ಕಡಿಮೆ ಬೆಲೆಯ ಟೂರ್ ಪ್ಯಾಕೇಜ್ ಆಸೆಗೆ ಥೈಲ್ಯಾಂಡ್ಗೆ ಹೋದ ಮೂವರು ಭಾರತೀಯ ಯುವಕರನ್ನು ಅಪಹರಿಸಿ, ಒಂದು ವಾರ ಕಾಲ ಹಿಂಸೆ ನೀಡಲಾಗಿದೆ. ಥಾಯ್ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕರನ್ನು ರಕ್ಷಿಸಿದ್ದು, ಈ ಪ್ರಕರಣದಲ್ಲಿ ಐವರು ಭಾರತೀಯರನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ನ ಹಿಂದೆ ಪಾಕಿಸ್ತಾನಿ ಪ್ರಜೆಯ ಕೈವಾಡವಿರುವುದು ತನಿಖೆಯಿಂದ ತಿಳಿದುಬಂದಿದೆ.
ಬ್ಯಾಂಕಾಕ್: ಥೈಲ್ಯಾಂಡ್ಗೆ ಟ್ರಿಪ್ ಹೋಗಿದ್ದ ಮೂವರು ಭಾರತೀಯ ಯುವಕರನ್ನು ಒಂದು ಗ್ಯಾಂಗ್ ಕಿಡ್ನ್ಯಾಪ್ ಮಾಡಿ, ಒಂದು ವಾರ ಕಾಲ ಹಿಂಸೆ ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ಥಾಯ್ ಪೊಲೀಸರು ಈ ಗ್ಯಾಂಗ್ ಅನ್ನು ಹಿಡಿದು, ಯುವಕರನ್ನು ರಕ್ಷಿಸಿದ್ದಾರೆ. ಪಟ್ಟಾಯದ ಮನೆಯೊಂದರಲ್ಲಿ ಒತ್ತೆಯಾಳಾಗಿದ್ದ ಯುವಕರನ್ನು ಪೊಲೀಸರು ಸುರಕ್ಷಿತವಾಗಿ ಹೊರತಂದಿದ್ದಾರೆ.
ಕಡಿಮೆ ಬೆಲೆಯಲ್ಲಿ ಒಂದು ವಾರದ ಟೂರ್ ಪ್ಯಾಕೇಜ್ ಆಫರ್ ನೋಡಿ ಈ ಯುವಕರು ಥೈಲ್ಯಾಂಡ್ಗೆ ಬಂದಿದ್ದರು. ಆದರೆ, ಬ್ಯಾಂಕಾಕ್ ಏರ್ಪೋರ್ಟ್ನಲ್ಲಿ ಇಳಿದ ತಕ್ಷಣವೇ ಅವರು ಈ ಗ್ಯಾಂಗ್ನ ಬಲೆಗೆ ಬಿದ್ದಿದ್ದಾರೆ. ಈ ಗ್ಯಾಂಗ್ ಯುವಕರನ್ನು ಅಪಹರಿಸಿ, 24 ಲಕ್ಷ ಥಾಯ್ ಬಹ್ತ್ (ಸುಮಾರು 70 ಲಕ್ಷ ರೂಪಾಯಿ) ಹಣಕ್ಕಾಗಿ ಬೇಡಿಕೆ ಇಟ್ಟು ಕ್ರೂರವಾಗಿ ಹಿಂಸೆ ನೀಡಿದೆ. ಅಚ್ಚರಿ ಎಂದರೆ, ಈ ಪ್ರಕರಣದಲ್ಲಿ ಬಂಧಿತರಾದ ಐವರೂ ಭಾರತೀಯರೇ ಆಗಿದ್ದಾರೆ.
ಟ್ಯಾಕ್ಸಿ ಮೂಲಕ ಹೋದವರ ಕಿಡ್ನಾಪ್
ಬ್ಯಾಂಕಾಕ್ನಲ್ಲಿ ವಿಮಾನ ಇಳಿದ ಮೂವರು ಯುವಕರು, ಟ್ಯಾಕ್ಸಿ ಮೂಲಕ ಪಟ್ಟಾಯಕ್ಕೆ ಹೋಗಿದ್ದಾರೆ. ಅಲ್ಲಿನ ಒಂದು ರೆಸ್ಟೋರೆಂಟ್ನಲ್ಲಿ ಆರೋಪಿಗಳನ್ನು ಭೇಟಿಯಾಗಿದ್ದಾರೆ. ನಂತರ, ಆರೋಪಿಗಳು ಅವರನ್ನು ಒಂದು ಬಾಡಿಗೆ ಮನೆಗೆ ಕರೆದೊಯ್ದು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಪೊಲೀಸರು ದಾಳಿ ಮಾಡಿದಾಗ ಯುವಕರ ಕೈ-ಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಹಲವು ದಿನಗಳಿಂದ ಅವರಿಗೆ ಊಟ, ನೀರು ಕೊಡದೆ, ತಲೆಕೆಳಗಾಗಿ ನೇತುಹಾಕಿ ಕ್ರೂರವಾಗಿ ಥಳಿಸಲಾಗಿತ್ತು. ಅಲ್ಲದೆ, ಅವರ ಸಂಬಂಧಿಕರಿಗೆ ವಿಡಿಯೋ ಕಾಲ್ ಮಾಡಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ, ಥಾಯ್ ಪೊಲೀಸರು ಬ್ಯಾಂಕಾಕ್ನಲ್ಲಿ ಐವರು ಭಾರತೀಯರನ್ನು ಬಂಧಿಸಿದ್ದಾರೆ. ಅವತಾರ್ ಸಿಂಗ್, ಜಗ್ಜಿತ್ ಸಿಂಗ್, ರಾಮಬಾಲಕ್ ಕುಮಾರ್, ಸುಖ್ಬೀರ್ ಸಿಂಗ್ ಮತ್ತು ಕುಲ್ರಾ ಸಿಂಗ್ ಬಂಧಿತ ಆರೋಪಿಗಳು. ಆದರೆ, ಈ ಗ್ಯಾಂಗ್ನ ಹಿಂದೆ ಪಾಕಿಸ್ತಾನಿ ಪ್ರಜೆಗಳ ಕೈವಾಡವಿದೆ ಎಂದು ಪೊಲೀಸರು ಹೇಳಿದ್ದಾರೆ.
ಒಬ್ಬ ಪಾಕಿಸ್ತಾನಿ ಪ್ರಜೆ ಈ ಕ್ರಿಮಿನಲ್ ಗ್ಯಾಂಗ್ಗೆ ನಿರ್ದೇಶನ ನೀಡುತ್ತಿದ್ದ ಎಂದು ಬಂಧಿತರು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಆಕರ್ಷಕ ಪ್ಯಾಕೇಜ್ ಹೆಸರಿನಲ್ಲಿ ಪ್ರವಾಸಿಗರನ್ನು ಬಲೆಗೆ ಬೀಳಿಸಿ, ಅವರನ್ನು ಅಪಹರಿಸಿ ಹಣ ವಸೂಲಿ ಮಾಡುವ ಹೊಸ ದಂಧೆ ಈ ಘಟನೆಯಿಂದ ಬಯಲಾಗಿದೆ.


