ಗೌರಿ-ಗಣೇಶ ಹಬ್ಬದ ಪ್ರಯುಕ್ತ, ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಕೆಎಸ್ಆರ್ಟಿಸಿ 2,400 ಹೆಚ್ಚುವರಿ ವಿಶೇಷ ಬಸ್ಗಳನ್ನು ಓಡಿಸಲು ನಿರ್ಧರಿಸಿದೆ. ಸೆಪ್ಟೆಂಬರ್ 11 ರಿಂದ ಬೆಂಗಳೂರಿನಿಂದ ಹಾಗೂ ಸೆಪ್ಟೆಂಬರ್ 14 ರಿಂದ ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ಈ ಬಸ್ಗಳು ಸಂಚರಿಸಲಿವೆ. ಪ್ರಯಾಣಿಕರು ಆನ್ಲೈನ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿ ರಿಯಾಯಿತಿಗಳನ್ನು ಪಡೆಯಬಹುದು.
ಬೆಂಗಳೂರು (ಸೆ.04): ದೇಶದ ಪ್ರಮುಖ ಹಬ್ಬಗಳಲ್ಲಿ ಒಂದಾದ ಗೌರಿ-ಗಣೇಶ ಹಬ್ಬಕ್ಕೆ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಭರ್ಜರಿ ಸಿಹಿ ಸುದ್ದಿ ನೀಡಿದೆ. ಹಬ್ಬ ಹಾಗೂ ಸತತ ವಾರಾಂತ್ಯದ ರಜೆಗಳು ಜತೆಯಾಗಿ ಬಂದಿರುವುದರಿಂದ ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸಲು ಕೆಎಸ್ಆರ್ಟಿಸಿ ಬರೋಬ್ಬರಿ 2,400 ಹೆಚ್ಚುವರಿ ವಿಶೇಷ ಬಸ್ಗಳನ್ನು ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ.
ಸೆಪ್ಟೆಂಬರ್ 12 ಮತ್ತು 13ರಂದು ವಾರಾಂತ್ಯ (ಶನಿವಾರ, ಭಾನುವಾರ) ಹಾಗೂ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಇರುವುದರಿಂದ ರಾಜಧಾನಿ ಬೆಂಗಳೂರಿನಿಂದ ಲಕ್ಷಾಂತರ ಜನರು ತಮ್ಮ ಸ್ವಂತ ಊರುಗಳತ್ತ ಮುಖ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಮವು ಸಕಲ ಸಿದ್ಧತೆ ಮಾಡಿಕೊಂಡಿದೆ.
ವಿಶೇಷ ಬಸ್ಗಳ ಸಂಚಾರ ವೇಳಾಪಟ್ಟಿ:
ಬೆಂಗಳೂರಿನಿಂದ ನಿರ್ಗಮನ: ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 13 ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ವಿಶೇಷ ಬಸ್ಗಳು ಕಾರ್ಯಾಚರಣೆ ನಡೆಸಲಿವೆ.
ಮರಳಿ ಬೆಂಗಳೂರಿಗೆ ಆಗಮನ: ಹಬ್ಬ ಮುಗಿಸಿ ಮರಳಿ ಬೆಂಗಳೂರಿಗೆ ಬರುವವರಿಗಾಗಿ ಸೆಪ್ಟೆಂಬರ್ 14 ರಿಂದ ರಾಜ್ಯದ ವಿವಿಧ ಸ್ಥಳಗಳಿಂದ ಹಾಗೂ ಅಂತರರಾಜ್ಯಗಳಿಂದ ಬೆಂಗಳೂರಿಗೆ ವಿಶೇಷ ಬಸ್ಗಳ ಸೇವೆ ಲಭ್ಯವಿರಲಿದೆ.
ಯಾವೆಲ್ಲಾ ಮಾರ್ಗಗಳಲ್ಲಿ ಬಸ್ ಸಂಚಾರ?
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರ ಸೇರಿದಂತೆ ನಗರದ ಪ್ರಮುಖ ನಿಲ್ದಾಣಗಳಿಂದ ಈ ಕೆಳಗಿನ ಮಾರ್ಗಗಳಿಗೆ ಬಸ್ಗಳು ಸಂಚರಿಸಲಿವೆ:
ರಾಜ್ಯದ ಪ್ರಮುಖ ಸ್ಥಳಗಳು: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ವಿಜಯಪುರ, ಕಲಬುರಗಿ, ಮೈಸೂರು ಹಾಗೂ ಉತ್ತರ ಕರ್ನಾಟಕದ ಭಾಗಗಳು.
ಹೊರ ರಾಜ್ಯಗಳು: ತಿರುಪತಿ, ವಿಜಯವಾಡ, ಹೈದರಾಬಾದ್, ಚೆನ್ನೈ, ಕೊಯಮತ್ತೂರು, ಊಟಿ, ಪಣಜಿ ಮುಂತಾದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲಿದೆ.
ಮುಂಗಡ ಟಿಕೆಟ್ ಬುಕಿಂಗ್ ಮತ್ತು ರಿಯಾಯಿತಿ:
ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸುಗಮಗೊಳಿಸಲು www.ksrtc.karnataka.gov.in ವೆಬ್ಸೈಟ್ ಅಥವಾ KSRTC ಮೊಬೈಲ್ ಆಪ್ ಮೂಲಕ ಮುಂಗಡವಾಗಿ ಆನ್ಲೈನ್ ಟಿಕೆಟ್ ಕಾಯ್ದಿರಿಸಬಹುದು.
ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಒಂದೇ ಟಿಕೆಟ್ನಲ್ಲಿ ಮುಂಗಡ ಬುಕಿಂಗ್ ಮಾಡಿದರೆ ಶೇಕಡ 5 ರಷ್ಟು ರಿಯಾಯಿತಿ ಸಿಗಲಿದೆ.
ಹೋಗುವ ಮತ್ತು ಬರುವ (Round Trip) ಟಿಕೆಟ್ ಅನ್ನು ಒಟ್ಟಿಗೆ ಬುಕ್ ಮಾಡಿದರೆ, ಮರಳುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ಲಭ್ಯವಿರಲಿದೆ.
ಕೊನೆ ಕ್ಷಣದ ನೂಕುನುಗ್ಗಲು ಮತ್ತು ಖಾಸಗಿ ಬಸ್ಗಳ ದುಬಾರಿ ದರ ತಪ್ಪಿಸಲು ಪ್ರಯಾಣಿಕರು ಮುಂಚಿತವಾಗಿಯೇ ಕೆಎಸ್ಆರ್ಟಿಸಿಯ ಅಧಿಕೃತ ವೆಬ್ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಿ, ಸುರಕ್ಷಿತವಾಗಿ ಪ್ರಯಾಣಿಸುವಂತೆ ನಿಗಮವು ಮನವಿ ಮಾಡಿದೆ.


