
₹5 ಲಕ್ಷಕ್ಕಾಗಿ ಕಿಡ್ನಾಪ್, ಕಾಡಿನ ಹೆಣವಾದ 13ರ ಬಾಲಕ; ಕೊಲೆಯ ಇಂಚಿಂಚು ಮಾಹಿತಿ ರಿವೀಲ್!
ಟ್ಯೂಷನ್ಗೆ ಹೋದ ಬಾಲಕ ವಾಪಸ್ ಬಾರದೆ, ₹5 ಲಕ್ಷಕ್ಕೆ ಡಿಮ್ಯಾಂಡ್ ಬಂದು, ಕೊನೆಗೆ ಬಾಲಕನ ಕೊಲೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕುಟುಂಬದ ಡ್ರೈವರ್ ಆಗಿದ್ದ ಕಿರಾತಕನೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಆತ 13 ವರ್ಷದ ಬಾಲಕ.. ಆಟ ಪಾಠ ಅನ್ನೋದು ಬಿಟ್ರೆ ಬೇರೇನೋ ಗೊತ್ತಿಲ್ಲ. ಅಪ್ಪ ಅಮ್ಮ ಇಬ್ಬರೂ ವಿದ್ಯಾವಂತರು. ಒಳ್ಳೆ ಕೆಲಸದಲ್ಲಿರೋರು. ಆವತ್ತೊಂದು ದಿನ ಮಗ ಟ್ಯೂಶನ್ಗೆ ಹೋಗಿ ಬರ್ತಿನಿ ಅಂತ ಹೋದವನು ವಾಪಸ್ ಬರೋದೇ ಇಲ್ಲ. ಟ್ಯೂಶನ್ ಟೀಚರ್ನ ಕೇಳಿದರೆ ಆತ ಆಗಲೇ ಹೋದ ಅಂದರು. ಗೆಳೆಯರನ್ನ ಕೇಳಿದ್ರೆ ಗೊತ್ತಿಲ್ಲ ಅನ್ನೋದೊಂದೇ ಉತ್ತರ. ಇದರಿಂದ ಆತಂಕಗೊಂಡ ಹೆತ್ತವರು ಪೊಲೀಸ್ ಕಂಪ್ಲೆಂಟ್ ಕೊಟ್ಟರು.
ಆದರೆ, ಮಧ್ಯರಾತ್ರಿ ಒಬ್ಬ ಅನಾಮಿಕನಿಂದ ಹೆತ್ತವರಿಗೆ ₹5 ಲಕ್ಷಕ್ಕೆ ಡಿಮ್ಯಾಂಡ್ ಬರುತ್ತದೆ. ನಿಮ್ಮ ಮಗ ನನ್ನ ಬಳಿ ಇದ್ದಾನೆ 5 ಲಕ್ಷ ರೂ. ಕೊಟ್ಟರೆ ಬಿಟ್ಟುಬಿಡ್ತೀನಿ ಅಂತಾನೆ. ಹೆತ್ತವರು ಆತ ಹೆಳಿದಕ್ಕೆಲ್ಲಾ ಓಕೆ ಅಂತಾರೆ. ಆತ ಹೆಳಿದ ಜಾಗಕ್ಕೆ ಹಣವನ್ನೂ ತಗೆದುಕೊಂಡು ಹೋಗಿ ಕೊಟ್ಟು ಬರ್ತಾರೆ. ಬಟ್ ಮಗ ಜೀವಂತವಾಗಿ ಮನೆಗೆ ಬರೋದೇ ಇಲ್ಲ. ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬಾಲಕನ ಕಿಡ್ನ್ಯಾಪ್ ಆ್ಯಂಡ್ ಮರ್ಡರ್ ಕಥೆಯೇ ಇವತ್ತಿನ ಎಫ್.ಐ.ಆರ್.
ಬೆಂಗಳೂರಿನಲ್ಲಿ ಟ್ಯೂಷನ್ ಹೋಗಿ ಮನೆಗೆ ಮರಳುತ್ತಿದ್ದ ಬಾಲಕನೊಬ್ಬನನ್ನು ಅಪಹರಿಸಿ, ಬಳಿಕ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬನ್ನೇರುಘಟ್ಟ ಸಮೀಪ ಬೆಳಕಿಗೆ ಬಂದಿದೆ. ಅರಕೆರೆ ಪ್ರದೇಶದ ಶಾಂತಿನಿಕೇತನ ಬಡಾವಣೆಯಲ್ಲಿ ನೆಲೆಸಿರುವ ಕಾಲೇಜಿನ ಪ್ರೊಫೆಸರ್ ಕುಟುಂಬದ 7 ತರಗತಿಯ ವಿದ್ಯಾರ್ಥಿ ನಿಶ್ಚಿತ್ (13) ಎಂಬಾತನು ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಕೆಲವು ವ್ಯಕ್ತಿಗಳು ಬಾಲಕನನ್ನು ಅಪಹರಿಸಿದ್ದಾರೆ. ಇದಾದ ನಂತರ ಬಾಲಕ ನಿಶ್ಚಿತ್ ಊರ ಹೊರಗಿನ ಕಾಡಿನಲ್ಲಿಯೇ ಹೆಣವಾಗಿದ್ದನು. ಆತನನ್ನ ಕಿಡ್ನಾಪ್ ಮಾಡಿದ ಕಿಡಿಗೇಡಿಗಳು ಅಮಾನುಷವಾಗಿ ಕೊಲೆ ಮಾಡಿ, ಸಿಕ್ಕಷ್ಟು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅರೆಬರೆಯಾಗಿ ಸುಟ್ಟು ಹಾಕಿದ್ದರು.
