
ಕಲ್ಲೇರಿ ಕಾಡು.. ಬೊಳಿಯಾರ್ ಅರಣ್ಯ.. ಏನಿದರ ರಹಸ್ಯ? ಯಾವ ನಿಗೂಢ ಅಡಗಿದೆ ಆ ಅರಣ್ಯದಲ್ಲಿ?
ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಹೊಸ ತಿರುವು ಪಡೆದಿದ್ದು, ಕಲ್ಲೇರಿ ಮತ್ತು ಬೊಳಿಯಾರ್ ಅರಣ್ಯಗಳಲ್ಲಿ ಶವಗಳಿಗಾಗಿ ಶೋಧ ಆರಂಭವಾಗಿದೆ. ಬುರುಡೆ ಮತ್ತು ಹೊಸ ಶೋಧಗಳ ನಡುವಿನ ಸಂಬಂಧದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ನಿಗೂಢತೆಗಳಿಗೆ ಉತ್ತರ ಸಿಗುವುದೇ ಎಂದು ಕಾದು ನೋಡಬೇಕಿದೆ.
ಮಂಗಳೂರು (ಆ.9): ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆಯಲ್ಲಿ ಹೊಸ ತಿರುವುಗಳು ಕಾಣಿಸಿಕೊಂಡಿವೆ. ಅನಾಮಧೇಯ ದೂರುದಾರರ ಇದುವರೆಗೆ ಗುರುತು ಮಾಡಿದ್ದ 13 ಸ್ಥಳಗಳನ್ನು ಬಿಟ್ಟು, ಈಗ ಹೊಸ ಪ್ರದೇಶಗಳಾದ ಕಲ್ಲೇರಿ ಮತ್ತು ಬೊಳಿಯಾರ್ ಅರಣ್ಯಗಳಲ್ಲಿ ಶವಗಳಿಗಾಗಿ ಶೋಧ ಕಾರ್ಯವನ್ನು ಆರಂಭಿಸಿದೆ. ಈ ದಿಢೀರ್ ಬದಲಾವಣೆ ತನಿಖೆಯ ಕುತೂಹಲವನ್ನು ಹೆಚ್ಚಿಸಿದೆ.
ಎಸ್ಐಟಿ ಅಧಿಕಾರಿಗಳು ಬೊಳಿಯಾರ್ ಅರಣ್ಯದಲ್ಲಿ ಹೂತಿಟ್ಟ ಶವಗಳ ರಹಸ್ಯ ಬೇಧಿಸಲು ಯತ್ನಿಸುತ್ತಿದ್ದಾರೆ. ದೂರುದಾರರ ಸಾಕ್ಷಿಯಾಗಿ ತಂದಿದ್ದ ಬುರುಡೆ ಮತ್ತು ಈ ಹೊಸ ಶೋಧಗಳ ನಡುವೆ ಇರುವ ನಂಟಿನ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.
ಈ ಕಾಡಿನಲ್ಲೇ ಈ ಬುರುಡೆಯನ್ನು ತೆಗೆದು ತಂದಿದ್ದಾನೆಯೇ ಎಂಬ ಅನುಮಾನ ಮೂಡಿದೆ. ಹಳೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಸತ್ಯಶೋಧನೆ ಯಾವ ದಿಕ್ಕಿನಲ್ಲಿ ಸಾಗಲಿದೆ ಮತ್ತು ಅಂತಿಮವಾಗಿ ಈ ನಿಗೂಢತೆಗಳಿಗೆ ಉತ್ತರ ಸಿಗುತ್ತದೆಯೇ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ.