ಪ್ರೀತಿಸಿ ಮದುವೆಯಾಗಿದ್ದ, ಡಿವೋರ್ಸ್​ಗೆ ಹೆದರಿ ಜೀವತೆತ್ತ ಪತಿ: 11 ವರ್ಷದ ದಾಂಪತ್ಯಕ್ಕೆ ದುರಂತ ಅಂತ್ಯ!

ಇವಳೇ ಬೇಕು ಅಂತ ಪ್ರೀತಿಸಿ ಮದುವೆಯಾಗಿದ್ದವನು ಈಗ ಹೆಂಡತಿಯ ಡಿವೋರ್ಸ್ ಬೆದರಿಕೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡಿವೋರ್ಸ್ ಕೊಡಲು ಮುಂದಾಗಿದ್ದ ಪತ್ನಿಯ ಮನವೊಲಿಕೆಗೆ ಬಂದಿದ್ದ ಗಂಡ ಆಕೆಯ ಮುಂದೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಜೀವ ಬಿಟ್ಟಿದ್ದಾನೆ.

Share this Video
  • FB
  • Linkdin
  • Whatsapp

ಇವಳೇ ಬೇಕು ಅಂತ ಪ್ರೀತಿಸಿ ಮದುವೆಯಾಗಿದ್ದವನು ಈಗ ಹೆಂಡತಿಯ ಡಿವೋರ್ಸ್ ಬೆದರಿಕೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡಿವೋರ್ಸ್ ಕೊಡಲು ಮುಂದಾಗಿದ್ದ ಪತ್ನಿಯ ಮನವೊಲಿಕೆಗೆ ಬಂದಿದ್ದ ಗಂಡ ಆಕೆಯ ಮುಂದೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಜೀವ ಬಿಟ್ಟಿದ್ದಾನೆ. ಬೆಂಗಳೂರಿನ ನಾಗರಬಾವಿಯಲ್ಲಿ ಈ ಘಟನೆ ನಡೆದಿದೆ. ಹೆಂಡತಿಗಾಗಿ ಬೆಂಕಿಗೆ ಆಹುತಿಯಾದವನ ಹೆಸರು ಮಂಜುನಾಥ. ಕ್ಯಾಬ್ ಓಡಿಸಿಕೊಂಡು ಜೀವನ ಮಾಡ್ತಿದ್ದ. 2013ರಲ್ಲಿ ನಯನಾ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ. ಇಬ್ಬರಿಗೆ 9 ವರ್ಷದ ಒಬ್ಬ ಮಗನೂ ಇದ್ದಾನೆ. ಒಂಭತ್ತು ವರ್ಷದಿಂದ ಇಬ್ಬರ ದಾಂಪತ್ಯ ಚೆನ್ನಾಗಿಯೇ ಇತ್ತು. ಆದ್ರೆ ಒಂದೂವರೆ ವರ್ಷಗಳಿಂದ ಗಂಡ ಹೆಂಡತಿ ಮಧ್ಯೆ ಮನಸ್ತಾಪ ಹೆಚ್ಚಾಗಿ ಪ್ರತಿದಿನ ಜಗಳ ನಡೀತಿತ್ತು. ಹೀಗಾಗಿ ಗಂಡನಿಂದ ಡಿವೋರ್ಸ್ ಪಡೆಯಲು ನಯನಾ ಮುಂದಾಗಿದ್ದಳು. ಇದರಿಂದ ಬೇಸತ್ತಿದ್ದ ಮಂಜುನಾಥ್ ತನ್ನ ತಾಯಿ ಮನೆಯಲ್ಲಿರಲು ಶುರು ಮಾಡಿದ್ದ. 

ಒಟ್ಟಾಗಿ ಇರೋಣ ಅಂತ ಮಂಜುನಾಥ್ ಹಲವು ಬಾರಿ ನಯನಾ ಮುಂದೆ ಬೇಡಿಕೆ ಇಟ್ಟಿದ್ದನಂತೆ. ಆದ್ರೆ ನಯನಾ ಒಪ್ಪಿರಲಿಲ್ಲ ಎನ್ನುವ ಮಾಹಿತಿ ಇದೆ. ಇವತ್ತು ಬೆಳಗ್ಗೆ 8 ಗಂಟೆಗೆ ನಾಗರಬಾವಿಯಲ್ಲಿರೋ ನಯನ ಫ್ಲ್ಯಾಟ್​ಗೆ ಬಂದ ಮಂಜುನಾಥ್.. ಡೈವೋರ್ಸ್ ಬೇಡ ಒಟ್ಟಾಗಿ ಇರೋಣ, ಇಲ್ಲದಿದ್ರೆ ಸೂಸೈಡ್ ಮಾಡಿಕೊಳ್ಳೊದಾಗಿ ಬೆದರಿಕೆ ಹಾಕಿದ್ದಾನೆ.. ಇದಕ್ಕೆ ಸೊಪ್ಪು ಹಾಕದ ನಯನಾ ಏನಾದ್ರೂ ಮಾಡಿಕೋ ಎಂದು ಹೇಳಿ ಬಾಗಿಲು ಹಾಕಿಕೊಂಡಿದ್ದಾಳೆ. ಮತ್ತೆ 10.30ರ ಹೊತ್ತಿಗೆ ಪೆಟ್ರೋಲ್ ತೆಗೆದುಕೊಂಡು ಬಂದ ಮಂಜುನಾಥ್, ಹೆಂಡತಿಯ ಎದುರಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಜುನಾಥ್ ನನ್ನ ಕಳೆದುಕೊಂಡ ಆತನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮಂಜುನಾಥ್ ಆತ್ಮಹತ್ಯೆ ವಿಷಯ ತಿಳಿದು ಸ್ಥಳಕ್ಕೆ ಬಂದ ಜ್ಞಾನಭಾರತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾದ್ರು. ಇಷ್ಟಪಟ್ಟವಳನ್ನ ಪ್ರೀತಿಸಿ ಮದುವೆಯಾಗಿದ್ದ ಮಂಜುನಾಥ್ ಆಕೆಯ ಜತೆಗೇ ಮನಸ್ತಾಪದಿಂದ ಜೀವ ಬಿಟ್ಟಿದ್ದಾನೆ. 

Related Video