ನಿರಂಜನ್‌ ಸುಧೀಂದ್ರ, ರಚನಾ ಇಂದರ್‌ ಅಭಿನಯದ ‘ಸ್ಪಾರ್ಕ್‌’ ಸಿನಿಮಾದ ‘ಮಧುರ ಮುಗುಳುನಗೆ’ ಹಾಡು ಬಿಡುಗಡೆಯಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾರ್ಲಿಂಗ್‌ ಕೃಷ್ಣ, ನಿರಂಜನ್‌ ಅವರ ಡ್ಯಾನ್ಸ್‌ ಹಾಗೂ ಆ್ಯಕ್ಷನ್‌ ಪ್ರತಿಭೆಯನ್ನು ಮೆಚ್ಚಿ ಅವರನ್ನು ‘ಕನ್ನಡದ ಹೃತಿಕ್‌ ರೋಷನ್‌’ ಎಂದು ಕರೆದಿದ್ದಾರೆ.

ಕನ್ನಡ ಚಿತ್ರರಂಗದ ಯುವ ನಟ ನಿರಂಜನ್‌ ಸುಧೀಂದ್ರ ಅವರ ನಟನೆ, ಡ್ಯಾನ್ಸ್‌ ಹಾಗೂ ಆ್ಯಕ್ಷನ್‌ ಸ್ಕಿಲ್ಸ್‌ಗೆ ಡಾರ್ಲಿಂಗ್‌ ಕೃಷ್ಣ ಫಿದಾ ಆಗಿದ್ದಾರೆ. ನಿರಂಜನ್‌ ಅವರನ್ನು “ಕನ್ನಡದ ಹೃತಿಕ್‌ ರೋಷನ್‌” ಎಂದು ಕರೆದಿರುವ ಕೃಷ್ಣ, ಅವರ ಪ್ರತಿಭೆಯನ್ನು ಹಾಡಿ ಹೊಗಳಿದ್ದಾರೆ.

ನಿರಂಜನ್‌ ಸುಧೀಂದ್ರ ಹಾಗೂ ರಚನಾ ಇಂದರ್‌ ಜೋಡಿಯಾಗಿ ನಟಿಸಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಸ್ಪಾರ್ಕ್‌’ನ ಹೊಸ ಹಾಡು ‘ಮಧುರ ಮುಗುಳುನಗೆ’ ಇದೀಗ ಬಿಡುಗಡೆಯಾಗಿದೆ. ನಾಯಕ-ನಾಯಕಿಯ ನಡುವಿನ ರೊಮ್ಯಾಂಟಿಕ್‌ ಕೆಮಿಸ್ಟ್ರಿಯನ್ನು ತೋರಿಸುವ ಈ ಹಾಡಿಗೆ ಸಂಗೀತ ಸಂಯೋಜಿಸಿರುವುದು ಸಚಿನ್‌ ಬಸ್ರೂರು. ಹಾಡಿಗೆ ಅವರೇ ಧ್ವನಿ ನೀಡಿದ್ದಾರೆ. ಪ್ರಮೋದ್‌ ಮರಾವಂತೆ ಸಾಹಿತ್ಯ ಬರೆದಿದ್ದಾರೆ.

ನಿರಂಜನ್‌ರನ್ನು ‘ಕನ್ನಡದ ಹೃತಿಕ್‌ ರೋಷನ್‌’ ಎಂದ ಕೃಷ್ಣ!

‘ಮಧುರ ಮುಗುಳುನಗೆ’ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ, ಕಲಾವಿದರು, ಕುಟುಂಬ ಸದಸ್ಯರು ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಚಿತ್ರತಂಡಕ್ಕೆ ಶುಭ ಹಾರೈಸಲು ಆಗಮಿಸಿದ್ದ ಡಾರ್ಲಿಂಗ್‌ ಕೃಷ್ಣ, ನಿರಂಜನ್‌ ಸುಧೀಂದ್ರ ಅವರ ಬಗ್ಗೆ ವಿಶೇಷವಾಗಿ ಮಾತನಾಡಿದರು.

ನಿರಂಜನ್‌ ಅವರ ಡ್ಯಾನ್ಸ್‌ ಹಾಗೂ ಆ್ಯಕ್ಷನ್‌ ವಿಡಿಯೋಗಳನ್ನು ತಾವು ಸೋಶಿಯಲ್‌ ಮೀಡಿಯಾದಲ್ಲಿ ಗಮನಿಸಿದ್ದಾಗಿ ಹೇಳಿದ ಕೃಷ್ಣ, “ನಿರಂಜನ್‌ ಡ್ಯಾನ್ಸ್‌ ಹಾಗೂ ಆ್ಯಕ್ಷನ್‌ ಎರಡರಲ್ಲೂ ತರಬೇತಿ ಪಡೆದಿದ್ದಾರೆ. ಅವರನ್ನು ಕನ್ನಡ ಚಿತ್ರರಂಗದ ಹೃತಿಕ್‌ ರೋಷನ್‌ ಎಂದು ಕರೆಯಬಹುದು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ‘ಮಧುರ ಮುಗುಳುನಗೆ’ ಹಾಡಿನಲ್ಲಿ ನಿರಂಜನ್‌ ಹಾಗೂ ರಚನಾ ಇಂದರ್‌ ನಡುವಿನ ಕೆಮಿಸ್ಟ್ರಿ ಕೂಡ ಚೆನ್ನಾಗಿ ಮೂಡಿಬಂದಿದೆ ಎಂದು ಕೃಷ್ಣ ಹೇಳಿದರು.

