
ಹೆಂಡತಿ ಮೇಲೆ ಕಣ್ಣಾಕಿದ 10 ವರ್ಷದ ಗಟ್ಟಿ ಸ್ನೇಹಿತ; ಆತನಿಗಾಗಿ ಗಂಡನ ಉಸಿರನ್ನೇ ನಿಲ್ಲಿಸಿದಳು ಹೆಂಡತಿ!
ಬೆಂಗಳೂರಿನಲ್ಲಿ ದಶಕಗಳ ಸ್ನೇಹಕ್ಕೆ ಅಕ್ರಮ ಸಂಬಂಧ ಬೆಂಕಿ ಹಚ್ಚಿದೆ. ಪತ್ನಿ ಮತ್ತು ಆಪ್ತ ಸ್ನೇಹಿತನ ನಡುವಿನ ಅಕ್ರಮ ಸಂಬಂಧ ಗಂಡನ ಕೊಲೆಯಲ್ಲಿ ಅಂತ್ಯಗೊಂಡಿದೆ. ಪೊಲೀಸರು ಪತ್ನಿ ಮತ್ತು ಪ್ರಿಯಕರನ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು (ಆ.13): ದಶಕಗಳ ಸ್ನೇಹ, ಬದುಕು ಮತ್ತು ಕುಟುಂಬವನ್ನು ಅಕ್ರಮ ಸಂಬಂಧವೊಂದು ಬೀದಿ ಪಾಲು ಮಾಡಿರುವ ಘಟನೆಯೊಂದು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ನೇಹಿತನ ಪತ್ನಿಯ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನೊಬ್ಬನನ್ನು ಆಕೆಯ ಪತ್ನಿಯೇ ಹತ್ಯೆ ಮಾಡಿಸಿದ ಆರೋಪ ಎದುರಿಸುತ್ತಿದ್ದಾರೆ.
ಬೆಂಗಳೂರಿನ ನಿವಾಸಿಗಳಾದ ವಿಜಯ್ ಕುಮಾರ್ ಮತ್ತು ಜಯಂತ್ ಕಳೆದ 30 ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ದರು. ಇಬ್ಬರೂ ಆಟೋ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ವಿಜಯ್ಗೆ ಪತ್ನಿ ಆಶಾ ಮತ್ತು ಇಬ್ಬರು ಮಕ್ಕಳು ಇದ್ದರು. ಆದರೆ, ಈ ಸ್ನೇಹದ ಸಂಬಂಧ ದುರಂತಕ್ಕೆ ಕಾರಣವಾಗಿದೆ. ವಿಜಯ್ ಪತ್ನಿ ಆಶಾ ಮತ್ತು ಆತನ ಸ್ನೇಹಿತ ಜಯಂತ್ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು.
ಸ್ಥಳಾಂತರ ಮಾಡಿದರೂ ತಪ್ಪದ ಗಲಾಟೆ: ಪತ್ನಿ ಮತ್ತು ಸ್ನೇಹಿತನ ಸಂಬಂಧದ ಬಗ್ಗೆ ತಿಳಿದ ವಿಜಯ್, ಕುಟುಂಬದ ಶಾಂತಿಗಾಗಿ ಕಾಮಾಕ್ಷಿಪಾಳ್ಯದ ಮನೆಯನ್ನು ಬಿಟ್ಟು ಕಡಬಗೆರೆಯ ಮಾಚೋಹಳ್ಳಿ ಬಡಾವಣೆಗೆ ಸ್ಥಳಾಂತರಗೊಂಡಿದ್ದರು. ಆದರೆ, ಆಶಾ ಮತ್ತು ಜಯಂತ್ರ ಅಕ್ರಮ ಸಂಬಂಧ ಮುಂದುವರಿದಿತ್ತು. ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ನಿರಂತರ ಗಲಾಟೆ ನಡೆಯುತ್ತಿತ್ತು. ಇದರಿಂದ ಬೇಸತ್ತಿದ್ದ ವಿಜಯ್ ಕೊಲೆಗೆ ಇದು ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪತ್ನಿಯಿಂದಲೇ ಹತ್ಯೆ ಸ್ಕೆಚ್?
ಮೊನ್ನೆ ಸಂಜೆ 7:30 ರ ಸುಮಾರಿಗೆ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗುವುದಾಗಿ ಪತ್ನಿ ಆಶಾಗೆ ಹೇಳಿ ವಿಜಯ್ ಮನೆಯಿಂದ ಹೊರಟಿದ್ದ. ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ವಿಜಯ್ನನ್ನು ಆತನ ಪತ್ನಿ ಆಶಾ ಮತ್ತು ಆಕೆಯ ಪ್ರಿಯಕರ ಜಯಂತ್ ಸೇರಿ ಹತ್ಯೆ ಮಾಡಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಎಸ್.ಪಿ ಸಿ.ಕೆ. ಬಾಬಾ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯ ಪ್ರಕಾರ, ಹತ್ಯೆಯಾದ ವಿಜಯ್ ಕುಮಾರ್ರ ಪತ್ನಿ ಆಶಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆ ನಡೆದ ನಂತರ ನಾಪತ್ತೆಯಾಗಿರುವ ಪ್ರಿಯಕರ ಜಯಂತ್ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಒಂದು ಅಕ್ರಮ ಸಂಬಂಧ ಒಂದು ದಶಕಗಳ ಸ್ನೇಹವನ್ನು, ಒಂದು ಕುಟುಂಬವನ್ನು ಮತ್ತು ಒಂದು ಜೀವವನ್ನು ಬಲಿ ತೆಗೆದುಕೊಂಡಿದೆ.