ಪವನ್ ಕಲ್ಯಾಣ್ ಪತ್ನಿ, ರಷ್ಯನ್ ಮೂಲದ ಅನ್ನಾ ಈಗ ತಿರುಪತಿ ಬಾಲಾಜಿಯ ಭಕ್ತೆ!
ಆಂಧ್ರ ಡಿಸಿಎಂ, ಪವರ್ ಸ್ಟಾರ್ ಪವನ್ ಕಲ್ಯಾಣ್ ಪುತ್ರ ಸಿಂಗಾಪುರದ ಅಗ್ನಿ ಅವಘಡದಲ್ಲಿ ಸಿಲುಕಿದ್ದು ಇಡೀ ಮೆಗಾ ಫ್ಯಾಮಿಲಿಯನ್ನ ಆತಂಕದಲ್ಲಿ ಮುಳುಗುವಂತೆ ಮಾಡಿತ್ತು. ಆದ್ರೆ ಪವನ್ ಕಲ್ಯಾಣ್ ಪುತ್ರ ಸುರಕ್ಷಿತವಾಗಿ ಮನೆಗೆ ಮರಳಿದ್ದಾನೆ. ಮಗನನ್ನ ಪಾರು ಮಾಡು ಅಂತ ತಿರುಪತಿ ತಿಮ್ಮಪ್ಪನ ಬಳಿ ಹರಕೆ ಕಟ್ಟಿದ್ದ ಪವನ್ ಪತ್ನಿ ಅನ್ನಾ ತಿರುಪತಿಯಲ್ಲಿ ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ. ಕಳೆದ 8 ನೇ ತಾರೀಖು ಸಿಂಗಾಪುರದಲ್ಲಿ ನಡೆದ ಒಂದು ಅಗ್ನಿ ದುರಂತ ಇಡೀ ಮೆಗಾ ಫ್ಯಾಮಿಲಿಯನ್ನ ಆತಂಕದಲ್ಲಿ ಮುಳುಗಿಸಿತ್ತು. ಯಾಕಂದ್ರೆ ಪವನ್ ಕಲ್ಯಾಣ್ರ 8 ವರ್ಷದ ಪುತ್ರ ಮಾರ್ಕ್ ಶಂಕರ್ ಬೇಸಿಕೆ ರಜೆಯ ಶಿಭಿರದಲ್ಲಿ ಭಾಗಿಯಾಗೋದಕ್ಕೆ ಸಿಂಗಾಪುರ್ಗೆ ತೆರಳಿದ್ದ. ಮಾರ್ಕ್ ಇದ್ದ ಕಟ್ಟಡವೇ ಅಗ್ನಿ ಅನಾಹುತಕ್ಕೆ ಸಿಲುಕಿ 20 ಹೆಚ್ಚು ಜನರ ಬದುಕು ಪ್ರಾಣಾಪಾಯಕ್ಕೆ ಸಿಲುಕಿತ್ತು.
ಅದೃಷ್ಟ ವಶಾತ್ ಅಲ್ಲಿ ಸಿಲುಕಿದ್ದ 22 ಜನರನ್ನ ರಕ್ಷಣೆ ಮಾಡಲಾಗಿದೆ. ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಗ್ನಿ ಅವಘಡದ ವಿಷ್ಯ ತಿಳಿಯುತ್ತಲೇ ಪತ್ನಿ ಮತ್ತು ಪುತ್ರಿ ಜೊತೆಗೆ ಸಿಂಗಾಪುರ್ ಫ್ಲೈಟ್ ಏರಿದ್ದ ಪವನ್ ಕಲ್ಯಾಣ್, ಶನಿವಾರ ರಾತ್ರಿ ಮಗನನ್ನ ಮರಳಿ ಹೈದ್ರಾಬಾದ್ಗೆ ಕರೆತಂದಿದ್ರು. ಶನಿವಾರ ರಾತ್ರಿ ಹೈದ್ರಾಬಾದ್ ಏರ್ಪೋರ್ಟ್ಗೆ ಬಂದಿಳಿದ ಪವನ್ ಮಗನನ್ನ ಗಟ್ಟಿಯಾಗಿ ತಬ್ಬಿಕೊಂಡು ಕರೆತಂದಿದ್ರು. ಪವನ್ ಮಗನನ್ನ ತಬ್ಬಿ ಹಿಡಿದಿದ್ದ ರೀತಿಯಲ್ಲೇ ಅವರ ಆತಂಕ, ನೋವು., ಪ್ರೀತಿ ಎಲ್ಲವೂ ಎದ್ದು ಕಾಣ್ತಾ ಇತ್ತು. ಇನ್ನೂ ಪವನ್ ಪತ್ನಿ ಅನ್ನಾ ಅಂತೂ ಮಗ ಸುರಕ್ಷಿತವಾಗಿ ಮರಳಿ ಬರಲಿ ಅಂತ ತಿರುಪತಿ ತಿಮ್ಮಪ್ಪನ ಬಳಿ ಹರಕೆ ಕಟ್ಟಿದ್ರಂತೆ. ಮಗ ಮರಳಿ ಬಂದಿದ್ದೇ ತಡ ನೇರವಾಗಿ ತಿರುಪತಿಗೆ ತೆರಳಿ ಮುಡಿಕೊಟ್ಟು ಹರಕೆ ತೀರಿಸಿದ್ದಾರೆ.
