ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ

ಬೆಂಗಳೂರಿನಲ್ಲಿ ಪ್ರೇಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡು ಘೋರ ಘಟನೆಗಳು ನಡೆದಿವೆ. ತಮ್ಮ ಪ್ರೇಯಸಿಯೊಂದಿಗೆ ಓಡಿಹೋದ ತಪ್ಪಿಗೆ ಅರ್ಚಕ ಅಣ್ಣನನ್ನು ಅಪಹರಿಸಿ ಚಿತ್ರಹಿಂಸೆ ನೀಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ, ಸ್ನೇಹಿತನ ಪ್ರೀತಿಗೆ ಸಹಾಯ ಮಾಡಲು ಹೋದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

Share this Video
  • FB
  • Linkdin
  • Whatsapp

ಬೆಂಗಳೂರು: ಪ್ರೀತಿ ಎಂಬುದು ಪ್ರಾಣ ಉಳಿಸಬೇಕು, ಆದರೆ ಇತ್ತೀಚಿನ ದಿನಗಳಲ್ಲಿ ಅದೇ ಪ್ರೀತಿ ಸಂಬಂಧಗಳ ನಡುವೆ ವಿಷ ಬಿತ್ತುತ್ತಿದೆ. ತಮ್ಮನೊಬ್ಬ ಪ್ರೇಯಸಿಯೊಂದಿಗೆ ಊರು ಬಿಟ್ಟು ಓಡಿ ಹೋದರೆ, ಆತ ಮಾಡಿದ ತಪ್ಪಿಗೆ ಅಮಾಯಕ ಅಣ್ಣನನ್ನೇ ಕಿಡ್ನ್ಯಾಪ್ ಮಾಡಿ ಮೃಗೀಯವಾಗಿ ಚಿತ್ರಹಿಂಸೆ ನೀಡಿದ ಘಟನೆ ಬೆಂಗಳೂರಿನ ಕನಕಪುರ ರಸ್ತೆಯ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

ದೇವಸ್ಥಾನದಿಂದ ಮನೆಗೆ ಹೋಗುವಾಗ ಅಟ್ಯಾಕ್ 

ಸಂತ್ರಸ್ತ ಕೊಟ್ರೇಶಿ ವೃತ್ತಿಯಲ್ಲಿ ದೇವಸ್ಥಾನದ ಅರ್ಚಕರು. ದೇವಸ್ಥಾನ, ಪೂಜೆ ಪುನಸ್ಕಾರ ಅಂತಲೇ ಬದುಕುತ್ತಿದ್ದವರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಒಂದು ದಿನ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಹಠಾತ್ತನೆ ಬಂದ ಗ್ಯಾಂಗ್ ಒಂದು ಇವರನ್ನು ಅಪಹರಿಸಿದೆ. ಅಲ್ಲಿಂದ ಶುರುವಾಗಿದ್ದೇ ನರಕಯಾತನೆ.

ತಮ್ಮನ ಪ್ರೇಮಕ್ಕೆ ಅಣ್ಣ ಬಲಿಪಶು! 

ಕೊಟ್ರೇಶಿ ಅವರ ತಮ್ಮ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಇಬ್ಬರೂ ಮನೆಯವರ ವಿರೋಧದ ನಡುವೆಯೂ ವಾರದ ಹಿಂದೆಯೇ ಊರು ಬಿಟ್ಟು ಎಸ್ಕೇಪ್ ಆಗಿದ್ದರು. ಈ ವಿಷಯದಿಂದ ಕೆರಳಿದ ಯುವತಿಯ ಪೋಷಕರು ಮತ್ತು ಸಂಬಂಧಿಕರು, ತಮ್ಮನ ಇರುವಿಕೆಯನ್ನು ಪತ್ತೆಹಚ್ಚಲು ಅಣ್ಣ ಕೊಟ್ರೇಶಿಯನ್ನು ಗುರಿಯಾಗಿಸಿಕೊಂಡರು. ‘ನಿಮ್ಮ ತಮ್ಮನನ್ನು ಕರೆಸು, ಇಲ್ಲದಿದ್ದರೆ ನಿನ್ನ ಪ್ರಾಣ ತೆಗೆಯುತ್ತೇವೆ’ ಎಂದು ಬೆದರಿಸಿ ಕೈಕಾಲು ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ.

ವಿಡಿಯೋ ಮಾಡಿ ಕುಟುಂಬಕ್ಕೆ ಕಳುಹಿಸಿದ ಕಿಡ್ನ್ಯಾಪರ್ಸ್ 

ಕಿಡ್ನ್ಯಾಪ್ ಮಾಡಿದ ಆರೋಪಿಗಳು ಕ್ರೌರ್ಯದ ಪರಮಾವಧಿ ಮೆರೆದಿದ್ದಾರೆ. ಅರ್ಚಕ ಕೊಟ್ರೇಶಿಗೆ ಹೊಡೆಯುತ್ತಿರುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ಅದನ್ನು ಅವರ ಕುಟುಂಬ ಸದಸ್ಯರಿಗೆ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ವಿಡಿಯೋ ಕಂಡು ಬೆಚ್ಚಿಬಿದ್ದ ಕುಟುಂಬಸ್ಥರು ತಕ್ಷಣ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಕಾರ್ಯಪ್ರವೃತ್ತರಾಗುತ್ತಿದ್ದಂತೆ ವಿಷಯ ತಿಳಿದ ಕಿಡ್ನ್ಯಾಪರ್ಸ್ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಕುಟುಂಬದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸ್ನೇಹಿತನ ಪ್ರೀತಿಗಾಗಿ ಪ್ರಾಣಬಿಟ್ಟ ಅಮಾಯಕ ಅಭಿಷೇಕ 

ಇನ್ನೊಂದು ಮನಕಲಕುವ ಘಟನೆಯಲ್ಲಿ, ಸ್ನೇಹಿತನ ಪ್ರೇಮ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಅಮಾಯಕ ಯುವಕ ಅಭಿಷೇಕ ಎಂಬಾತ ಬಲಿಯಾಗಿದ್ದಾನೆ. ಸಿಸಿ ಕ್ಯಾಮರಾ ಅಳವಡಿಸುವ ಕೆಲಸ ಮಾಡುತ್ತಿದ್ದ ಅಭಿಷೇಕ, ಗೆಳೆಯನ ಪ್ರೀತಿಗೆ ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದನು. ಆವತ್ತೊಂದು ದಿನ ಕೆಲಸಕ್ಕೆ ಹೋದವನು ಮರಳಿ ಬರಲೇ ಇಲ್ಲ.

ಕೊನೆಗೆ ರೈಲ್ವೆ ಹಳಿಗಳ ಮೇಲೆ ಆತನ ಮೃತದೇಹ ಪತ್ತೆಯಾಗಿದೆ. ಸಾವಿಗೂ ಮುನ್ನ ಆತ ಮಾಡಿದ ಆಡಿಯೋ ರೆಕಾರ್ಡಿಂಗ್ ಈಗ ಪೊಲೀಸರ ಕೈ ಸೇರಿದ್ದು, ಅದರಲ್ಲಿ ತನಗೆ ನೀಡಲಾದ ಟಾರ್ಚರ್ ಬಗ್ಗೆ ವಿವರಿಸಿದ್ದಾನೆ ಎನ್ನಲಾಗಿದೆ. ಪ್ರೀತಿ ಎನ್ನುವ ಹೆಸರಿನಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ಸಮಾಜಕ್ಕೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.

Related Video