗ್ರಾಮದಲ್ಲಿ ಸುಮಾರು 50 ಕುಟುಂಬಗಳು ವಾಸವಿದ್ದು ಮಳೆಗಾಲದಲ್ಲಂತೂ ಇಡೀ ಗ್ರಾಮ ಹೊರಜಗತ್ತಿನಿಂದ ಸಂಪರ್ಕ ಕಡಿದುಕೊಳ್ಳುತ್ತದೆ. ಅದರಲ್ಲೂ ರೋಗಿಗಳು, ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಸಾಗಿಸಲು ಹೊಳೆಯ ನೀರಿನಲ್ಲಿ ಹೊತ್ತುಕೊಂಡೇ ಸಾಗಬೇಕಾಗಿದ್ದು ಗ್ರಾಮಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಸಹ ಇಲ್ಲವಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರಾದ ಚಿದಂಬರ ನಾಯ್ಕ. 

ಅಂದಹಾಗೆ, ಕಳೆದ ಮೂರು ವರ್ಷಗಳಿಂದ ಮಳೆಯ ಪ್ರಮಾಣ ಹೆಚ್ಚಳವಾಗಿದ್ದು ಗ್ರಾಮದಲ್ಲಿ ವರ್ಷವಿಡೀ ತುಂಬಿ ಹರಿಯುವ ಹಳ್ಳದ ನೀರಿನಲ್ಲೇ ಓಡಾಡಬೇಕಾದ ಸ್ಥಿತಿ ಇಲ್ಲಿನ ಗ್ರಾಮಸ್ಥರದ್ದಾಗಿದೆ. ಹೊನ್ನಾವರ ಪಟ್ಟಣದಿಂದ ಕೇವಲ 8 ಕಿಲೋ ಮೀಟರ್ ದೂರದಲ್ಲಿ ಈ ಹೊಸಾಕುಳಿ ಗ್ರಾಮವಿದ್ದು ದಶಕಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಸಮಸ್ಯೆಯಿಂದ ನೊಂದಿರುವ ಪುಟ್ಟ  ಬಾಲಕಿಯೊರ್ವಳು ತಮ್ಮ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಕೈಮುಗಿದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ಗೆ ಮನವಿ ಮಾಡಿಕೊಂಡಿದ್ದಾಳೆ.