
ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
ಬಿಡದಿ ಟೌನ್ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯು ತೀವ್ರಗೊಂಡಿದ್ದು, ಇದನ್ನು ವಿರೋಧಿಸಿದ ರೈತರ ಮೇಲೆ ಪೊಲೀಸರು 'ಕೊಲೆ ಯತ್ನ' ಪ್ರಕರಣ ದಾಖಲಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರೈತರ ಪರ ಹೋರಾಟಕ್ಕಿಳಿದಿದ್ದಾರೆ
ರಾಮನಗರ/ಬೆಂಗಳೂರು: ಬಿಡದಿ ಸ್ಮಾರ್ಟ್ ಸಿಟಿ ಟೌನ್ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯು ಈಗ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಭೂಸ್ವಾಧೀನವನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ವಿರುದ್ಧ ಪೊಲೀಸರು 'ಕೊಲೆ ಯತ್ನ'ದಂತಹ ಗಂಭೀರ ಪ್ರಕರಣಗಳನ್ನು ದಾಖಲಿಸುತ್ತಿದ್ದಂತೆ, ಬಿಡದಿಯ ಭೂ ಹೋರಾಟಕ್ಕೆ ರಾಜಕೀಯ ಬಣ್ಣ ಬಂದಿದೆ. ರೈತರ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜಂಟಿ ಹೋರಾಟಕ್ಕೆ ಧುಮುಕಿದ್ದು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಡದಿ ಟೌನ್ಶಿಪ್ ಯೋಜನೆಗಾಗಿ ಭೂಮಿ ಸರ್ವೆ ಮಾಡಲು ಹೋದ ಜಲಮಂಡಳಿ ಮತ್ತು ಕಂದಾಯ ಅಧಿಕಾರಿಗಳ ತಂಡವನ್ನು ರೈತರು ಅಡ್ಡಗಟ್ಟಿದಾಗ ಗಲಾಟೆ ಆರಂಭವಾಗಿದೆ. ರಾಮನಗರ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಮುರಳಿ ನೀಡಿದ ದೂರಿನ ಆಧಾರದ ಮೇಲೆ ಬಿಡದಿ ಪೊಲೀಸರು ರೈತರ ವಿರುದ್ಧ 2 ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದಾರೆ.
ಭೂಸ್ವಾಧೀನದ ಪರವಾಗಿರುವ ರೈತರ ಜಮೀನಿನ ಸರ್ವೆಗೆ ಅಧಿಕಾರಿಗಳು ಹೋದಾಗ, ಯೋಜನೆಯನ್ನು ವಿರೋಧಿಸುತ್ತಿರುವ ರೈತರು ಮತ್ತು ಮಹಿಳೆಯರು ಪೊರಕೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ನಿಮ್ಮನ್ನು ಜೀವಂತ ಬಿಡುವುದಿಲ್ಲ ಎಂದು ಕ್ರಿಮಿನಲ್ ಬೆದರಿಕೆ ಹಾಕಿ, ಕಲ್ಲಿನಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.