ಅಯೋಧ್ಯೆ ರಾಮಮಂದಿರದ ಕಾಣಿಕೆ ಕಳವು ಪ್ರಕರಣದಲ್ಲಿ, ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಮಾಜಿ ಸದಸ್ಯ ಅನಿಲ್ ಮಿಶ್ರಾಗೆ ವಿಶೇಷ ತನಿಖಾ ತಂಡ (ಎಸ್ಐಟಿ) ಕ್ಲೀನ್ಚಿಟ್ ನೀಡಿದೆ. ತನಿಖಾ ವರದಿಯನ್ನು ಟ್ರಸ್ಟ್ಗೆ ಹಸ್ತಾಂತರಿಸಲಾಗಿದ್ದು, ಶೀಘ್ರ ತನಿಖೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಕೂಡ ಸೂಚಿಸಿದೆ.
ಅಯೋಧ್ಯಾ: ಅಯೋಧ್ಯೆ ರಾಮಮಂದಿರ ಕಾಣಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ವಿಶೇಷ ತನಿಖಾ ತಂಡ (ಎಸ್ಐಟಿ) ಕ್ಲೀನ್ಚಿಟ್ ನೀಡಿದೆ. ಇದೇ ವೇಳೆ, ಟ್ರಸ್ಟ್ನ ಮಾಜಿ ಸದಸ್ಯ ಅನಿಲ್ ಮಿಶ್ರಾರನ್ನೂ ಎಸ್ಐಟಿ ಆರೋಪಮುಕ್ತಗೊಳಿಸಿದೆ.
ದೇಗುಲದ ಹುಂಡಿ ಕಳವು ಪ್ರಕರಣ ತೀವ್ರ ಸಂಚಲನ ಮೂಡಿಸಿದ ಬೆನ್ನಲ್ಲೇ, ರಾಯ್ ಹಾಗೂ ಮಿಶ್ರಾ ಕಳೆದ ಜೂ.27ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ಬಗ್ಗೆ ತನಿಖೆ ಪೂರ್ಣಗೊಳಿಸಿದ್ದ ಎಸ್ಐಟಿ, ಅಂತಿಮ ವರದಿಯನ್ನು ಇತ್ತೀಚೆಗೆ ಉತ್ತರ ಪ್ರದೇಶದ ಗೃಹ ಇಲಾಖೆಗೆ ಸಲ್ಲಿಸಿತ್ತು. ಈಗ ಗೃಹ ಇಲಾಖೆಯು ವರದಿಯನ್ನು ಹೆಚ್ಚಿನ ಕ್ರಮಕ್ಕಾಗಿ ಟ್ರಸ್ಟ್ಗೆ ಹಸ್ತಾಂತರಿಸಿದೆ.
ವಿಚಾರಣೆ ವೇಳೆ ರಾಯ್, ದೇಣಿಗೆ ಕಳ್ಳತನದಲ್ಲಿ ತನ್ನ ಪಾತ್ರವೇನೂ ಇಲ್ಲ. ಅಲ್ಲದೆ, ತನ್ನ ದೂರಿನ ಅನ್ವಯವೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಐಟಿಗೆ ಮನವರಿಕೆ ಮಾಡಿಕೊಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಹುಂಡಿ ಎಣಿಕೆ ಮಾಡುತ್ತಿದ್ದ 8 ಜನರನ್ನು ಪೊಲೀಸರು ಬಂಧಿಸಿದ್ದರು.
ರಾಯ್, ಮಿಶ್ರಾ ಮತ್ತೆ ಸಕ್ರಿಯ
ತಮ್ಮ ಮೇಲೆ ಆರೋಪ ಕೇಳಿಬಂದ ಬೆನ್ನಲ್ಲೇ ರಾಯ್ ಹಾಗೂ ಮಿಶ್ರಾ ಹುದ್ದೆ ತೊರೆದು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು. ಆದರೆ ಇದೀಗ ಅಯೋಧ್ಯೆಯಲ್ಲಿ ಮತ್ತೆ ಸಕ್ರಿಯರಾಗಿದ್ದು, ಸಭೆಗಳನ್ನು ನಡೆಸುತ್ತಿದ್ದಾರೆ ಹಾಗೂ ಸಾಧು-ಸಂತರೊಂದಿಗೆ ಸಂವಾದ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Tailoring: ಖಾಸಗಿ ಶಾಲೆಗಳೇ ಸಮವಸ್ತ್ರ ಪೂರೈಕೆ: ಟೈಲರ್ಗಳ ಬದುಕು ಅಯೋಮಯ! ಆದಾಯ ಕುಸಿತ
ಅಯೋಧ್ಯೆ ಹುಂಡಿ ಲೂಟಿ: ಶೀಘ್ರ ತನಿಖೆ ಪೂರ್ಣಕ್ಕೆ ಸುಪ್ರೀಂಕೋರ್ಟ್ ಸೂಚನೆ
ನವದೆಹಲಿ: ಅಯೋಧ್ಯೆ ರಾಮಮಂದಿರ ಹುಂಡಿ ಹಣ ಕಳವು ಪ್ರಕರಣದ ತನಿಖೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಎಸ್ಐಟಿಗೆ ಸುಪ್ರೀಂ ಕೋರ್ಟ್ ತ್ವರಿತ ಸೂಚಿಸಿದೆ. ಇದೇ ವೇಳೆ ಇದುವರೆಗಿನ ತನಿಖಾ ಪ್ರಗತಿಯ ಕುರಿತು ವರದಿ ಸಲ್ಲಿಸುವಂತೆಯೂ ಎಸ್ಐಟಿಗೆ ಕೋರ್ಟ್ ನಿರ್ದೇಶಿಸಿದೆ. ಈ ವರದಿಯನ್ನು ಪರಿಶೀಲಿಸಿದ ನಂತರ ರಾಮಮಂದಿರಕ್ಕೆ ಭಕ್ತರು ನೀಡುವ ದೇಣಿಗೆಗಳ ನಿರ್ವಹಣೆಯಲ್ಲಿ ಸುಧಾರಣೆಗಳಿಗಾಗಿ ಕೆಲವು ನಿರ್ದೇಶನಗಳನ್ನು ಕೋರ್ಟ್ ನೀಡಬಹುದು ಎಂದು ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: ಸಿಎಂ ವಿಜಯ್ ನಿತ್ಯ 20 ಗಂಟೆ ಹೇಗೆ ಕೆಲಸ ಮಾಡ್ತಾರೆ? ಗುಟ್ಟು ಬಿಚ್ಚಿಟ್ಟ ಸಚಿವ ಆಧವ್