ನಿರಂಜನ್‌ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು

ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ ಕೂಡ ನಿರಂಜನ್‌ ಜೊತೆಗಿನ ತಮ್ಮ ಒಡನಾಟದ ಬಗ್ಗೆ ಮಾತನಾಡಿದರು. ಮದುವೆಯ ಬಳಿಕ ಉಪೇಂದ್ರ ಅವರ ಕುಟುಂಬಕ್ಕೆ ಬಂದಾಗ ನಿರಂಜನ್‌ ಚಿಕ್ಕ ಹುಡುಗನಾಗಿದ್ದನ್ನು ನೆನಪಿಸಿಕೊಂಡ ಅವರು, ಇದೀಗ ಅವರು ನಾಯಕ ನಟನಾಗಿ ಬೆಳೆಯುತ್ತಿರುವುದನ್ನು ನೋಡಿ ಖುಷಿಯಾಗಿದೆ ಎಂದು ಹೇಳಿದರು.

‘ಮಧುರ ಮುಗುಳುನಗೆ’ ಹಾಡು ಕೂಡ ಪ್ರಿಯಾಂಕಾ ಅವರಿಗೆ ಇಷ್ಟವಾಗಿದೆಯಂತೆ. ಈ ಹಾಡಿನೊಂದಿಗೆ ರೀಲ್ಸ್‌ ಮಾಡುವುದು ಹಿಂದಿನ ‘ಶಕಲಕ’ ಹಾಡಿಗಿಂತ ಸುಲಭವಾಗಿದೆ ಎಂದು ಅವರು ಹೇಳಿದ್ದಾರೆ. ಶೀಘ್ರದಲ್ಲೇ ತಾವು ಹಾಗೂ ಉಪೇಂದ್ರ ಈ ಹಾಡಿಗೆ ರೀಲ್ಸ್‌ ಮಾಡುವುದಾಗಿ ಪ್ರಿಯಾಂಕಾ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಮಗನಿಗೆ ಕೂಡ ಆಗಾಗ ನಿರಂಜನ್‌ ಅವರಿಂದ ಕಲಿಯುವಂತೆ ಹೇಳುತ್ತೇನೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಹೊಸ ತಲೆಮಾರಿನ ಹೀರೋಗಳ ಅಗತ್ಯ

‘ಸ್ಪಾರ್ಕ್‌’ ಚಿತ್ರದ ನಿರ್ದೇಶಕ ದಯಾಳ್‌ ಪದ್ಮನಾಭನ್‌, ನಿರಂಜನ್‌ ಅವರನ್ನು ಹೊಸ ತಲೆಮಾರಿನ ಭರವಸೆಯ ನಾಯಕ ಎಂದು ಬಣ್ಣಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೊಸ ಪೀಳಿಗೆಯ ನಟರು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯವಿರುವ ಸಂದರ್ಭದಲ್ಲಿ ನಿರಂಜನ್‌ ಅವರಂತಹ ಪ್ರತಿಭಾವಂತ ಯುವ ನಟರ ಆಗಮನ ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.

‘ಸ್ಪಾರ್ಕ್‌’ ಸಿನಿಮಾದಲ್ಲಿ ನಿರಂಜನ್‌ ಮಾಧ್ಯಮ ಪ್ರತಿನಿಧಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಚನಾ ಇಂದರ್‌ ಎಂಬಿಬಿಎಸ್‌ ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ. ಈ ಹಾಡೇ ತಾವು ಸಿನಿಮಾಗಾಗಿ ಶೂಟ್‌ ಮಾಡಿದ ಮೊದಲ ಹಾಡು ಎಂದು ರಚನಾ ಇಂದರ್‌ ತಿಳಿಸಿದ್ದಾರೆ.

ವಿಲನ್‌ ಆಗಿ ಲವ್ಲಿ ಸ್ಟಾರ್‌ ಪ್ರೇಮ್!

ಸಿನಿಮಾದ ಮತ್ತೊಂದು ವಿಶೇಷವೆಂದರೆ ಲವ್ಲಿ ಸ್ಟಾರ್‌ ಪ್ರೇಮ್‌ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ಈ ಬಗ್ಗೆ ಪ್ರೇಮ್‌ ಅವರ ಪತ್ನಿ ಜ್ಯೋತಿ ಮಾತನಾಡಿದ್ದು, ಆ್ಯಕ್ಷನ್‌ ಪಾತ್ರದಲ್ಲಿ ನಟಿಸಬೇಕೆಂಬುದು ಪ್ರೇಮ್‌ ಅವರ ಬಹುದಿನದ ಆಸೆಯಾಗಿತ್ತು ಎಂದು ಹೇಳಿದ್ದಾರೆ. ಈ ಪಾತ್ರಕ್ಕಾಗಿ ಈ ಹಿಂದೆ ಎಂದಿಗೂ ಸಿಗರೇಟ್‌ ಸೇದದ ಪ್ರೇಮ್‌, ಪಾತ್ರದ ಬೇಡಿಕೆಗೆ ತಕ್ಕಂತೆ ಸಿಗರೇಟ್‌ ಸೇದಿದ್ದಾರೆ ಎಂದು ಜ್ಯೋತಿ ತಿಳಿಸಿದ್ದಾರೆ. ಡಿ. ಮಹಾಂತೇಶ್‌ ಹಂದ್ರಾಳ್‌ ನಿರ್ದೇಶನದ ‘ಸ್ಪಾರ್ಕ್‌’ ಸಿನಿಮಾ ಸೆಪ್ಟೆಂಬರ್‌ 25ರಂದು ಕರ್ನಾಟಕದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.