ಅಷ್ಟಕ್ಕೂ ಟ್ಯೂಷನ್ನಿಂದ ಮನೆ ಕಡೆಗೆ ಹೊರಟಿದ್ದ ಆ ಬಾಲಕ ಹೇಗೆ ಕಿಡ್ನಾಪರ್ಸ್ ಕೈಗೆ ಸಿಕ್ಕಿಬಿದ್ದ? ಕಳ್ಳರು ಬಂದು ರಾಜಾರೋಷವಾಗಿ ಊರಿನ ಮಧ್ಯಭಾಗದಲ್ಲಿ ಕಿಡ್ನಾಪ್ ಮಾಡುತ್ತಾರೆಂದರೆ, ಬಾಲಕ ಸಹಾಯಕ್ಕಾಗಿ ಕೂಗಿಕೊಳ್ಳಬೇಕಿತ್ತಲ್ವಾ? ಕಳ್ಳರು ಇದೇ ಮಗುವನ್ನು ಏಕೆ ಕಿಡ್ನಾಪ್ ಮಾಡಿದರು? ಕಿಡ್ನಾಪ್ ಮಾಡಿದ ನಂತರ ನಡೆದಿದ್ದೇನು? ಎಂಬ ಇಂಚಿಂಚು ಮಾಹಿತಿಯನ್ನು ಪೊಲೀಸರು ರಿವೀಲ್ ಮಾಡಿದ್ದಾರೆ.
ನಿಶ್ಚಿತ್ ಅವರ ಅಪ್ಪ-ಅಮ್ಮನ ಬಳಿ ಕಾರ್ ಇತ್ತು. ಆದರೆ, ಅವರಿಗೆ ಡ್ರೈವಿಂಗ್ ಮಾಡುವುದಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಒಂದು ಆ್ಯಪ್ನಲ್ಲಿ ಡ್ರೈವರ್ನ ಬುಕ್ ಮಾಡಿಕೊಳ್ಳುತ್ತಿದ್ದರು. ಆಗ ಡ್ರೈವರ್ ಆಗಿ ಇವರ ಮನೆಗೆ ಬಂದಿದ್ದೇ ಆ ಕಿರಾತಕ ಕಿಡ್ನಾಪರ್ಸ್. ನಿಶ್ಚಿತ್ ಮನೆಯವರ ಜೊತೆಗೆ, ಎರಡ್ಮೂರು ಬಾರಿ ಒಳ್ಳೆಯವನಂತೆ ನಟಿಸಿದ್ದ ಕಿರಾತಕ, ನಂತರ ತನ್ನ ನಂಬರ್ ಕೊಟ್ಟು ಆ್ಯಪ್ ಮೂಲಕ ಬೇಡ, ನನಗೇ ಡೈರೆಕ್ಟಾಗಿ ಕಾಲ್ ಮಾಡಿ ಕಡಿಮೆ ಹಣಕ್ಕೆ ಬಂದು ಡ್ರೈವಿಂಗ್ ಮಾಡ್ತೇನೆ ಎಂದು ಹೇಳಿದ್ದ.
ಡ್ರೈವರ್ ಆಗಿ ನಂಬಿಕೆ ಗಳಿಸಿದ್ದ ಕಿರಾತಕ ಉಪನ್ಯಾಸಕದ ಕುಟುಂಬಕ್ಕೆ ಹತ್ತಿರವಾಗಿದ್ದನು. ಆದರೆ ಹೀಗೆ ಹತ್ತಿರವಾದವನು, ಇವತ್ತು ಆ ಮನೆಯ ನಂದಾ ದೀಪವನ್ನೇ ಆರಿಸಿಬಿಟ್ಟಿದ್ದಾನೆ. ತನ್ನ ಸ್ನೇಹಿತನ ಜೊತೆ ಸೇರಿ ದುಡ್ಡಿನ ಆಸೆಗೆ ನಿಶ್ಚಿತ್ನನ್ನು ಕಿಡ್ನಾಪ್ ಮಾಡಿ ನಂತರ ಅದು ಪೊಲೀಸರಿಗೆ ಗೊತ್ತಾಗಿದೆ ಅಂತ ತಿಳಿದು ಆ ಬಾಲಕನನ್ನ ಕೊಂದು ಸುಟ್ಟು ಹಾಕಿಬಿಟ್ಟಿದ್ದಾನೆ.
ಇಂಥಹ ಪಾಪಿಗಳಿಂದ ಒಳ್ಳೆ ಡ್ರೈವರ್ಗಳಿಗೂ ಕೆಟ್ಟ ಹೆಸರು. ಒಂದು ನಂಬಿಕೆ ಇಟ್ಟು ತಮ್ಮ ಕುಟುಂಬದ ಸದಸ್ಯರನ್ನಾಗಿ ಮಾಡಿಕೊಂಡಿರುತ್ತಾರೆ. ಆದರೆ ಇಂಥಹ ಕಿರಾತಕರು ಆ ನಂಬಿಕೆಗೆ ಕೊಳ್ಳಿ ಇಟ್ಟುಬಿಡುತ್ತಾರೆ. ಇದೇ ಕಾರಣಕ್ಕೆ ನಾವು ಹೇಳಿದ್ದು ಇದು ಕಲಿಯುಗ. ಯಾರನ್ನೂ ನಂಬಬೇಡಿ ಅಂತ ಹೇಳಿದ್ದು. ಇದಾಗಿತ್ತು ಇವತ್ತಿನ ಎಫ್.ಐ.ಆರ್.