ಲಂಕಾ ವಿರುದ್ಧದ ಟೆಸ್ಟ್ನಲ್ಲಿ ಕೇವಲ 1 ಸೆಕೆಂಡ್ ಬಾಕಿ ಇರುವಾಗ ನಾಯಕ ಶುಭಮನ್ ಗಿಲ್ ತೆಗೆದುಕೊಂಡ ಚಾಣಾಕ್ಷ ಡಿಆರ್ಎಸ್ ನಿರ್ಧಾರದಿಂದ ಲಂಕಾ ಬ್ಯಾಟರ್ ಪೆವಿಲಿಯನ್ ಸೇರಿದರು. ಈ ಕುರಿತ ಸ್ಟೋರಿ ಇಲ್ಲಿದೆ..
ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ತಮ್ಮ ಚಾಣಾಕ್ಷ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ. ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ಗಿಲ್ ಕೇವಲ ಒಂದು ಸೆಕೆಂಡ್ ಬಾಕಿ ಇರುವಾಗ ತೆಗೆದುಕೊಂಡ ಡಿಆರ್ಎಸ್ (DRS) ನಿರ್ಧಾರವು ಲಂಕಾ ಬ್ಯಾಟರ್ ಪೆವಿಲಿಯನ್ ಸೇರುವಂತೆ ಮಾಡಿದ್ದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಏನಿದು ಘಟನೆ?
ಶ್ರೀಲಂಕಾದ ಎರಡನೇ ಇನ್ನಿಂಗ್ಸ್ನ 8ನೇ ಓವರ್ನಲ್ಲಿ ಘಟನೆ ಸಂಭವಿಸಿದೆ. ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಎಸೆದ ಚೆಂಡು ನೇರವಾಗಿ ಲಂಕಾದ ಪಾಸಿಂದು ಸೂರ್ಯಬಂಡಾರ ಅವರ ಪ್ಯಾಡ್ಗೆ ಬಡಿಯಿತು. ಬೌಲರ್ ಹಾಗೂ ತಂಡದ ಆಟಗಾರರು ಎಲ್ಬಿಡಬ್ಲ್ಯೂಗಾಗಿ ಬಲವಾದ ಮನವಿ ಮಾಡಿದರೂ ಅಂಪೈರ್ ಮಾತ್ರ 'ನಾಟ್ ಔಟ್' ಎಂದು ತಲೆ ಅಲ್ಲಾಡಿಸಿದರು.
ಕೊನೆಯ ಕ್ಷಣದ ಸಾಹಸ
ಅಂಪೈರ್ ತೀರ್ಪಿನಿಂದ ಗೊಂದಲಕ್ಕೊಳಗಾದ ಭಾರತೀಯ ಆಟಗಾರರು ರಿವ್ಯೂ ತೆಗೆದುಕೊಳ್ಳಬೇಕೋ ಬೇಡವೋ ಎಂದು ಚರ್ಚಿಸುತ್ತಿದ್ದರು. ಡಿಆರ್ಎಸ್ ಸಮಯ ಮುಗಿಯಲು ಕೇವಲ ಒಂದು ಸೆಕೆಂಡ್ ಬಾಕಿ ಇದ್ದಾಗ, ಶುಭಮನ್ ಗಿಲ್ ತಕ್ಷಣವೇ ರಿವ್ಯೂಗೆ ಸನ್ನೆ ಮಾಡಿದರು. ಟಿವಿ ರಿಪ್ಲೇನಲ್ಲಿ ಚೆಂಡು ನೇರವಾಗಿ ಲೆಗ್ ಸ್ಟಂಪ್ಗೆ ಬಡಿಯುತ್ತಿರುವುದು ಸ್ಪಷ್ಟವಾಗಿ ಕಂಡಿತು. ಕೂಡಲೇ ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು. ಗಿಲ್ ಅವರ ಈ 'ಲಾಸ್ಟ್ ಸೆಕೆಂಡ್' ಮಾಸ್ಟರ್ ಸ್ಟ್ರೋಕ್ ನೋಡಿ ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ.
ಅಪರೂಪದ ದಾಖಲೆ ಬರೆದ ಸೂರ್ಯಬಂಡಾರ
ಇನ್ನು ದಿನೇಶ್ ಚಂಡಿಮಾಲ್ ಗಾಯಗೊಂಡ ಹಿನ್ನೆಲೆಯಲ್ಲಿ ಅವರ ಬದಲಿಗೆ 'ಕನ್ಕ್ಯುಶನ್ ಸಬ್ಸ್ಟಿಟ್ಯೂಟ್' ಆಗಿ ಕ್ರೀಸ್ಗೆ ಬಂದ ಸೂರ್ಯಬಂಡಾರ ಒಂದು ಅಪರೂಪದ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಬದಲಿ ಆಟಗಾರನಾಗಿ ಪದಾರ್ಪಣೆ ಮಾಡಿದ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
ದಿನದ ಎರಡನೇ ಅವಧಿಯಲ್ಲಿ ಭಾರತ 193 ರನ್ಗಳಿಗೆ ತನ್ನ ಎರಡನೇ ಇನ್ನಿಂಗ್ಸ್ ಮುಗಿಸಿತು. ರಿಷಬ್ ಪಂತ್ ಸ್ಫೋಟಕ 66 ರನ್ ಸಿಡಿಸಿ ಮಿಂಚಿದರೆ, ದೇವದತ್ ಪಡಿಕ್ಕಲ್ (44) ಮತ್ತು ಕೆಎಲ್ ರಾಹುಲ್ (35) ಉತ್ತಮ ಸಾಥ್ ನೀಡಿದರು. ಒಟ್ಟಾರೆಯಾಗಿ ಭಾರತ ಲಂಕಾ ಗೆಲುವಿಗೆ 372 ರನ್ಗಳ ಕಠಿಣ ಗುರಿ ನೀಡಿದೆ. ನಾಲ್ಕನೇ ದಿನದ ಅಂತ್ಯಕ್ಕೆ ಲಂಕಾ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.