ಹೌದು ಪವನ್ ಕಲ್ಯಾಣ್ ಪತ್ನಿ ಅನ್ನಾ ಮೂಲತಃ ರಷ್ಯಾದವರು. ಹುಟ್ಟಿನಿಂದ ಕ್ರಿಶ್ಚಿಯನ್ ಧರ್ಮೀಯಳಾದ ಅನ್ನಾ ಪವನ್ ಕಲ್ಯಾಣ್ರನ್ನ ವರಿಸಿದ ಮೇಲೆ ಸನಾತನ ಧರ್ಮದ ಶಕ್ತಿಗೆ ಮಾರುಹೋದರು. ಈಗ ಅಪ್ಪಟ ಹಿಂದೂ ಧರ್ಮಿಯರೇ ಆಗಿಬಿಟ್ಟಿದ್ದಾರೆ ಅನ್ನಾ. ಸೀರೆಯುಟ್ಟು ಅರಿಶಿನ ಕುಂಕುಮ ಧರಿಸಿ ಅಪ್ಪಟ ಭಾರತೀಯ ನಾರಿಯಂತೆಯೇ ಕಾಣಿಸಿಕೊಳ್ತಾರೆ ಅನ್ನಾ. ಪವನ್ ಕಲ್ಯಾಣ್ ಅದೆಂಥಾ ಆಸ್ತಿಕ ಅನ್ನೋದು ಗೊತ್ತೇ ಇದೆ. ತಿರುಪತಿ ಬಾಲಾಜಿ ದೇಗುಲದ ಪ್ರಸಾದದ ವಿಚಾರದಲ್ಲಿ ಅಪಚಾರ ಆಗಿದೆ ಅಂತ ಗೊತ್ತಾದಾಗ ಖುದ್ದು ಡಿಸಿಎಂ ಆಗಿರೋ ಪವನ್ , ತಿರುಪತಿಯನ್ನ ಸ್ವಚ್ಚಗೊಳಿಸಿ, ಉಪವಾಸವಿದ್ದು ಬಾಲಾಜಿ ಸೇವೆ ಮಾಡಿದ್ರು. ಇಂಥಾ ಪವನ್ ಕಲ್ಯಾಣ್ರ ಪತ್ನಿ ಅನ್ನಾ ಕೂಡ ತಿರುಪತಿ ಬಾಲಾಜಿ ಸ್ವಾಮಿಯ ಭಕ್ತೆಯಾಗಿದ್ದಾರೆ. ಮಗನನ್ನ ಬದುಕಿಸಿಕೊಡು ಅಂತ ಆ ಶ್ರೀನಿವಾಸನಲ್ಲಿ ಹರಕೆ ಕಟ್ಟಿದ್ರು. ಶ್ರೀನಿವಾಸ ಭಕ್ತೆಯ ಕೋರಿಕೆ ಈಡೇರಿಸಿದ. ಅಂತೆಯೇ ತಾಯಿ ಮುಡಿ ಕೊಟ್ಟು ಮಗನನ್ನ ಉಳಿಸಿಕೊಟ್ಟ ಭಗವಂತನಿಗೆ ಧನ್ಯವಾದ ಅರ್ಪಿಸಿದ್ದಾರೆ.